Kundapra.com ಕುಂದಾಪ್ರ ಡಾಟ್ ಕಾಂ

ಲಕ್ಷಾಂತರ ರೂ. ಮೌಲ್ಯದ ಚಿನ್ನ ಎಗರಿಸಿದ್ದ ಕುಖ್ಯಾತ ಕಳ್ಳರ ಬಂಧಿಸಿದ ಕುಂದಾಪುರ ಪೊಲೀಸರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯಿಂದ ಚಿನ್ನಾಭರಣ ಕಳವು ಮಾಡಿದ ಆರೋಪದಲ್ಲಿ ಕುಂದಾಪುರ ಪೊಲೀಸರು ಇಬ್ಬರು ಅಂತರ್ ರಾಜ್ಯ ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಪುಣೆಯ ಧನರಾಜ್ ವಿಜಯ ಪರ್ಮಾರ್ (42) ಮತ್ತು ಅಜಯ್ ಸಿಂಗ್ ಕಿಶೋರ್ ಸಾಲುಂಕ್ (23) ಬಂಧಿತ ಆರೋಪಿಗಳು. ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ರೂ 1 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನ. 29 ರಂದು ಓರಾ ಫೈನ್ ಜುವೆಲ್ಲರಿ ಸಂಸ್ಥೆಯು ಕೊಟೇಶ್ವರ ಯುವ ಮೆರೀಡಿಯನ್ ಬ್ಯಾಕ್ವೆಟ್ ಹಾಲಿನಲ್ಲಿ ಆಯೋಜಿಸಿದ್ದ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮಧ್ಯಾಹ್ನದ ವೇಳೆ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನು ಗ್ರಾಹಕರ ಸೋಗಿನಲ್ಲಿ ಬಂದು 2 ಚಿನ್ನದ ಬಳೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಸಿಸಿಟಿವಿ ಫೂಟೇಜ್ ಪರಿಶೀಲನೆ ವೇಳೆ ತಿಳಿದು ಬಂದಿದೆ. ಕಳವಾದ 43 ಗ್ರಾಂ ಚಿನ್ನದ ಬಳೆಗಳ ಮೌಲ್ಯ ರೂ 2.86 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಇವರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ ಮತ್ತು ಕುಂದಾಪುರ ಸಿಪಿಐ ಗೋಪಿಕೃಷ್ಣ ಇವರ ನಿರ್ದೇಶನದಲ್ಲಿ ಕುಂದಾಪುರ ಪಿಎಸೈ ಸದಾಶಿವ ಆರ್ ಗವರೋಜಿ ಹಾಗೂ ತನಿಖಾ ಪಿಎಸೈ ರಮೇಶ್ ಆರ್ ಪವಾರ್ ನೇತೃತ್ವದ ತಂಡದಲ್ಲಿ ಪ್ರೊಬೇಶನರಿ ಪಿ ಎಸೈಗಳಾದ ಚಂದ್ರಕಲಾ ಪತ್ತಾರ, ಜಯಶ್ರೀ ಹುನ್ನೂರ, ಎಎಸೈ ಸುಧಾಕರ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಶಿವಾನಂದ, ದಿನೇಶ, ನಿತಿನ್ ಮತ್ತು ಸಿಬಂದಿಯವರದಾದ ಸಂತೋಷ್ ಕುಮಾರ್ ಕೆಯು ಮತ್ತು ಸಚಿನ್ ಶೆಟ್ಟಿ ರಾಮ ಪೂಜಾರಿ, ರವಿ ನಾಯ್ಕ ಕಾರ್ಯಾಚರಣೆಯಲ್ಲಿದ್ದರು.

Exit mobile version