ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸಂಸ್ಕೃತ ಉಪನ್ಯಾಸಕಿ ಸುಲೇಖಾ ಆರೀಫ ಅವರು ಕೊಡುಗೆಯಾಗಿ ನೀಡಿದ ನಲವತ್ತೆಂಟು ಸಾವಿರ ರೂಪಾಯಿ ಮೊತ್ತದ ಮೂವತ್ತು ಖುರ್ಚಿಗಳನ್ನು ಕಾಲೇಜಿಗೆ ಹಸ್ತಾಂತರಿಸಲಾಯಿತು.
ಈ ಸರಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ ಜಿ ಯವರು ವಹಿಸಿದ್ದರು. ಕುರ್ಚಿಯನ್ನು ಹಸ್ತಾಂತರಿಸಿ ಮಾತನಾಡಿದ ಸುಲೇಖಾ ಆರೀಫರವರು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನೀಡುವ ಎಲ್ಲ ರೀತಿಯ ಸೇವೆ ಮತ್ತು ಸಹಕಾರಗಳು ದೇವರಿಗೆ ಮಾಡುವ ಸೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಭುಜಂಗ ಶೆಟ್ಟಿ, ಚಂದ್ರಶೇಖರ, ಶಿವಾನಂದ ನಾಯಕ ಮತ್ತು ಪೂರ್ಣಿಮಾ ನಾಯಕ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ನಾಯಕ ವಂದಿಸಿದರು.