Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ವಲಯದ 5 ಸಿಎಸ್‌ಸಿ ಕೇಂದ್ರಗಳ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಅಡಿಯಲ್ಲಿ ರಾಜ್ಯಾದ್ಯಂತ ಆರಂಭಿಸಲಾಗುತ್ತಿರುವ ಕಾಮನ್ ಸರ್ವೀಸ್ ಸೆಂಟರ್‌ನ 5 ಸೇವಾ ಕೇಂದ್ರಗಳು ಎಸ್‌ಕೆಡಿಆರ್‌ಡಿಪಿ ಬೈಂದೂರು ವಲಯ ಕಛೇರಿಯಲ್ಲಿ ಬುಧವಾರ ಲೋಕಾರ್ಪಣೆಗೊಂಡಿತು.

ಈ ಸಂದರ್ಭ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ. ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸೇವೆಗಳು ಜನಸಾಮಾನ್ಯರಿಗೆ ದೊರೆಯುವಂತಾಗಬೇಕು ಎಂಬ ನೆಲೆಯಲ್ಲಿ ಸಿಎಸ್‌ಸಿ ತೆರೆಯಲಾಗಿದೆ. ಸರಕಾರ ನಿಗದಿಪಡಿಸಿದ ದರದಲ್ಲಿಯೇ ಜನರಿಗೆ ಸೇವೆ ನೀಡುವ ಉದ್ದೇಶವಿದ್ದು, ಯಾರೊಂದಿಗೆ ಸ್ವರ್ಧೆಗಿಳಿಯುವ ಇರಾದೆ ಇಲ್ಲ. ಆರಂಭದಲ್ಲಿ ಸ್ವ-ಸ್ವಹಾಯ ಸಂಘದ ಸದಸ್ಯರಿಗೆ ಇ-ಶ್ರಮ್ ಕಾರ್ಡ್ ಮಾಡಿಕೊಡಲು ಆದ್ಯತೆ ನೀಡಲಾಗುತ್ತಿದೆ ಎಂದ ಅವರು ರಾಜ್ಯದಲ್ಲಿ ಒಟ್ಟು 6,000 ಸಿಎಸ್ಸಿ ಕೇಂದ್ರ ಆರಂಭವಾಗುತ್ತಿದ್ದು, ಬೈಂದೂರು ತಾಲೂಕಿನಲ್ಲಿ ಒಟ್ಟು 39 ಸಿಎಸ್ಸಿ ಕೇಂದ್ರಗಳನ್ನು ತೆರೆಯಲಾಗಿದೆ. ಮುಂದಿನ ದಿನದಲ್ಲಿ ಇನ್ನೂ 20 ಕಛೇರಿಗಳು ಆರಂಭವಾಗಲಿದೆ ಎಂದರು.

ಎಸ್‌ಕೆಡಿಆರ್‌ಡಿಪಿ, ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ, ಬೈಂದೂರು ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ. ಪೂಜಾರಿ ಅವರು ಬೈಂದೂರು ವಲಯದ ಸಿಎಸ್‌ಸಿ ಕೇಂದ್ರ ಲೋಕಾರ್ಪಣೆಗೊಳಿಸಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೇವೆಗಳು ದೊರೆಯುವಂತೆ ಆಗಬೇಕು ಎಂಬ ಉದ್ದೇಶದಿಂದ ಆರಂಭಿಸಲಾದ ಸೇವಾ ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸೇವೆಗಳನ್ನು ಒಳಗೊಳ್ಳಲಿದೆ ಎಂದರು.

ಕಟ್ಟಡ ಮಾಲಿಕರಾದ ನಾಗಪ್ಪ ಎನ್. ರಾವ್, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ, ಎಸ್‌ಕೆಡಿಆರ್‌ಡಿಪಿ ಬೈಂದೂರು ವಲಯ ಮೇಲ್ವಿಚಾರಕ ಎಸ್. ರಾಮಚಂದ್ರ, ಸೇವಾ ಪ್ರತಿನಿಧಿ, ಒಕ್ಕೂಟದ ಅಧ್ಯಕ್ಷರು, ವಿ.ಎಲ್.ಇಗಳು ಉಪಸ್ಥಿತರಿದ್ದರು.

Exit mobile version