Kundapra.com ಕುಂದಾಪ್ರ ಡಾಟ್ ಕಾಂ

ಹೆದ್ದಾರಿ ಅವ್ಯವಸ್ಥೆ ವಿರುದ್ಧ ಬಿಜೆಪಿಗರಿಂದ ಪ್ರತಿಭಟಿಸುವ ಎಚ್ಚರಿಕೆ – ಇದು ಯಾರ ವಿರುದ್ಧ, ಯಾರ ಪ್ರತಿಭಟನೆ: ಕುಂದಾಪುರ ಕಾಂಗ್ರೆಸ್ ಪ್ರಶ್ನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: '
ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಯ ಅವ್ಯವಸ್ಥೆಯ ಕುರಿತು ಅದೆಷ್ಟು ಬಾರಿ ಜನಪ್ರತಿನಿಧಿಗಳು ಸೂಚಿಸಿದರೂ ಕೆಲಸ ಆಗಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಜನರ ಬೇಡಿಕೆಗೆ ಸ್ಪಂದನೆವೇ ದೊರೆಯುತ್ತಿಲ್ಲ ಎಂದರೆ ಪ್ರತಿಭಟನೆಯೊಂದೆ ನಮಗಿರುವ ದಾರಿ ಇದು ಜನಪ್ರತಿನಿಧಿ ಸರ್ಕಾರದ ವಿರುದ್ದವಲ್ಲ. ಕಾಮಗಾರಿ ನಡೆಯಬೇಕು ಸರ್ವಿಸ್ ರಸ್ತೆ ಹೊಂಡಗಳು ಮುಚ್ಚಬೇಕು ಎನ್ನುವುದಷ್ಟೆ ನಮ್ಮ ಆಗ್ರಹ. ಇದಕ್ಕಾಗಿ ಹತ್ತು ದಿನಗಳ ಗಡುವು ಕೊಡುತ್ತೇವೆ. ಇದರೊಳಗೆ ಸರಿಯಾಗದೆ ಇದ್ದರೆ 50 ಹೊಂಡಗಳಲ್ಲಿ ಬಾಳೆಗಿಡ ನೆಡುತ್ತೇವೆ’ ಎಂದು ಕುಂದಾಪುರ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಪತ್ರಿಕಾ ಹೇಳಿಕೆಯನ್ನು ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಅವರು, ‘ಕುಂದಾಪುರ ಬಿಜೆಪಿ ಅಧ್ಯಕ್ಷರು ನೀಡಿರುವ ಪತ್ರಿಕಾ ಹೇಳಿಕೆಯನ್ನು ಕುಂದಾಪುರ ಕಾಂಗ್ರೆಸ್ ಸ್ವಾಗತಿಸುತ್ತದೆ. ಹಾಗೆಯೇ ಕಾಂಗ್ರೆಸ್ ಮತ್ತಿತರ ಸಮಾನಮನಸ್ಕ ಸಂಘಟನೆಗಳು ಈ ಕುರಿತು ಹಲವಾರು ಬಾರಿ ಹೆದ್ದಾರಿ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಕೂಡ ಈ ತನಕವೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಕುಂದಾಪುರ ಪುರಸಬೆಯಲ್ಲಿ ಬಿಜೆಪಿ ಆಡಳಿತವೇ ಇದೆ. ಕುಂದಾಪುರದಲ್ಲಿ ಬಿಜೆಪಿ ಶಾಸಕರು, ಸಂಸದರೆ ಇದ್ದಾರೆ. ಬಿಜೆಪಿಯ ಉಸ್ತುವಾರಿ ಮಂತ್ರಿಗಳಿದ್ದಾರೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಅಧಿಕಾರ ಇದ್ದೂ ಕೂಡ ಹೊಂಡ ಮುಚ್ಚುವ ಕೆಲಸ ಆಗದಿದ್ದರೆ ಅದರ ವೈಫಲ್ಯದ ಹೊಣೆಯನ್ನು ಸ್ಥಳೀಯ ಶಾಸಕರು, ಸಂಸದರು, ಉಸ್ತುವಾರಿ ಮಂತ್ರಿಗಳು ಮತ್ತು ಸರ್ಕಾರವೇ ಹೊರಬೇಕಾಗುತ್ತದೆ. ಅಧಿಕಾರಿಗಳ ಮೇಲೆ ಹಿಡಿತವಿಲ್ಲವಾದರೆ ಇವರುಗಳು ರಾಜೀನಾಮೆ ನೀಡುವುದೇ ಸೂಕ್ತ. ಕುಂದಾಪುರ ಬಿಜೆಪಿ ಈ ಪ್ರತಿಭಟನೆಯ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಹಾಗಾದರೆ ಇವರ ಹೋರಾಟ ಯಾರ ವಿರುದ್ದ? ಎಂದು ಅವರು ಪ್ರಶ್ನಿಸಿದ್ದಾರೆ.

Exit mobile version