Kundapra.com ಕುಂದಾಪ್ರ ಡಾಟ್ ಕಾಂ

ಕಟ್ಟು ವೆಂಟೆಡ್ ಡ್ಯಾಂ ಅಸಮರ್ಪಕ ನಿರ್ವಹಣೆ: ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಚಕ್ರ ನದಿಗೆ ಕಟ್ಟು-ತೊಪ್ಲು ನಡುವೆ ನಿರ್ಮಿಸಲಾದ ವೆಂಟೆಡ್ ಡ್ಯಾಂ ಸಮರ್ಪಕ ನಿರ್ವಹಣೆ ಇಲ್ಲದೇ ಕೃಷಿಕರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ರೈತರ ಸಮಸ್ಯೆ ಅರಿತು ವಾರದೊಳಗೆ ಡ್ಯಾಂಗೆ ಹಲಗೆ ಅಳವಡಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಇಲಾಖೆಯ ಎದುರು ಪ್ರತಿಭಟನೆ ನಡೆಸುವುದಾಗಿ ಉಡುಪಿ ಜಿಲ್ಲಾ ರೈತ ಸಂಘದ ತ್ರಾಸಿ ವಲಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಎಚ್ಚರಿಸಿದ್ದಾರೆ.

ಹೆಮ್ಮಾಡಿ, ಕಟ್ಬೇಲ್ತೂರು, ಹಕ್ಲಾಡಿ ಪಂಚಾಯತ್ ನಡುವಿನ ಚಕ್ರ ನದಿಗೆ ಕಟ್ಟು ತೊಪ್ಲು ಭಾಗದಲ್ಲಿ ನಿರ್ಮಿಸಲಾಗಿರುವ ಡ್ಯಾಂ ಅಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರೊಂದಿಗೆ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಶನಿವಾರ ಇಲ್ಲಿನ ಡ್ಯಾಂ ಬಳಿ ನಡೆದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು. ವೆಂಟೆಡ್ ಡ್ಯಾಂನಿಂದಾಗಿ ಹಕ್ಲಾಡಿ, ಕುಂದಬಾರಂದಾಡಿ, ನೂಜಾಡಿ, ವಂಡ್ಸೆ, ಕರ್ಕುಂಜೆ, ದೇವಲ್ಕುಂದ, ಕಟ್ಬೇಲ್ತೂರು ಮತ್ತು ಹೆಮ್ಮಾಡಿ ಗ್ರಾಮಗಳಿಗೆ ಕೃಷಿ ನೀರಿನ ಉಪಯೋಗದೊಂದಿಗೆ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ದಿಗಾಗಿ ಯೋಜನೆ ರೂಪಿಸಲಾಗಿದ್ದು, ಇಲಾಖೆಯ ಅಸಮರ್ಪಕ ನಿರ್ವಹಣೆಯಿಂದಾಗಿ ಈ ಭಾಗದ ಯಾವುದೇ ರೈತರಿಗೆ ಅನುಕೂಲವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೃಷಿಭೂಮಿಗೆ ಉಪ್ಪು ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿರುವುದಲ್ಲದೇ ಕುಡಿಯಲು ಯೋಗ್ಯವಾಗಿರುವ ಬಾವಿ ನೀರು ಉಪ್ಪು ಮಿಶ್ರಿತವಾಗಿದೆ. ಪ್ರತೀ ವರ್ಷ ನವೆಂಬರ್ನಲ್ಲಿ ಹಲಗೆ ಹಾಕಿ ಮಣ್ಣು ತುಂಬಿಸಿ ಉಪ್ಪು ನೀರು ನುಗ್ಗುವ ಮೊದಲೇ ಸಿಹಿ ನೀರು ಸಂಗ್ರಹಿಸಬೇಕಾದ ಇಲಾಖೆ ಫೆಬ್ರವರಿ ತಿಂಗಳು ಬಂದರೂ ಇದುವರೆಗೂ ಹಲಗೆ ಅಳವಡಿಸಿಲ್ಲ. ಇರುವ ಹಲಗೆಯನ್ನು ಇಲಾಖೆಯ ಸಹಕಾರದೊಂದಿಗೆ ಕದ್ದು ಮಾರಲಾಗುತ್ತಿದೆ. ಪ್ರತೀ ಡ್ಯಾಂ ನಿರ್ವಹಣೆಗೆ ಲಕ್ಷಾನುಗಟ್ಟಲೇ ಅನುದಾನ ವ್ಯಯವಾಗುತ್ತಿದೆ. ಆದರೆ ಈ ಭಾಗದ ಜನರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ದೂರಿದರು.

ಈ ವೇಳೆಯಲ್ಲಿ ಮಾತನಾಡಿದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ನಾಗಲಿಂಗ ಎಚ್, ಹಲಗೆ ಅಳವಡಿಸುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ ಎಂದು ಇಲ್ಲಿನ ನಿವಾಸಿಯೋರ್ವರು ಶಾಸಕರಿಗೆ ದೂರು ನೀಡಿದ ಹಿನ್ನೆಲೆ ಶಾಸಕರು ಹಲಗೆ ಅಳವಡಿಸಬೇಡಿ ಎಂದು ಮೌಖಿಕವಾಗಿ ಸೂಚಿಸಿದ್ದಾರೆ. ಹೀಗಾಗಿ ಈ ಭಾರಿ ಹಲಗೆ ಅಳವಡಿಸಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶರತ್ ಕುಮಾರ್ ಶೆಟ್ಟಿ, ಸಿಹಿ ನೀರು ಸಂಗ್ರಹಕ್ಕಾಗಿ 12 ಕೋಟಿ ರೂ ಹಣ ಖರ್ಚು ಮಾಡಿ ಮಾಡಿ ವೆಂಟೆಡ್ ಡ್ಯಾಂ ನಿರ್ಮಿಸಿ ಯಾರೋ ಒಬ್ಬರು ಸೊಳ್ಳೆ ಬರುತ್ತದೆ ಹಲಗೆ ಅಳವಡಿಸಬೇಡಿ ಎಂದು ಮೌಖಿಕವಾಗಿ ಹೇಳಿದ ಮಾತ್ರಕ್ಕೆ ಹಲಗೆ ಅಳವಡಿಸದೇ ಇರುವುದು ದುರಂತ. ಹಲಗೆ ಅಳವಡಿಸಬೇಡಿ ಎಂದು ಶಾಸಕರು ಲಿಖಿತವಾಗಿ ಇಲಾಖೆಗೆ ಪತ್ರ ಕೊಟ್ಟಿದ್ದಾರೆಯೆ ಎಂದು ಪ್ರಶ್ನಿಸಿದಲ್ಲದೇ, ಹೆಮ್ಮಾಡಿ ಕಟ್ಬೇಲ್ತೂರು, ಹಕ್ಲಾಡಿ ಮೂರು ಪಂಚಾಯತ್ ಅಧ್ಯಕ್ಷರು ಇಲ್ಲೇ ಇದ್ದಾರೆ. ಈ ಮೂರು ಪಂಚಾಯತ್ನಿಂದ ಯಾರಾದರೂ ಮನವಿ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ಯಾವುದೇ ಕಾಮಗಾರಿ ವಿಚಾರದಲ್ಲಿ ಶಾಸಕರು ಹೇಳಿದ ಕೂಡಲೇ ಆಗುವುದಿಲ್ಲ. ಸಾರ್ವಜನಿಕ ಅದಾಲತ್ ನಡೆಸಿ ಅಲ್ಲಿಂದ ಏನು ಉತ್ತರ ಬರುತ್ತದೆಯೋ ಹಾಗೆ ಮಾಡುವುದು ಕ್ರಮ. ನಾಳೆ ಶಾಸಕರು ಹಲಗೆ ಸ್ಥಳಾಂತರ ಮಾಡಿ ಎಂದರೆ ಹಾಗೆ ಮಾಡುತ್ತೀರಾ. ಅನುದಾನ ಹಾಕಿದ್ದು ಶಾಸಕರಲ್ಲ. ಇದು ಸಾರ್ವಜನಿಕರ ತೆರಿಗೆಯ ಹಣದಿಂದ ನಿರ್ಮಾಣಗೊಂಡ ಡ್ಯಾಂ. ರೈತರ ಬೇಡಿಕೆಯನ್ನು ಮೊದಲು ಈಡೇರಿಸಿ ಎಂದರು.

ಉಡುಪಿ ಜಿಲ್ಲಾ ರೈತ ಸಂಘದ ವಂಡ್ಸೆ ವಲಯ ಅಧ್ಯಕ್ಷ ಅಡಿಕೆಕೊಡ್ಲು ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಜನರು ತೆರಿಗೆ ರೂಪದಲ್ಲಿ ಕಟ್ಟಿದ ಹಣ 12 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಡ್ಯಾಂ ಇದೀಗ ಯಾರಿಗೂ ಪ್ರಯೋಜನವಲ್ಲದಂತಾಗಿದೆ. ಹಲಗೆ ನಿರ್ವಹಣೆಯಲ್ಲಿಯೂ ಸಾಕಷ್ಟು ಭ್ರಷ್ಟಾಚಾರಗಳು ನಡೆದಿವೆ. ಹಲಗೆಗಳನ್ನು ಇಲಾಖೆಯ ಸಹಕಾರದಿಂದಲೇ ಉಳ್ಳವರ ಪಾಲಾಗುತ್ತಿದೆ. ಇದರ ಸಮರ್ಪಕ ನಿರ್ವಹಣೆಗೆ ಮುಂದಿನ ದಿನಗಳಲ್ಲಿ ಸಭೆ ಕರೆದು ಬಳಕೆದಾರರ ಸಮಿತಿ ಮಾಡಿ ಜವಾಬ್ದಾರಿ ತೆಗೆದುಕೊಳ್ಳುವ ಕುರಿತು ಚರ್ಚೆ ನಡೆಸುತ್ತೇವೆ. ಪ್ರತೀ ವರ್ಷ ಶೇಕಡಾ 10 ರಷ್ಟು ಹಲಗೆಗಳು ನಷ್ಟಗಳಾಗುತ್ತವೆ ಎನ್ನುವ ಇಲಾಖೆಯ ಮಾತಿಗೆ ನಮ್ಮ ಸಹಮತ ಇದೆ. ಆದರೆ ಕಳೆದ ವರ್ಷ ಬಂದ ಹಲಗೆ ಈ ವರ್ಷ ಇಲ್ಲ. ಇದಕ್ಕೆ ಇಲಾಖೆಯೇ ನೇರ ಹೊಣೆ ಎಂದರು.

ಪ್ರತಿಭಟನೆಗೂ ಮೊದಲು ತೊಪ್ಲು ಮಂಡಕಟ್ಟು ದೇವಸ್ಥಾನದಿಂದ ಪಾದಯಾತ್ರೆಯ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಡ್ಯಾಂ ಬಳಿ ಬಂದು ಇಲಾಖೆಯ ವಿರುದ್ದ ಆಕ್ರೋಶಗಳನ್ನು ಹೊರಹಾಕಿದರು. ಬಳಿಕ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ನಾಗಲಿಂಗ ಎಚ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಲಾಡಿ ಸಂತೋಷ ಶೆಟ್ಟಿ, ಮುಖಂಡರಾದ ಸತೀಶ್ ಶೆಟ್ಟಿ ಹಕ್ಲಾಡಿ, ಉದಯ್ ಜಿ ಪೂಜಾರಿ, ಹಕ್ಲಾಡಿ ಸಂತೋಷ್ ಶೆಟ್ಟಿ, ಚಂದ್ರ ನಾಯ್ಕ್ ಅಮೃತ್, ಹೆಮ್ಮಾಡಿ ಗ್ರಾ.ಪಂ ಅಧ್ಯಕ್ಷ ಸತ್ಯನಾರಾಯಣ ಶೇರುಗಾರ್, ಹಕ್ಲಾಡಿ ಗ್ರಾ.ಪಂ ಅಧ್ಯಕ್ಷ ಚೇತನ್, ಗೋವರ್ದನ್, ಶ್ರೀನಿವಾಸ ಪೂಜಾರಿ, ಸ್ಥಳೀಯ ಮುಖಂಡರಾದ ಲೋಕೇಶ್ ತೊಪ್ಲು, ನಾಗೇಶ್ ಪೂಜಾರಿ, ಸತೀಶ್ ಕೋಟಿ, ವಿಜಯ್ ಪೂಜಾರಿ, ಉದಯ್ ಶೆಟ್ಟಿ ಯಳೂರು, ಭಾಸ್ಕರ ಶೆಟ್ಟಿ ಎಳೂರು, ಜೋಗ ಪೂಜಾರಿ ಮೊದಲಾದವರು ಇದ್ದರು.

Exit mobile version