Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಪುರಸಭೆ ಸಾಮಾನ್ಯ ಸಭೆ: 23 ವಾರ್ಡ್‌ನಲ್ಲಿಯೂ ಪೂರ್ಣಗೊಳ್ಳದ ಯುಜಿಡಿ ಕಾಮಗಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಸಾಮಾನ್ಯ ಸಭೆಯ ನಡೆಯಿತು.

ಲೋಕಾಯುಕ್ತದಲ್ಲಿ ದೂರು ಇರುವುದರಿಂದ ಯುಜಿಡಿ ಕಾಮಗಾರಿ ಮುಂದುವರಿಸಲು ತೊಡಕಾಗುತ್ತದೆ ಎಂಬ ವಿಷಯದಲ್ಲಿ ಸದಸ್ಯ ಶ್ರೀಧರ ಶೇರೆಗಾರ್ ಹಾಗೂ ಕೆ. ನಿತ್ಯಾನಂದ ಅವರು ಚರ್ಚೆ ಆರಂಭಿಸಿದರು. ಲೋಕಾಯುಕ್ತಕ್ಕೆ ದೂರು ನೀಡಲು ಪುರಸಭೆ ೨೩ ಸದಸ್ಯರು ಬೆಂಬಲ ನೀಡಿದ್ದಾರೆ. ದೂರು ನೀಡಿದ ಆಡಳಿತ ಸದಸ್ಯ ಗಿರೀಶ್ ಜಿ. ಎಸ್., ಭೂಮಿ ವಿಕ್ರಯದಲ್ಲಿ ಹೆಚ್ಚಿಗೆ ಹಣ ಹೋಗಿದೆ ಎನ್ನುವ ಆರೋಪ ಮಾಡಿದ್ದು ಅದರಂತೆ ತನಿಖೆ ಮಾಡಲು ದೂರು ನೀಡಿದ್ದು, ಕಾಮಗಾರಿ ನಿಲ್ಲಸದೇ ಕಾನೂನು ಸಲಹೆಗಾರರ ಮಾಹಿತಿ ಪಡೆದು ಮುಂದುವರಿಯಬಹುದು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಗಿರೀಶ್ ಜಿ. ಎಸ್., ಕಾಮಗಾರಿಯಲ್ಲಿನ ಅಕ್ರಮ ಪ್ರಶ್ನಿಸಿ ದೂರು ನೀಡಿದ್ದೇನೆ. ಹಣ ಹೆಚ್ಚಿಗೆ ಹೋದ ಬಗ್ಗೆ ಅದಕ್ಕೆ ಸಂಬಂಧಪಟ್ಟವರು ಹೊಣೆಯಾಗಲಿದ್ದು, ಹೆಚ್ಚುವರಿ ಹಣ ಯಾರು ಕಾರಣರೋ ಅವರಿಂದ ವಸೂಲು ಮಾಡಲಾಗುತ್ತದೆ. ಇದಕ್ಕೂ ಕಾಮಗಾರಿ ಮುಂದುವರಿಸುವುದಕ್ಕೂ ಸಂಬಂಧಿವಿಲ್ಲ. ಆದ ಅನ್ಯಾಯದ ವಿರುದ್ಧ ದೂರು ನೀಡಿದವರನ್ನೇ ಅಪರಾಧಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಸದಸ್ಯೆ ಪ್ರಭಾವತಿ ಶೆಟ್ಟಿ ನಮ್ಮ ಮನೆ ನೀರಿನ ಸಂಪರ್ಕ ತಪ್ಪಿಸಿ, ಬೇರೆ ಸಂಪರ್ಕ ಮಾಡಲಾಗಿದೆ. ಇದರಿಂದ ನಮಗೆ ನೀರು ಸರಿಯಾಗಿ ಬರುವುದಿಲ್ಲ. ಹಿಂದೆ ಹೇಗಿತ್ತೋ ಹಾಗೆ ಮಾಡಿಕೊಡಬೇಕು. ನಮ್ಮ ಮನೆ ಪೈಪ್ ಲೈನ್ ಬಳಿ ಬೇರೆ ಸಂಪರ್ಕ ಪೈಪ್‌ಗಳ ಜೋಡಣೆ ಕೂಡದು ಎಂದು ಹೇಳಿದರು. ಕಳೆದ ಹತ್ತು ವರ್ಷದ ಹಿಂದ ನನ್ನ ಅವಧಿಯಲ್ಲಿ ಆದ ಕಾಮಗಾರಿ ಈಗ ಪ್ರಶ್ನಿಸಿ ನನ್ನ ಕಡೆ ಬೆರಳು ಮಾಡುವುದು ತರವಲ್ಲ ಎಂದು ಹಿರಿಯ ಸದಸ್ಯ ಮೋಹನದಾಸ್ ಶೆಟ್ಟಿ ಹೇಳಿದರು. ಸದಸ್ಯರ ವೈಯಕ್ತಿಕ ವಿಚಾರಗಳನ್ನು ಸಭೆಯಲ್ಲಿ ಎತ್ತದಂತೆ ಮಾತುಗಳು ಕೇಳಿಬಂದವು.

ಕೋಡಿ ಹಿರಿಯ ನಾಗರಿಕರ ಮನೆಗೆ ನೀರಿನ ಸಂಪರ್ಕ ನೀಡುವಂತೆ ಕಳೆದ ಸಭೆಯಲ್ಲಿ ನಿರ್ಣಯ ಮಾಡಿದ್ದು, ಇನ್ನೂ ಏಕೆ ಸಂಪರ್ಕ ನೀಡಿಲ್ಲ. ನೀರಿನ ಸಂಪರ್ಕ ಅಪೇಕ್ಷಿಸುವವರು ಹಿರಿಯ ನಾಗರಿಕರಾಗಿದ್ದು, ನೀರು ಕೊಡುವುದು ಪುರಸಭೆ ಕರ್ತವ್ಯ. ಹಿರಿಯ ನಾಗರಿಕರ ಮನೆ ಪರಿಸರ ಉಪ್ಪುನೀರಿಂದ ಕೂಡಿದ್ದು, ತಕ್ಷಣ ನೀರಿನ ಸಂಪರ್ಕ ನೀಡುವಂತೆ ಸದಸ್ಯ ಚಂದ್ರಶೇಖರ ಖಾರ್ವಿ, ಕೋಡಿ ಸದಸ್ಯರಾದ ಕಮಲಾ ಮೊಗವೀರ, ಲಕ್ಷ್ಮೀ ಮಂಜುನಾಥ ಪೂಜಾರಿ ಆಗ್ರಹಿಸಿದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉತ್ತರಿಸಿ, ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಸಮಸ್ಯೆ ಆಗಿದೆ. ಮೂಲಭೂತ ಸೌಲಭ್ಯ ನೀಡಲು ಪುರಸಭೆಗೆ ವಿಶೇಷ ಕಾನೂನು ನೆರವಿದ್ದು, ಅದನ್ನು ನ್ಯಾಯಾಲಯದ ಗಮನಕ್ಕೆ ತಂದು ನೀರಿನ ಸಂಪರ್ಕ ನೀಡಲಾಗುತ್ತದೆ ಎಂದು ಹೇಳಿದರು.

ಸ್ವಜಲಧಾರೆ ನೀರಿನ ಸಂಪರ್ಕಕೋಡಿ ಪ್ರದೇಶದಲ್ಲಿ ಉಚಿತ ನೀಡಲಾಗಿದೆ. ಇದರ ಬಗ್ಗೆ ಸಾಕ್ಷಾಧಾರವಿದೆ ಎಂದು ಆಡಳಿತ ಸದಸ್ಯ ರಾಘವೇಂದ್ರ ಖಾರ್ವಿ ಪಶ್ನಿಸಿದ್ದು, ನಾಮನಿರ್ದೇಶಕ ಸದಸ್ಯೆ ಪ್ರಕಾಶ್ ಖಾರ್ವಿ ಬೆಂಬಲಿಸಿ ಮಾತನಾಡಿ, ಕೋಡಿಯಲ್ಲಿ ಉಚಿತ ನೀರಿನ ಸಂಪರ್ಕ ನೀಡುರುವುದು ಗಾಳಿಸುದ್ದಿಯಲ್ಲ. ಇದಕ್ಕೆ ಪೂರಕವಾದ ದಾಖಲೆಯಿದೆ. ಉಚಿತ ನೀರಿನ ಸಂಪರ್ಕ ಕಲ್ಪಿಸಲು ಅವಕಾಶ ಇದೆಯಾ ಎಂದು ಪ್ರಶ್ನಿಸಿದರು. ಉತ್ತರಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸ್ವಜಲ ಜಲಧಾರೆ ಯೋಜನೆ ಪೈಪ್‌ಲೈನ್ ಹಾದು ಹೋಗುವ ಎಲ್ಲಾ ಮನೆಗೂ ಸಂಪರ್ಕ ನೀಡಬೇಕೆಂದಿದ್ದು, ಮನೆಬಳಿ ಟ್ಯಾಪ್ ಹಾಕಲಾಗಿದೆ. ನೀರಿನ ಸಂಪರ್ಕಕ್ಕೆ ೭೦೦ ಅರ್ಜಿ ಬಂದಿದ್ದು, ಅದರಲ್ಲಿ ೨೦೦ ಸಂಪರ್ಕ ಬಾಕಿಯಿದೆ. ಯಾರಿಗೂ ಉಚಿತ ಸಂಪರ್ಕ ನೀಡುವುದಿಲ್ಲ ಸದಸ್ಯರು ಹೇಳಿದ ಉಚಿತ ಸಂಪರ್ಕದ ಬಗ್ಗೆ ಸ್ವಜಲಧಾರೆ ಇಂಜಿನಿಯರ್ ಗಮನಕ್ಕೆ ತರಲಾಗುತ್ತದೆ ಎಂದು ಹೇಳಿದರು.

ನಗರೋತ್ಥಾನ, ಯುಜಿಡಿ ಕಾಮಗಾರಿ ಅಪೂರ್ಣ, ರಸ್ತೆ ಹಾಗೂ ಮೂಲಭೂತ ಸೌಲಭ್ಯದ ಕುರಿತು ಸಭೆಯಲ್ಲಿ ಚರ್ಜೆ ನಡೆಯಿತು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Exit mobile version