Kundapra.com ಕುಂದಾಪ್ರ ಡಾಟ್ ಕಾಂ

ನಾಗೂರು: ಅಪಘಾತದಲ್ಲಿ ಇಬ್ಬರು ಯುವಕರ ದಾರುಣ ಸಾವು

ಬೈಂದೂರು: ಇಲ್ಲಿಗೆ ಸಮೀಪದ ನಾಗೂರು ಎಡಮಾವಿನ ಹೊಳೆ ತಿರುವಿನಲ್ಲಿ ರಾತ್ರಿ ಸಂಭವಿಸಿದ ಬೈಕ್ ಮತ್ತು ಇನ್ಸುಲೇಟರ್ ವ್ಯಾನ್ ನಡುವಿನ ಭೀಕರ ಅಪಘಾತದಲ್ಲಿ ಬೈಕ್ ಸವಾರರೀರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೆರಂಜಾಲು ರವಿ ದೇವಾಡಿಗ (30) ಹಾಗೂ ಕೆರ್ಗಾಲು ಉಮೇಶ ದೇವಾಡಿಗ (27) ಮೃತ ದುರ್ದೈವಿಗಳು

ಘಟನೆಯ ವಿವರ:
ಹೆರಂಜಾಲು ಗ್ರಾಮದ ನಿರ್ಗದ್ದೆ ಮನೆ ನಿವಾಸಿ ಮಾಹಾಲಿಂಗ ಅವರ ಪುತ್ರ ರವಿ ದೇವಾಡಿಗ ಹಾಗೂ ಕೆರ್ಗಾಲು ಗ್ರಾಮದ ಅಜ್ಜರಮನೆ ನಿವಾಸಿ ರಾಮ ದೇವಾಡಿಗ ಅವರ ಪುತ್ರ ಉಮೇಶ್ ದೇವಾಡಿಗ ಪಲ್ಸರ್ ಬೈಕಿನಲ್ಲಿ ನಾಗೂರು ಕಡೆಯಿಂದ ಕಂಬದಕೋಣೆ ಕಡೆಗೆ ತೆರಳುತ್ತಿದ್ದ ವೇಳೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಇನ್ಸುಲೇಟರ್ ವ್ಯಾನ್ ನಾಗೂರು ಎಡಮಾವಿನ ಹೊಳೆ ತಿರುವಿನಲ್ಲಿ ಮುಖಾಮುಖಿ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ರವಿ ಹಾಗೂ ಉಮೇಶ್ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಪೂನಾದಲ್ಲಿ ಉದ್ಯೋಗಿಯಾಗಿದ್ದ ಉಮೇಶ್ ದೇವಾಡಿಗ ಕೆಲವು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದ ರವಿ ದೇವಾಡಿಗ ಅಕ್ಟೋಬರ್ ಮೊದಲ ವಾರದಲ್ಲಿ ದುಬೈಗೆ ತೆರಳುವವರಿದ್ದರು ಎನ್ನಲಾಗಿದೆ. ಅಷ್ಟರಲ್ಲಿಯೇ ಈ ದುರ್ಘಟನೆ ಸಂಭವಿಸಿದೆ. ಇಬ್ಬರೂ ಹತ್ತಿರದ ಸಂಬಂಧಿಗಳು ಎಂದು ತಿಳಿದುಬಂದಿದೆ.

Exit mobile version