Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಪುರಭವನ ನಿರ್ಮಾಣ ಹಾಗೂ ಕ್ರೀಡಾಂಗಣ ಅಭಿವೃದ್ಧಿಯಿಂದ ತಾಲೂಕು ಕೇಂದ್ರಕ್ಕೆ ಜೀವಕಳೆ: ಕೆ. ಬಾಬು ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ಗಾಂಧಿ ಮೈದಾನದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿಯೇ ಪುರಭವನ ನಿರ್ಮಾಣಗೊಳ್ಳುತ್ತಿದೆ. ಇದರೊಂದಿಗೆ ಕ್ರೀಡಾಂಗಣ ಅಭಿವೃದ್ಧಿಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೇ ಅನುಮೋದನೆ ದೊರೆಯಲಿದೆ. ಈ ಯೋಜನೆಗಳ ಅನುಷ್ಠಾನದಿಂದಾಗಿ ತಾಲೂಕು ಕೇಂದ್ರಕ್ಕೆ ಜೀವಕಳೆ ಬಂದಂತಾಗಲಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಹೇಳಿದರು.

Watch Video

ಸೋಮವಾರ ಅವರು ಬೈಂದೂರು ಗಾಂಧಿ ಮೈದಾನದಲ್ಲಿ ನಿರ್ಮಾಣಗೊಳ್ಳಲಿರುವ ಮೊಗೇರಿ ಗೋಪಾಲಕೃಷ್ಣ ಅಡಿಗ ಪುರಭವನ ಹಾಗೂ ಪ್ರಸ್ತಾವನೆಯಲ್ಲಿರುವ ಸುಸಜ್ಜಿತ ಸ್ಟೇಡಿಯಂ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೈಂದೂರು ಗಾಂಧಿ ಮೈದಾನದಲ್ಲಿ ಒಟ್ಟು 4.95 ಎಕರೆ ಜಾಗವಿದ್ದು, ಅದರಲ್ಲಿ 1.5 ಎಕರೆ ಜಾಗವನ್ನು ಪುರಭವನ್ನು ಮೀಸಲಿರಿಸಲಾಗಿದೆ. ಪುರಭವನದಲ್ಲಿ 800 ಮಂದಿ ಕುಳಿತುಕೊಳ್ಳಬಹುದಾದ ಹಾಲ್, ಸುಸಜ್ಜಿತ ಸ್ಟೇಜ್, 400 ಮಂದಿ ಕುಳಿತು ಊಟ ಮಾಡಬಹುದಾದ ಹಾಲ್, ಅಡುಗೆ ಕೋಣೆ, ಪಾರ್ಕಿಂಗ್ ವ್ಯವಸ್ಥೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಪುರಭವನ ನಿರ್ಮಾಣದ ಬಗ್ಗೆ ಮೊದಲೇ ಪತ್ರಿಕಾ ಹೇಳಿಕೆಯಲ್ಲಿ ಸಂಸದರು ತಿಳಿಸಿದ್ದು, ಅನುಮೋದನೆ ದೊರೆತ ಬಳಿಕ ಶಿಲನ್ಯಾಸ ಮಾಡಿದ್ದಾರೆ. ಇದರಲ್ಲಿ ಗೊಂದಲ ಬೇಡ ಎಂದರು.

ಇದರೊಂದಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಸ್ಟೇಡಿಯಂ ಆಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 16 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸದ್ಯದಲ್ಲಿಯೇ ಅನುಮೋದನೆ ದೊರೆಯಲಿದೆ. ಸ್ಟೇಡಿಯಂನಲ್ಲಿ 200 ಮೀ. ಟ್ರ್ಯಾಕ್, ಲಾಂಗ್ ಜಂಪ್, ಹೈ ಜಂಪ್ ಹಾಗೂ ವಾಲಿಬಾಲ್ ಕೋರ್ಟ್, ಕ್ರಿಕೆಟ್ ಪಿಚ್, ಸ್ಟೇಡಿಯಂ ಬಿಲ್ಡಿಂಗ್, ವೀಕ್ಷಕರ ಗ್ಯಾಲರಿ ಮೊದಲಾದವುಗಳು ನಿರ್ಮಾಣವಾಗಲಿದೆ. ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಿಗೆ ಬೈಂದೂರು ಸರಕಾರಿ ಪದವಿ ಕಾಲೇಜು ಬಳಿಯೂ ಜಾಗ ಮೀಸಲಿರಿಸಿದ್ದು, ಅಲ್ಲಿಯೂ ಒಂದು ಸುಸಜ್ಜಿತ ಸ್ಟೇಡಿಯಂ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗುತ್ತಿದೆ ಎಂದರು.

ಸಂಸದರ ಮುತುವರ್ಜಿಯಿಂದಾಗಿ ಬೈಂದೂರು ಕ್ಷೇತ್ರಕ್ಕೆ ಹಲವಾರು ಯೋಜನೆಗಳು ಬರುತ್ತಿದ್ದು, ಬೈಂದೂರು ತಾಲೂಕು ಕೇಂದ್ರ ಅಭಿವೃದ್ಧಿಗೂ ಅವರು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಯಾವುದೇ ಯೋಜನೆಗಳ ಬಗ್ಗೆ ಸಂಶಯವಿದ್ದರೆ ಸಂಸದರು, ಶಾಸಕರ ಬಳಿಕ ಸ್ಪಷ್ಟೀಕರಣ ಪಡೆಯಲು ಹಾಗೂ ಸಲಹೆ ನೀಡಲು ಅವಕಾಶವಿದೆ. ಅದರ ಬದಲಿಗೆ ತಪ್ಪು ಸಂದೇಹ ಹರಡುವುದು ಸರಿಯಲ್ಲ ಎಂದರು.

ಯಡ್ತರೆ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡಿ ಬೈಂದೂರು ಹೃದಯ ಭಾಗದಲ್ಲಿ ಇರುವುದೇ ಒಂದೇ ಮೈದಾನ. ಸುತ್ತಲಿನ ಶಾಲೆ ಹಾಗೂ ಎಲ್ಲಾ ಕ್ರೀಡಾ ಉದ್ದೇಶಕ್ಕೆ ಇದು ಅಗತ್ಯವಾಗಿದೆ. ಎಲ್ಲಾ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯ ಜಾಗ ಮೀಸಲಿರಿಸಿ ಉಳಿದ ಜಾಗದಲ್ಲಿ ಪುರಭವನ ನಿರ್ಮಿಸುವುದಾದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.

ಪಡುವರಿ ಪಂಚಾಯತ್ ಮಾಜಿ ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ ಮಾತನಾಡಿ, ಬೈಂದೂರು ಹೃದಯ ಭಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸುತ್ತಲಿನ ಸರಕಾರಿ ಶಾಲೆ, ಇಲಾಖೆಗಳ ಸಭೆ ಸಮಾರಂಭಗಳನ್ನು ಆಯೋಜಿಸಲು ಸುಸಜ್ಜಿತ ಸಭಾಂಗಣದ ಅವಶ್ಯಕತೆ ಇರುವುದನ್ನು ಮನಗಂಡು ಸಂಸದರು ಈ ಯೋಜನೆಯನ್ನು ಬೈಂದೂರಿಗೆ ನೀಡಿದ್ದಾರೆ. ಎಲ್ಲಾ ಕ್ರೀಡಾ ಚಟುವಕೆಗಳಿಗೂ ಅಗತ್ಯವಾದ ಜಾಗವನ್ನು ಮೀಸಲಿರಿಸಿ ಒಂದು ಪಾರ್ಶ್ವದಲ್ಲಿ ಪುರಭವನ ನಿರ್ಮಾಣ ಮಾಡುತ್ತಿರುವುದರಿಂದ ಯಾರಿಗೂ ತೊಂದರೆಯಾಗದು ಎಂದರು.

ಬೈಂದೂರು ತಾಪಂ ಸಾಮಾಜಿ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಪುಪ್ಪರಾಜ ಶೆಟ್ಟಿ ಮಾತನಾಡಿ ನಾಡಿನ ಅಗ್ರಗಣ್ಯ ಕವಿ ಹಾಗೂ ನಮ್ಮ ತಾಲೂಕಿನವರೇ ಆದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರ ಹೆಸರಿನಲ್ಲಿ ಪುರಭವನ ನಿರ್ಮಾಣವಾಗುತ್ತಿರುವು ಸಂತೋಷದ ಸಂಗತಿ. ಈ ಮೂಲಕ ಅವರಿಗೆ ನಾವು ಗೌರವ ಸಲ್ಲಿಸಿದಂತಾಗಲಿದೆ. ಇದರ ಬಗ್ಗೆ ತಪ್ಪು ಅಭಿಪ್ರಾಯ ಹರಡುವುದು ಬೇಡ ಎಂದರು.

ಸಭೆಯಲ್ಲಿ ಯಡ್ತರೆ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ನಾಗರಾಜ ಶೆಟ್ಟಿ, ಗಣೇಶ್ ಪೂಜಾರಿ ಹಾಗೂ ಸ್ಥಳೀಯರಾದ ಗಣೇಶ್ ರಾವ್ ಸ್ಟೇಡಿಯಂ ಹಾಗೂ ಕ್ರೀಡಾ ಚಟುವಟಿಕೆಗೆ ಮೀಸಲಿರಿಸಿದ ಸ್ಥಳದ ಬಗ್ಗೆ ಸ್ಪಷ್ಟೀಕರಣ ಕೇಳಿದ್ದು, ಕ್ರೀಡಾ ಚಟುವಕೆಗಳಿಗೆ ಅನುಕೂಲವಾಗು ರೀತಿಯಲ್ಲಿ ಯೋಜನೆಯಲ್ಲಿ ಸ್ವಲ್ಪ ಮಾರ್ಪಾಡು ಮಾಡಲು ಸಂಸದರಿಗೆ ಮನವಿ ಮಾಡುವ ನಿರ್ಣಯ ಕೈಗೊಳ್ಳಲಾಯಿತು.

ಈ ವೇಳೆ ಎಪಿಎಂಸಿ ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು, ಜಿ.ಪಂ ಸದಸ್ಯ ಸುರೇಶ್ ಬಟವಾಡಿ, ಭಾಸ್ಕರ್ ದೇವಾಡಿಗ, ನಾಗರಾಜ ಗಾಣಿಗ ಬಂಕೇಶ್ವರ, ಭಾಸ್ಕರ್ ನಾಯಕ್, ಮೊದಲಾದವರು ಉಪಸ್ಥಿತರಿದ್ದರು.

Exit mobile version