Kundapra.com ಕುಂದಾಪ್ರ ಡಾಟ್ ಕಾಂ

ಪುರಸಭಾ ವ್ಯಾಪ್ತಿಯಲ್ಲಿಯೇ ಕುಂದಾಪುರ ನಗರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್, ಯೋಜನಾ ನಿರ್ದೇಶಕರ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪುರಸಭಾ ವ್ಯಾಪ್ತಿಯಲ್ಲಿಯೇ ಪ್ರವೇಶ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದು, ಶುಕ್ರವಾರ ಯೋಜನಾ ನಿರ್ದೇಶಕ ಲಿಂಗೇಗೌಡ ಅವರು ಪ್ರಸ್ತಾವಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಂದಾಪುರ ಎಲ್.ಐ.ಸಿ ರಸ್ತೆ ಬಳಿ ಮೆಸ್ಕಾಂ ಕಛೇರಿ ಎದುರುಗಡೆ ಕುಂದಾಪುರ ನಗರಕ್ಕೆ ಪ್ರವೇಶ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಎರಡುವರೆ ತಿಂಗಳ ಒಳಗಡೆ ಕಾರ್ಯಗತಗೊಳ್ಳಲಿದೆ. ಇಲ್ಲಿ ಸರ್ವೀಸ್ ರಸ್ತೆಯನ್ನು ವಿಸ್ತಾರಗೊಳಿಸಿಕೊಂಡು ಹೆದ್ದಾರಿ ಮಟ್ಟದಲ್ಲಿಯೇ ನಗರಕ್ಕೆ ಪ್ರವೇಶ ನೀಡಲಾಗುವುದು. ಅದೇ ರೀತಿ ಆಚೆ ಕಡೆಯಲ್ಲಿಯೂ ಕೂಡಾ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಾ.30ರ ಒಳಗೆ ಮೇಲ್ಸೇತುವೆಗೆ ದಾರಿದೀಪಗಳ ಅಳವಡಿಸಲಾಗುವುದು ಎಂದರು. ಅದೇ ರೀತಿ ಹೆದ್ದಾರಿ ದಾಟುವ ಕುರಿತಂತೆ ವಿದ್ಯಾರ್ಥಿಗಳ ಬೇಡಿಕೆಗೂ ಸ್ಪಂದನ ನೀಡಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶ ನೀಡುವ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಸಲ್ಲಿಸಲಾಗಿತ್ತು. ಯೋಜನಾ ನಿರ್ದೇಶಕರಿಗೆ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು.

ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಹೆದ್ದಾರಿ ಹೋರಾಟ ಸಮಿತಿ ಕೆಂಚನೂರು ಸೋಮಶೇಖರ ಶೆಟ್ಟಿ, ಬಿ. ಕಿಶೋರ್ ಕುಮಾರ್, ರಾಜೇಶ ಕಾವೇರಿ, ವಿವೇಕ್ ನಾಯಕ್, ಪುರಸಭಾ ಸದಸ್ಯರಾದ ಪ್ರಭಾಕರ, ಶೇಖರ ಪೂಜಾರಿ, ಸಂತೋಷ್ ಕುಮಾರ್ ಶೆಟ್ಟಿ, ರೋಹಿಣಿ ಉದಯಕುಮಾರ್, ವನಿತಾ ಬಿಲ್ಲವ, ರಾಘವೇಂದ್ರ ಖಾರ್ವಿ ಹಾಗೂ ಅವಿನಾಶ್ ಉಳ್ತೂರು, ರಾಘವೇಂದ್ರ ಶೇಟ್, ಸತೀಶ್ ಪೂಜಾರಿ, ನಾಗರಾಜ್ ಆಚಾರ್ಯ, ಸುರೇಂದ್ರ ಕಾಂಚನ್, ಅಭಿಷೇಕ್ ಮೊದಲಾದವರು ಉಪಸ್ಥಿತರಿದ್ದರು.

Exit mobile version