ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಂಸ್ಕೃತಿಕ ಚಟುವಟಿಕೆಗಳು ಸದಾ ಚೈತನ್ಯದಿಂದ ಬದುಕಲು ಸಹಕಾರಿಯಾಗುತ್ತದೆ. ದೈನಂದಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯಾವುದಾದರೂ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಮಕ್ಕಳು ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡಿದ ಸಾಕಷ್ಟು ಉದಾಹರಣೆಗಳಿವೆ. ರಂಗಚಟುಕೆಗಳ ಮೂಲಕ ಸಮಾಜವನ್ನು ಸಮಚಿತ್ತದಿಂದ ನೋಡಲು ಸಾಧ್ಯವಿದೆ ಎಂದರು.
ನಟ, ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಲಾವಣ್ಯ ಬೈಂದೂರು ಅಧ್ಯಕ್ಷ ಉದಯ ಆಚಾರ್, ಕರ್ಣಾಟಕ ಬ್ಯಾಂಕ್ ಬೈಂದೂರು ಶಾಖಾಧಿಕಾರಿ ಪರಮೇಶ್ವರ ಪೂಜಾರಿ, ಸುರಭಿ ಅಧ್ಯಕ್ಷರಾದ ನಾಗರಾಜ ಪಿ. ಯಡ್ತರೆ, ಕಾರ್ಯದರ್ಶಿ ಭಾಸ್ಕರ ಬಾಡ ಉಪಸ್ಥಿತರಿದ್ದರು.
ಸುರಭಿ ನಿರ್ದೇಶಕ ಸುಧಾಕರ ಪಿ. ಸ್ವಾಗತಿಸಿ, ಸದಸ್ಯ ಲಕ್ಷ್ಮಣ ಕೊರಗ ವಂದಿಸಿದರು. ಬಳಿಕ ಸಂಗಮ ಕಲಾವಿದೆರ್ ಮಣಿಪಾಲ ಅಭಿನಯದ, ಆಸೀಫ್ ಕರೀಮ್ ಭೋಯ್ ರಚಿಸಿ, ಕೆ. ಆರ್. ಓಂಕಾರ ಪರಿಷ್ಕರಿಸಿ, ಭವನ್ ಮಣಿಪಾಲ್ ನಿರ್ದೇಶಿಸಿದ ಮೂಕ ನರ್ತಕ ನಾಟಕ ಪ್ರದರ್ಶನಗೊಂಡಿತು.