ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ಸರಣಿ ಕಾರ್ಯಕ್ರಮದಡಿ 71ನೇ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗಾಗಿ ‘ಸೂತ್ರ ಸಂಕಲ್ಪ’ ಉಚಿತ ಗೊಂಬೆಯಾಟ ಮಾಹಿತಿ ಕಾರ್ಯಾಗಾರ ಶಿಬಿರ ಇತ್ತೀಚೆಗೆ ನಡೆಯಿತು.
ಕುಂದಾಪುರದ ಲೆಕ್ಕ ಪರಿಶೋಧಕರಾದ ಪಿ. ಪ್ರಭಾಕರ ಮಯ್ಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರಂಗೋಲಿ ಕಲಾವಿದೆ ಡಾ. ಭಾರತಿ ಮರವಂತೆ, ಸರಕಾರಿ ಪ್ರೌಢ ಶಾಲೆ, ಹಕ್ಲಾಡಿಯ ಕನ್ನಡ ಭಾಷಾ ಶಿಕ್ಷಕರಾದ ಡಾ. ಕಿಶೋರ್ ಕುಮಾರ್ ಶೆಟ್ಟಿ, ಶಿಕ್ಷಕ ಉದಯ ಭಂಡಾರ್ಕಾರ್ ಹಟ್ಟಿಯಂಗಡಿ, ಶಿಕ್ಷಕಿ ರೇವತಿ ಸುವರ್ಣ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ಉಪಸ್ಥಿತರಿದ್ದರು. ಈ ವೇಳೆ ಪಿ. ಪ್ರಭಾಕರ ಮಯ್ಯ ರವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಒಂದು ಕಾರ್ಯಾಗಾರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಗೇರಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ವಂಡ್ಸೆ, ಸರಕಾರಿ ಪ್ರೌಢ ಶಾಲೆ, ಹಕ್ಲಾಡಿ ಮತ್ತು ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಭಾಸ್ಕರ್ ಕಾಮತ್ ಅವರು ಗೊಂಬೆಯಾಟ ಕಾರ್ಯಾಗಾರವನ್ನು ಗುರುವಂದನಾ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿದರು. ನೆರೆದ ಎಲ್ಲಾ ಶಿಕ್ಷಕರಿಗೆ ಶಾಲು ಹೊದಿಸಿ, ಮಕ್ಕಳಿಂದ ಶ್ಲೋಕ ಹೇಳಿಸಿ, ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ತನಮಧ್ಯೆ ಎಲ್ಲಾ ವಿಷಯದಲ್ಲೂ ರಸಪ್ರಶ್ನೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಿ ಹುರಿದುಂಬಿಸಲಾಯಿತು. ಶಿಕ್ಷಕ ರಾಜಶೇಖರ್ ತಾಳಿಕೋಟೆಯವರ ಮುಖವಾಡ ತಯಾರಿ ಕಾರ್ಯಾಗಾರ ಹಾಗೂ ಭಾಸ್ಕರ್ ಕೊಗ್ಗ ಕಾಮತ್ ಮತ್ತು ತಂಡದವರು ನಡೆಸಿಕೊಟ್ಟ ಗೊಂಬೆಯಾಟ ಕಾರ್ಯಾಗಾರದಿಂದ ಮಕ್ಕಳೆಲ್ಲರೂ ತುಂಬಾ ಖುಷಿ ಪಟ್ಟರು. ತದನಂತರ ನಾಲ್ಕೂ ಶಾಲೆಯ ವಿದ್ಯಾರ್ಥಿಗಳು ಯಕ್ಷಗಾನ, ಕುಣಿತದ ಭಜನೆ ಹಾಗೂ ನೃತ್ಯದ ಮೂಲಕ ತಮ್ಮ ತಮ್ಮ ಪ್ರತಿಭೆಯನ್ನು ತೋರಿಸಿದರು. ಒಟ್ಟಿನಲ್ಲಿ ಒಂದು ದಿನದ ಉಚಿತ ಗೊಂಬೆಯಾಟ ಕಾರ್ಯಾಗಾರ ಅರ್ಥಪೂರ್ಣವಾಗಿ ನಡೆಯಿತು. ನಾಗೇಶ್ ಶ್ಯಾನುಭಾಗ್ ರವರು ಕಾರ್ಯಕ್ರಮ ನಿರೂಪಿಸಿದರು.
