Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ: ಸಾಧನಾ 40ರ ನಲಿವು ಕಾರ್ಯಕ್ರಮ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಂಸ್ಥೆಯನ್ನು ಆರಂಭಿಸುವುದು ಸುಲಭ; ಆದರೆ ಅದನ್ನು ದೀರ್ಘಕಾಲ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದು ಒಂದು ಸವಾಲು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಹಿರಿಯ ಸಹಕಾರಿ ಧುರೀಣ ಎಸ್. ರಾಜು ಪೂಜಾರಿ ಹೇಳಿದರು.

ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ಸಂಪನ್ನವಾದ ’ಸಾಧನಾ 40ರ ನಲಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಧನಾ ಸಮಾಜ ಸೇವಾ ವೇದಿಕೆ 40 ವರ್ಷಗಳುದ್ದಕ್ಕೆ ತನ್ನ ಸೇವೆ, ಸಂಸ್ಕೃತಿ, ಮನೋಲ್ಲಾಸ ಎಂಬ ಅರ್ಥಪೂರ್ಣ ಧ್ಯೇಯವನ್ನು ಸಾಕಾರಗೊಳಿಸಲು ನಿರಂತರ ಶ್ರಮಿಸಿದೆ. ಮರವಂತೆಗೆ ಕೆಲವು ಶಾಶ್ವ್ವತ ಕೊಡುಗೆಗಳ ಜತೆಗೆ, ಇಲ್ಲಿನ ಜನಸಮುದಾಯಕ್ಕೆ ಬಹುಮುಖಿಯಾದ ಸೇವೆ ಸಲ್ಲಿಸಿದೆ. ಸಂಸ್ಥೆ ಜನರ ಬೆಂಬಲವನ್ನು ಮತ್ತು ಸಮರ್ಪಿತ ಮನೋಭಾವದ ಸದಸ್ಯರನ್ನು ಪಡೆದಿರುವುದರಿಂದ ಅದಕ್ಕೆ ಅಳಿವಿನ ಭೀತಿ ಇಲ್ಲ ಎಂದು ಅವರು ಹೇಳಿದರು.

ಸಾಧನಾ ಅಧ್ಯಕ್ಷ ಚಂದ್ರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಧನ್ಯತಾ ಶ್ಯಾನುಭಾಗ್ ಪ್ರಾರ್ಥನೆ ಹಾಗೂ ಸಾಧನಾ ಕುರಿತು ಕೆ. ಮಹಾಬಲ ಮತ್ತು ಮಂಜುನಾಥ ಮಧ್ಯಸ್ಥ ರಚಿಸಿದ ಗೀತೆಗಳನ್ನು ಹಾಡಿದರು. ಎಂ. ವಿನಾಯಕ ರಾವ್ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಮರವಂತೆ ಸಾಧನಾ ನಡೆದು ಬಂದ ದಾರಿಯನ್ನು ವಿವರಿಸಿದರು.

ಸಮಾರಂಭದಲ್ಲಿ ವಿವಿಧ ಕಾಯಕ ಹಾಗೂ ಸೇವಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಊರಿನ ೪೨ ಜನರಿಗೆ ಸೇವಾ ಸನ್ಮಾನ, ಬಸವ ಜನ್ಮಭೂಮಿ ಪ್ರತಿಷ್ಠಾನದಿಂದ 2021ನೆ ಸಾಲಿನ ಬಸವ ವಿಭೂಷಣ ಪ್ರಶಸ್ತಿ ಪುರಸ್ಕೃತ ಎಂ. ಎಲ್. ಭಟ್ ಮರವಂತೆ ಅವರಿಗೆ ಸಾಧನಾ ಸಂಮಾನ ಮಾಡಲಾಯಿತು. ಸಂಸ್ಥೆಗೆ ಧ್ವನಿ ವರರ್ಧಕ ಕೊಡುಗೆ ನೀಡಿದ ಹಂಗಳೂರಿನ ಎಲ್. ಜಿ. ಫೌಂಡೇಶನ್‌ನ ನಾಗರಾಜ ಪಡುಕೊಣೆ, ಸಂಜೆ ನಡೆದ ಯಕ್ಷಗಾನದ ಪ್ರಾಯೋಜಕ ಯೋಗೀಂದ್ರ ಮರವಂತೆ ಅವರನ್ನು ಗೌರವಿಸಲಾಯಿತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಧನಾ ಸದಸ್ಯರಿಗೆ ಎಸ್. ಜನಾರ್ದನ ನೆನಪಿನ ಕಾಣಿಕೆ ನೀಡಿದರು. ಕಾರ್ಯದರ್ಶಿ ದೇವಿದಾಸ ಶ್ಯಾನುಭಾಗ್ ವಂದಿಸಿದರು. ಜತೀಂದ್ರ ಮರವಂತೆ ನಿರೂಪಿಸಿದರು. ಎಂ. ಅಣ್ಣಪ್ಪ ಬಿಲ್ಲವ, ಸೀತಾರಾಮ ಮಡಿವಾಳ, ಎಂ. ಸುಬ್ರಹ್ಮಣ್ಯ ಅವಭೃತ್, ಸೋಮಯ್ಯ ಬಿಲ್ಲವ, ಅಂತೋನಿ ಡಿಸೋಜ, ನಾಗೇಶ ಎಸ್. ರಾವ್, ಇತರರು ಸಹಕರಿಸಿದರು.

ಸಂಜೆ ಪ್ರಸಿದ್ಧ ಕಲಾವಿದರಿಂದ ಧರ್ಮಾಂಗದ ದಿಗ್ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.

Exit mobile version