Kundapra.com ಕುಂದಾಪ್ರ ಡಾಟ್ ಕಾಂ

ಮರಳು ದಿಬ್ಬಗಳ ತೆರವು ಹಾಗೂ ಸಾಗಾಣಿಕೆಗೆ ನಿಷೇಧ: ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಮೇ.23:
ಉಡುಪಿ ಜಿಲ್ಲಾ ಕರಾವಳಿ ನಿಯಂತ್ರಣ ವಲಯದ ನದಿ ಪಾತ್ರಗಳಲ್ಲಿನ ಮರಳು ದಿಬ್ಬ ತೆರವುಗೊಳಿಸುವ ಸಂಬಂಧ ಒಟ್ಟು 161 ತಾತ್ಕಾಲಿಕ ಮರಳು ಪರವಾನಿಗೆಯನ್ನು ವಿತರಿಸಲಾಗಿರುತ್ತದೆ. ಅವುಗಳಲ್ಲಿ ಕುಂದಾಪುರ ತಾಲ್ಲೂಕು ವ್ಯಾಪ್ತಿಯ 04 ಮರಳು ದಿಬ್ಬಗಳನ್ನು ತೆರವುಗೊಳಿಸಲು ವಿತರಿಸಲಾದ ಒಟ್ಟು 39 ತಾತ್ಕಾಲಿಕ ಮರಳು ಪರವಾನಿಗೆಗಳಿಗೆ ಸಂಬAಧಿಸಿದಂತೆ KSCZMA ಯಿಂದ ನೀಡಲಾದ ನಿರಾಕ್ಷೇಪಣಾ ಪತ್ರದ ಅವಧಿಯು ಮೇ.29 ರಂದು ಮುಕ್ತಾಯಗೊಂಡಿದ್ದು, ಸದರಿ ಪರವಾನಿಗೆಗಳನ್ನು ಈಗಾಗಲೇ ತಡೆಹಿಡಿಯಲಾಗಿರುತ್ತದೆ ಹಾಗೂ ಸ್ಥಗಿತಗೊಳಿಸಲಾಗಿರುತ್ತದೆ.

ಉಡುಪಿ ಮತ್ತು ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯ ಒಟ್ಟು 19 ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ವಿತರಿಸಲಾದ ಒಟ್ಟು 122 ತಾತ್ಕಾಲಿಕ ಮರಳು ಪರವಾನಿಗೆಗಳಿಗೆ ಸಂಬಂಧದಿಸಿದಂತೆ ನೀಡಲಾದ ನಿರಾಕ್ಷೇಪಣಾ ಪತ್ರದ ಅವಧಿಯು ಅಗಷ್ಟ್ 22ರವರೆಗೆ ಇರುವುದಾಗ್ಯೂ ಪ್ರಸ್ತುತ ಮಾನ್ಯ ಹಸಿರು ಪೀಠ ನ್ಯಾಯಾಲಯ, ದಕ್ಷಿಣ ವಲಯ ಚೆನೈ ನ ಆದೇಶದನುಸಾರ ಉಡುಪಿ ಜಿಲ್ಲಾ 07 ಸದಸ್ಯರ ಸಮಿತಿಯು ಜಿಲ್ಲಾ ವ್ಯಾಪ್ತಿಯಲ್ಲಿ ಮಾನ್ಯ ನ್ಯಾಯಾಲಯದ ಆದೇಶದನ್ವಯ ಕ್ರಮ ಕೈಗೊಂಡಿದ್ದು, ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ನೀಡಲಾದ ಚಾಲ್ತಿಯಲ್ಲಿರುವ ಒಟ್ಟು 122 ತಾತ್ಕಾಲಿಕ ಮರಳು ಪರವಾನಿಗೆಗಳನ್ನು ILMS ತಂತ್ರಾಂಶದಲ್ಲಿ ತಡೆಹಿಡಿಯಲು ಮಾನ್ಯ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು ರವರಿಗೆ ಪತ್ರದ ಮೂಲಕ ಕೋರಲಾಗಿರುತ್ತದೆ.

ಅದರಂತೆ ILMS ತಂತ್ರಾಂಶದಲ್ಲಿ ಒಟ್ಟು 122 ಪರವಾನಿಗೆಗಳನ್ನು ತಡೆಹಿಡಿದು, ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಹಾಗೂ ಮರಳು ಸಾಗಾಣಿಕೆಯನ್ನು ನಿರ್ಭಂದಿಸಲಾಗಿರುತ್ತದೆ ಹಾಗೂ ತಾತ್ಕಾಲಿಕ ಮರಳು ಪರವಾನಿಗೆದಾರರಿಗೆ ಮರಳು ತೆರವುಗೊಳಿಸುವುದನ್ನು ಸ್ಥಗಿತಗೊಳಿಸಿ, ಮರಳು ದಿಬ್ಬ ಪ್ರದೇಶಗಳಿಂದ ಮರಳು ತೆರವುಗೊಳಿಸಲು ಬಳಸುವ ದೋಣಿಗಳನ್ನು ಹಾಗೂ ಮರಳು ದಕ್ಕೆ ಪ್ರದೇಶದಿಂದ ಮರಳು ಸಾಗಾಣಿಕೆಗೆ ಬಳಸುವ ವಾಹನಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ.

ಪ್ರಸ್ತುತ ಉಡುಪಿ ಜಿಲ್ಲಾ ವ್ಯಾಪ್ತಿಯ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವುದನ್ನು ಹಾಗೂ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

Exit mobile version