Kundapra.com ಕುಂದಾಪ್ರ ಡಾಟ್ ಕಾಂ

ಬೇಸಿಗೆ ಶಿಬಿರದ ಮಕ್ಕಳ ನಾಟಕ ಪ್ರದರ್ಶನ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಭಾರತೀಯ ಕಲೆ ಮತ್ತು ಸಾಹಿತ್ಯಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತಹ ಗಟ್ಟಿ ಬೇರನ್ನು ಹೊಂದಿದೆ. ಭಾಷೆ, ಉಚ್ಚಾರವನ್ನು ತಿದ್ದುವ, ಮಾತನಾಡುವ ಅವಕಾಶ ಇರುವುದು ರಂಗಭೂಮಿಯಲ್ಲಿ. ಹಾಗಾಗಿ ನಮ್ಮ ಕುಂದಾಪುರ ಕನ್ನಡ ಭಾಷೆಯಲ್ಲಿಯೂ ರಂಗಭೂಮಿ ನಿರ್ಮಾಣಗೊಳ್ಳೂವ ಅಗತ್ಯತೆ ಇದೆ ಎಂದು ಭಗವದ್ಗೀತಾ ಅಭಿಯಾನದ ಜಿಲ್ಲಾ ಸಂಚಾಲಕ, ಶಿಬಿರದ ಪ್ರಾಯೋಜಕ ಬಿಜೂರು ರಾಮಕೃಷ್ಣ ಶೇರುಗಾರ್ ಹೇಳಿದರು.

ಇಲ್ಲಿನ ಶಾರದಾ ವೇದಿಕೆಯಲ್ಲಿ ಶನಿವಾರ ಲಾವಣ್ಯ ವತಿಯಿಂದ ನಡೆದ 20ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರದಲ್ಲಿ ತರಬೇತುಗೊಂಡ ಮಕ್ಕಳ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಮಕ್ಕಳಲ್ಲಿ ಸಂಸ್ಕಾರ ಹಾಗೂ ಸ್ವಾಭಿಮಾನವನ್ನು ಬೆಳೆಸುತ್ತದೆ. ಶಿಕ್ಷಣದ ಜೊತೆಗೆ ಕಲಾಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಅವರು ಬಾಲ್ಯದಿಂದಲೇ ಮತ್ತಷ್ಟು ಕ್ರೀಯಾಶೀಲರಾಗುತ್ತಾರೆ. ಹೊಸ ಪ್ರತಿಭೆಗಳಿಗೂ ಪ್ರೋತ್ಸಾಹಿಸುವುದು ಬಹುಮುಖ್ಯ. ಈ ನಿಟ್ಟಿನಲ್ಲಿ ಹಿರಿಯ ಕಲಾವಿದರು ತಾವು ಬೆಳೆಯುವುದರೊಂದಿಗೆ ತಮ್ಮೊಂದಿಗೆ ಪ್ರತಿಭೆ ಇರುವ ಮಕ್ಕಳನ್ನು ಗುರುತಿಸಿ ಅವರ ಬೆನ್ನು ತಟ್ಟುವ ಕೆಲಸ ಮಾಡಿದರೆ ಅವರೂ ಬೆಳೆಯುತ್ತಾರೆ ಎಂದರು.

ಲಾವಣ್ಯದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಬಿರದ ನಿರ್ದೇಶಕ ಸತ್ಯನಾರಾಯಣ ಕೊಡೇರಿ, ಹೆತ್ತವರು ತಮ್ಮ ಮಕ್ಕಳಿಗೆ ಪ್ರೀತಿಯನ್ನು ಕೊಡಬಹುದು ಆದರೆ ಆಲೋಚನೆಗಳಲ್ಲ. ಹಾಗಾಗಿ ಮಕ್ಕಳ ಆಯ್ಕೆ, ಆಲೋಚನೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಅವರಂತೆ ನಡೆಸಿ ಹೊಸ ದಾರಿ ಹುಟ್ಟುಹಾಕಲು ಸಹಕರಿಸಿ ಬೆಳೆಯಲು ಬಿಡಿ. ರಂಗಭೂಮಿಯು ಪ್ರೀತಿ, ಸಹಬಾಳ್ವೆ, ಸಾಮರಸ್ಯ ಸಿಗುವ ಕೇಂದ್ರವಾಗಿದ್ದು, ಮಕ್ಕಳಲ್ಲಿ ಕ್ರೀಯಾಶೀಲತೆ ಬೆಳೆದು ಹೊಸತನ ಅನ್ವೇಷಣೆಗೆ ಒಂದು ಉತ್ತಮ ವೇದಿಕೆಯಾಗಿದೆ ಎಂದರು.

ಲಾವಣ್ಯ ಅಧ್ಯಕ್ಷ ಹರೇಗೋಡು ಉದಯ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನರಸಿಂಹ ಬಿ. ನಾಯಕ್ ಸ್ವಾಗತಿಸಿದರು. ವ್ಯವಸ್ಥಾಪಕ ಗಣಪತಿ ಎಸ್. ನಿರೂಪಿಸಿ, ಕಾರ್ಯದರ್ಶಿ ಮೂರ್ತಿ ಬೈಂದೂರು ವಂದಿಸಿದರು. ನಂತರ ಶಿಬಿರದ ಮಕ್ಕಳಿಂದ ಪಂಜರ ಶಾಲೆ ನಾಟಕ ಪ್ರದರ್ಶನಗೊಂಡಿತು.

Exit mobile version