Kundapra.com ಕುಂದಾಪ್ರ ಡಾಟ್ ಕಾಂ

ಲವ್ ಜಿಹಾದ್ ತಡೆಗೆ ಗ್ರಾಮ ಮಟ್ಟದಲ್ಲಿ ವಿಹಿಂಪ – ಬಜರಂಗದಳ, ದುರ್ಗಾವಾಹಿನಿ ಸಂಘಟನೆ: ಸುನೀಲ್ ಕೆ.ಆರ್. ಹೇಳಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಲವ್ ಜಿಹಾದ್ ತಡೆಗೆ ಪ್ರತಿ ಗ್ರಾಮ ಮಟ್ಟದಲ್ಲಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ದುರ್ಗಾವಾಹಿನಿ ಮೂಲಕ ಟಾಸ್ಕ್‌ಪೋರ್ಸ್ ರಚಿಸಿ, ಲವ್ ಜಿಹಾದ್ ವಿರುದ್ದ ಹೋರಾಟ ನಡೆಸಲಾಗುತ್ತದೆ. ಹಿಂದೂ ಹೆಣ್ಣು ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಎಂದು ಬಜರಂಗದಳ ಪ್ರಾಂತ್ಯ ಸಂಚಾಲಕ ಸುನೀಲ್ ಕೆ. ಆರ್. ಎಚ್ಚರಿಸಿದರು.

ಇತ್ತಿಚಿಗೆ ಆತ್ಮಹತ್ಯೆ ಮಾಡಿಕೊಂಡ ಉಪ್ಪಿನಕುದ್ರು ಶಿಲ್ವಾ ದೇವಾಡಿಗ ಸಾವಿಗೆ ನ್ಯಾಯ ಹಾಗೂ ಜನಜಾಗೃತಿಗಾಗಿ ಮಂಗಳವಾರ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಕುಂದಾಪುರ ಪ್ರಖಂಡದಿಂದ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆ ಸಭೆಯಲ್ಲಿ ಮಾತನಾಡಿ, ಇಸ್ಲಾಂ ಧರ್ಮಕ್ಕೆ ಮತಾಂತರ ಪ್ರಚೋದನೆಯೇ ಶಿಲ್ವಾ ಆತ್ಮಹತ್ಯೆಗೆ ಕಾರಣವಾಗಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂದು ಅಭಿಪ್ರಾಯಪಟ್ಟರು.

ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಕರಾವಳಿ ಪ್ರದೇಶದ ಸಾಕಷ್ಟು ಕುಟುಂಬಗಳು ಲವ್ ಜಿಹಾದ್ ಕಾರಣದಿಂದ ಕಣ್ಣೀರು ಸುರಿಸುತ್ತಿವೆ. ಈವತ್ತು ಅದಕ್ಕೆ ಕುಂದಾಪುರವೂ ಸೇರಿಕೊಂಡಿದೆ. ಇನ್‌ಗ್ರಾಮ್, ಫೇಸ್‌ಬುಕ್ ವಾಟ್ಸ್‌ಅಪ್‌ನಿಂದ ಆದಷ್ಟು ಅಂತರ ಕಾಪಾಡಿಕೊಳ್ಳಬೇಕು. ಹಿಂದೂ ಹೆಸರಲ್ಲಿ ಪರಿಚಯಿಸಿಕೊಂಡು ಲವ್ ಜಿಹಾದ್ ಹಾಗೂ ಇಸ್ಲಾಂಗೆ ಮತಾಂತರ ಮಾಡುವ ಷಡ್ಯಂತರ ನಡೆಯುತ್ತಿದೆ ಎಂದರು.

ಕೇರಳ ಕಾಶ್ಮೀರ ಮಂಗಳೂರಿನ ಉಳ್ಳಾಲದಲ್ಲಿ ಹಿಂದೂ ಕುಟುಂಬದ ಹೆಣ್ಣುಮಕ್ಕಳು ಲವ್ ಜಿಹಾದ್ ಸಮಸ್ಯೆಯಿಂದ ಬಳಲುತ್ತಿದ್ದು, ಅದು ಕುಂದಾಪುರಕ್ಕೂ ವಿಸ್ತರಿಸಿರುವುದು ದುರಂತ. ಹಿಂದೂ ಸಮಾಜ ಎಚ್ಚೆತ್ತು ಕೊಳ್ಳದಿದ್ದರೆ ಅಪಾಯ ನಿಶ್ಚಿತ ಎಂದರು.

ದೇವಸ್ಥಾನ ಪ್ರಕೋಷ್ಟಗಳ ಪ್ರಮುಖ ಪ್ರೇಮಾನಂದ ಶೆಟ್ಟಿ, ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಮಾತೃಶಕ್ತಿ ಪ್ರಮುಖರಾದ ಪೂರ್ಣಿಮಾ ಸುರೇಶ್, ವಿಶ್ವ ಹಿಂದೂ ಪರಿಷತ್ ಸಂಪರ್ಕ ಪ್ರಮುಖ ಗಿರೀಶ್ ಕುಂದಾಪುರ, ವಿಶ್ವಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶ್ರೀಧರ ಬಿಜೂರು, ವಿಶ್ವ ಹಿಂದೂ ಪರಿಷತ್ ಕುಂದಾಪುರ ಪ್ರಖಾಂಡ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಗೋಳಿಅಂಗಡಿ, ಶಿಲ್ಪಾ ಸಹೋದರ ರಾಘವೇಂದ್ರ ದೇವಾಡಿಗ ಇದ್ದರು.

Exit mobile version