Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕು ಪ್ರಗತಿ ಪರಿಶೀಲನಾ ಸಭೆ

ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಪ್ರಕೃತಿ ವಿಕೋಪ, ಮನೆ ನಿವೇಶನ, ಪಡಿತರ ಚೀಟಿ, ಆಧಾರ್ ಕಾರ್ಡು ಹಾಗೂ ಇತರ ಇಲಾಖೆಗಳ ಪ್ರಗತಿಗಯ ಬಗ್ಗೆ ಅವಲೋಕಿಸಿದ ಬಳಿಕ ಮಾತನಾಡಿ ಈ ಬಾರಿಯ ಇಲಾಖೆಗಳ ಅಂಕಿ ಅಂಶಗಳನ್ನು ಅವಲೋಕಿಸುವಾಗ ಕಳೆದ ಬಾರಿಗಿಂತ ಸ್ವಲ್ಪಮಟ್ಟಿನ ಪ್ರಗತಿ ಸಾಧಿಸಿರುವುದು ಕಂಡು ಬಂದಿದ್ದು, ಮುಂದೆಯೂ ಅಧಿಕಾರಿಗಳು ಈ ಬಗ್ಗೆ ಮತ್ತಷ್ಟು ನಿಗಾವಹಿಸಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯಕ್ ವರದಿ ನೀಡಿ ಸುಮಾರು ರೂ. 49.18 ಲಕ್ಷ ಮೊತ್ತವನ್ನು ಪ್ರಕೃತಿ ವಿಕೋಪದ ಪರಿಹಾರವಾಗಿ ನೀಡಿದ್ದು ಇನ್ನು ಸುಮಾರು 7 ಲಕ್ಷ ರೂ. ಬಾಕಿ ಇದೆ. ಪಡಿತ ಚೀಟಿ ಹಳೆ ಅರ್ಜಿಗಳೆಲ್ಲಾ ವಿಲೇವಾರಿಯಾಗಿದ್ದು ಹೆಚ್ಚೆಚ್ಚು ಹೊಸ ಅರ್ಜಿಗಳು ಬರುತ್ತಿದ್ದು ಶೀಘ್ರ ವಿಲೇವಾರಿಗೆ ಶ್ರಮಿಸುತ್ತಿದ್ದೇವೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ| ವಿಶಾಲ್ ಮಾತನಾಡಿ ಉಡುಪಿ ಜಿಲ್ಲೆ ಆಧಾರ್ ನೊಂದಣಿಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಆಧಾರ ಕಾರ್ಡುಗಳನ್ನು ಮಾಡಿಸಲು ಮೊದಲು ಟೋಕನ್ ನೀಡುವ ವ್ಯವಸ್ಥೆ ಇತ್ತು. ಈಗ ಅದರ ಬದಲಿಗೆ ನೇರವಾಗಿ ಆಧಾರ್ ಕೇಂದ್ರಕ್ಕೆ ತೆರಳಿ ನೊಂದಣಿ ಮಾಡಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು. ಸರಕಾರಿ ಜಾಗಗಳನ್ನು ಮನೆ ನಿವೇಶನಗಳಿಗೆ ಕಾದಿರಿಸುದರೊಂದಿಗೆ ಸರಕಾರಿ ಸೊತ್ತು ಗಳನ್ನು ಕೂಡಾ ಕಾದಿರಿಸಕೊಳ್ಳುವಂತೆ ಆಯಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾ.ಪಂ. ಪಿಡಿಓಗಳಿಗೆ ಅವರು ಸೂಚಿಸಿದರು. ಅಲ್ಲದೇ ಸಾಲಮನ್ನಾ ಯೋಜನೆಯ ಬಗ್ಗೆ ಆಯಾ ಗ್ರಾ.ಪಂ. ಪಿಡಿಓಗಳಿಂದ ಮಾಹಿತಿಯನ್ನು ಪಡೆದ ಜಿಲ್ಲಾಧಿಕಾರಿಯವರು ಈ ಪ್ರಕ್ರಿಯೆಯಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಬಗ್ಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ , ಪುರಸಭಾ ಅಧ್ಯಕ್ಷೆ ಕಲಾವತಿ, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಕನಗವಲ್ಲಿ, ಕುಂದಾಪುರ ಉಪವಿಭಾಗಾಧೀಕಾರಿ ಚಾರುಲತಾ ಸೋಮಲ್, ತಾ.ಪಂ. ಕಾರ್ಯನಿರ್ವಹಣಾಽಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

Exit mobile version