Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮೆಗಾ ಕೆರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಿ.ಎ., ಸಿ.ಎಸ್. ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳು ಸಾಕಷ್ಟು ಪೂರ್ವ ಸಿದ್ದತೆ ನಡೆಸಬೇಕು. ನಿರಂತರ ಪರಿಶ್ರಮ ಮತ್ತು ಸಾಧಿಸುವ ತುಡಿತವಿದ್ದರೆ ಖಂಡಿತವಾಗಿಯೂ ಸಿ.ಎ., ಸಿ.ಎಸ್. ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯ ಎಂದು ಐ.ಸಿ.ಎ.ಐ. ಸೆಂಟ್ರಲ್ ಕೌನ್ಸಿಲ್ ಮೆಂಬರ್ ಸಿ.ಎ. ಕೋತಾ ಎಸ್. ಶ್ರೀನಿವಾಸ ಹೇಳಿದರು.

ಅವರು ಐ.ಸಿ.ಎ.ಐ. ಉಡುಪಿ ಶಾಖೆಯ ಎಸ್.ಐ.ಆರ್.ಸಿ. ಹಾಗೂ ಕಾಲೇಜಿನ ವಾಣಿಜ್ಯ ವಿಭಾಗ ಆಯೋಜಿಸಿದ್ದ ಮೆಗಾ ಕೆರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ಸುಬೇದಾರ್ ಮೇಜರ್ ಲೆಪ್ಟಿನೆಂಟ್ ಗಣೇಶ್ ಅಡಿಗರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಜೀವನದಲ್ಲಿ ಸಾಧಿಸುವ ಛಲ ಮತ್ತು ಗುರಿಯೆಡೆಗಿನ ನಿರಂತರತೆಯನ್ನು ಯುವ ಸಮುದಾಯ ಕಾಯ್ದುಕೊಳ್ಳಬೇಕು. ಭಾರತೀಯ ಸೇನೆಗೆ ನಮ್ಮ ಕರಾವಳಿ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡು ದೇಶ ಸೇವೆಗೆ ಸನ್ನದ್ಧರಾಗಬೇಕೆಂದು ಹೇಳಿದರು.

ಸಿ.ಎ. ಲೋಕೇಶ್ ಶೆಟ್ಟಿ ಸ್ವಾಗತದ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು . ರಿಜಿನಲ್ ಕೌನ್ಸಿಲ್ ಮೆಂಬರ್ ಸಿ.ಎ. ಗೀತಾ ಎ.ಬಿ., ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೀಣಾ ಭಟ್ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿ.ಎ. ವಸಂತ ಶ್ಯಾನುಭೋಗ್ ವಿ., ಸಿ.ಎ. & ಸಿ.ಎಸ್. ಅಕಾಂಕ್ಷಿಗಳಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿ.ಎ. & ಸಿ.ಎಸ್. ಪೌಂಡೇಶನ್ ತೇರ್ಗಡೆ ಹೊಂದಿದ 30 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕ್ವಿಜ್ ಮಾಸ್ಟರ್ ಸಿ.ಎ. ಪ್ರದೀಪ್ ಜೋಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ಒಟ್ಟು 12 ತಂಡಗಳಲ್ಲಿ ಪ್ರಥಮ ಬಹುಮಾನವನ್ನು ಬಿ.ಎಸ್ಸಿ ವಿಭಾಗ ಹಾಗೂ ದ್ವೀತಿಯ ಸ್ಥಾನವನ್ನು ಬಿ.ಸಿ.ಎ. ವಿಭಾಗದ ವಿದ್ಯಾರ್ಥಿಗಳು ಪಡೆದುಕೊಂಡರು.

ವಿದ್ಯಾರ್ಥಿನಿ ದೀಕ್ಷಾ ಪ್ರಾರ್ಥಿಸಿದರು. ಸೌಭಾಗ್ಯ ಕಿಣಿ ಅತಿಥಿಗಳನ್ನು ಪರಿಚಯಿಸಿದರು. ಸಿ.ಎ. ಮಹೇಂದ್ರ ಶೆಣೈ ಧನ್ಯವಾದ ಸಲ್ಲಿಸಿದರು.

Exit mobile version