Kundapra.com ಕುಂದಾಪ್ರ ಡಾಟ್ ಕಾಂ

ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇಗುಲ ಜೀರ್ಣೋದ್ಧಾರದಲ್ಲಿ ಕೈಜೋಡಿಸಿ: ಡಾ. ಯಡ್ತರೆ ರಾಜಮೋಹನ ಶೆಟ್ಟಿ ಮನವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇತಿಹಾಸ ಪ್ರಸಿದ್ಧ ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಗಳು ಆರಂಭಗೊಂಡಿದ್ದು ಭಕ್ತವರ್ಗದ ಸಹಕಾರದಿಂದ ಸುಂದರ ದೇವಾಲಯ ಮರುನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ದೇವಳದ ಅನುವಂಶಿಯ ಆಡಳಿತ ಮೊಕ್ತೇಸರ ಡಾ. ಯಡ್ತರೆ ರಾಜಮೋಹನ ಶೆಟ್ಟಿ ಅವರು ಹೇಳಿದರು.

Watch Video

ಬೈಂದೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಒಂದು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿದೆ. ರಾಷ್ಟ್ರಕೂಟರು, ವಿಜಯನಗರದ ಅರಸರು ಹಾಗೂ ಕೆಳದಿ ಸಂಸ್ಥಾನದ ಅರಸರು ಈ ದೇವಸ್ಥಾನಕ್ಕೆ ರಾಜಾಶ್ರಯ ನೀಡಿದ್ದರು. ಕೆಳದಿ ಸಂಸ್ಥಾನ ಅರಸರ ಶಿಲ್ಪಕಲೆಯನ್ನು ಈ ದೇವಸ್ಥಾನ ಹೊಂದಿದ್ದು, ಇಲ್ಲಿನ ದೇವರ ಮೂರ್ತಿಗಳು, ನಂದಿ ಮೊದಲಾದವುಗಳಿಗೆ ಹಾಗೂ ಕೆಳದಿ ರಾಜರು ಕಟ್ಟಿಸಿದ ಬೇರೆ ದೇವಾಲಯದಕ್ಕೂ ಸಾಮ್ಯತೆ ಕಂಡುಬಂದಿದೆ ಎಂದರು.

ರಾಜಾಶ್ರಯ ತಪ್ಪಿದ ಬಳಿಕ ಜೀರ್ಣಾವಸ್ಥೆಯಲ್ಲಿದ್ದ ಹಾಗೂ ಪರಕೀಯರ ದಾಳಿಯಿಂದ ಹಾನಿಗೊಳಗಾಗಿದ್ದ ದೇವಸ್ಥಾನವನ್ನು ಬಹಳ ವರ್ಷದ ಹಿಂದೆ ದುಗ್ಗಪ್ಪ ಶೆಟ್ಟಿ ಎನ್ನುವವರು ಪುನರ್ ನಿರ್ಮಾಣ ಮಾಡಿದ್ದರು ಎನ್ನಲಾಗುತ್ತದೆ. ಈಗ ದೇವಾಲಯ ಶಿಥೀಲಾವಸ್ಥೆ ತಲುಪಿರುವುದರಿಂದ ಮತ್ತೆ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಪದ್ಮನಾಭ ಶರ್ಮ ಹಿರಿಂಜಾಲಕೂಡ ಅವರ ಅಷ್ಟಮಂಗಲ ಪ್ರಶ್ನೆಯನ್ನು ಕಂಡುಬಂದಂತೆ ಅವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತಿದೆ. ಯಕ್ಷಿ ಪ್ರತಿಷ್ಠೆ, ನಾಗ ದೇವರ ಪ್ರತಿಷ್ಠೆ ಈಗಾಗಲೇ ಆಗಿದೆ. ಮಹಾಲಿಂಗೇಶ್ವರನ ಗರ್ಭಗುಡಿ, ಮಹಿಷಮರ್ಧಿನಿ ಗರ್ಭಗುಡಿ ಹಾಗೂ ನಂದಿ ಮಂಟಪವನ್ನು ಮೊದಲ ಹಂತದಲ್ಲಿ ನಿರ್ಮಾಣಗೊಳ್ಳಲಿದ್ದು, ನಂತರ ಸುತ್ತು ಪೌಳಿ ನಿರ್ಮಾಣ ಆಗಲಿದೆ ಎಂದರು.

ವಿಶಿಷ್ಟ ದೇಗುಲು:
ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವರ ಗರ್ಭಗುಡಿ 23×23 ಫೀಟ್ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದ್ದು ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡ ಗರ್ಭಗುಡಿ ಯಾವುದೇ ದೇವಾಲಯದಲ್ಲಿ ಇಲ್ಲ ಎನ್ನಲಾಗುತ್ತಿದೆ. ದೇವಸ್ಥಾನದಲ್ಲಿರುವ ಉತ್ಸವ ಮೂರ್ತಿ ಎಡಗೈಯಲ್ಲಿ ಅಭಯ ಮಾಡುತ್ತಿರುವುದು ಕಂಡುಬರುತ್ತದೆ ಇದು ಅಪರೂಪದ್ದಾಗಿದೆ. ದೇವಸ್ಥಾನ ಜೀರ್ಣೋದ್ಧಾರಗೊಂಡ ಬಳಿಕವೂ ಶಿವರಾತ್ರಿಯಂದು ಲಿಂಗ ಸ್ವರ್ಶ ಪೂಜೆ ನಡೆಯಲಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ದೇಗುಲ ಪುರಾತನ ದೇವರ ವಿಗ್ರಹಗಳು ಹಾಗೂ ಪುಷ್ಕರಣಿ ಮನಮೋಹಕವಾಗಿದೆ.

ದೇವಳದ ಜೀರ್ಣೋದ್ಧಾರಕ್ಕೆ ಅಂದಾಜು 3.33 ಕೋಟಿ ವೆಚ್ಚವಾಗಲಿದ್ದು, ಸಾರ್ವಜನಿಕರು, ಭಕ್ತಾದಿಗಳು ದೇಣಿಗೆ ಒದಗಿಸುವಂತೆ ದೇವಳದ ಅನುವಂಶಿಯ ಆಡಳಿತ ಮೊಕ್ತೇಸರ ಡಾ. ಯಡ್ತರೆ ರಾಜಮೋಹನ ಶೆಟ್ಟಿ ಅವರು ಮನವಿ ಮಾಡಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಯಡ್ತರೆ ಮನೆ ಕುಟುಂಬಿಕರಾದ ಅರ್ಜುನ್ ಶೆಟ್ಟಿ, ಡಾ. ತಿಲಕ್ ಶೆಟ್ಟಿ, ಡಾ. ಮಿಥುನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Exit mobile version