Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದದ ಮೊಬೈಲ್ ಅಂಗಡಿ ಕಳವುಗೈದ ನಾಲ್ವರು ಆರೋಪಿಗಳನ್ನು ಬಂಧಿಸಿದ ಬೈಂದೂರು ಪೊಲೀಸರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಉಪ್ಪುಂದದ ಮೂಡುಗಣಪತಿ ದೇವಸ್ಥಾನದ ಬಳಿಯ ಮೊಬೈಲ್ ಜೋನ್ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕೃತ್ಯ ನಡೆದ ಮೂರು ದಿನದಲ್ಲಿ ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಮುರುಡೇಶ್ವರ ಮಾವಳ್ಳಿಯ ನಿವಾಸಿಗಳಾದ ಮೊಹಮ್ಮದ್ ಇಫ್ಜಲ್ (27), ಮಹಮ್ಮದ್ ಅಸೀಮ್ ಡೊನ್ನಾ (20), ಮಹಮ್ಮದ್ ರಫಿ (21) ಹಾಗೂ ಭಟ್ಕಳದ ಮೊಹಮ್ಮದ್ ರಾಹಿಕ್ (22) ಬಂಧಿತ ಆರೋಪಿಗಳು.

ಉಪ್ಪುಂದ ಅಂಬಾಗಿಲುವಿನಲ್ಲಿರುವ ಮೊಬೈಲ್ ಜೋನ್ ಎಂಬ ಅಂಗಡಿಯಲ್ಲಿ ಜುಲೈ 5ರ ರಾತ್ರಿ ಅಂಗಡಿಯ ಶೆಟರ್ ಬಾಗಿಲನ್ನು ಮುರಿದು ಕಳ್ಳತನ ಮಾಡಲಾಗಿತ್ತು. ಅಂಗಡಿಯಲ್ಲಿದ್ದ 3500 ರೂ. ನಗದು, 25 ಸಾವಿರ ರೂ. ಬೆಲೆಬಾಳುವ 17 ಕೀ ಪ್ಯಾಡ್ ಮೊಬೈಲ್ ಪೋನುಗಳು ಹಾಗೂ 5 ಸಾವಿರ ರೂ. ಮೌಲ್ಯದ ಮೊಬೈಲ್ ಗೆ ಉಪಯೋಗಿಸುವ ಪವರ್ ಬ್ಯಾಂಕ್ ಹಾಗೂ ಬ್ಲೂಟೂತ್ ಕಳವುಗೈದಿದ್ದು ಈ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 33,500 ರೂ. ಆಗಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನತ್ತಿದ ಪೊಲೀಸರು ಮುರ್ಡೇಶ್ವರ ಬೀಚ್ ಬಳಿ ಆರೋಪಿಗಳನ್ನು ಬಂಧಿಸಿದ್ದು ಇವರಿಂದ ಕಳವು ಮಾಡಿದ 20 ಸಾವಿರ ಮೌಲ್ಯದ ಮೊಬೈಲ್ ಪೋನುಗಳು, ಕೃತ್ಯಕ್ಕೆ ಉಪಯೋಗಿಸಿದ 8 ಲಕ್ಷ ಮೌಲ್ಯದ ಕಾರು, ಮೂರು ಪವರ್ ಬಂಕ್ ಮೊದಲಾದವುಗಳನ್ನು ವಶಕ್ಕೆ ಪಡೆಯಲಾಗಿದೆ.

ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ. ನಿರ್ದೇಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದ ಬೈಂದೂರು ಪಿಎಸ್ಐ ಪವನ್ ನಾಯಕ್ ಮತ್ತವರ ತಂಡ ಆರೋಪಿಗಳನ್ನು ಬಂಧಿಸಿದೆ. ಬೈಂದೂರು ವೃತ್ತ ನಿರೀಕ್ಷಕ ಕಚೇರಿಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ಗಳಾದ ಮೋಹನ, ನಾಗೇಂದ್ರ, ಕೃಷ್ಣ , ಹಾಗೂ ಬೈಂದೂರು ಪೊಲೀಸ್ ಠಾಣಾ ಅಪರಾಧ ವಿಭಾಗ ಸಿಬ್ಬಂದಿಗಳಾದ ಶ್ರೀನಿವಾಸ ಹಾಗೂ ಸುಜೀತ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Exit mobile version