Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಖಾಸಗಿ ಕಾಲೇಜು ಉಪನ್ಯಾಸಕ ನೇಣಿಗೆ ಶರಣು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕ ನೆಲ್ಯಾಡಿ ಮೂಲದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ಸಮೀಪದ ಅಂಕದಕಟ್ಟೆಯಲ್ಲಿ ನಡೆದಿದೆ. ಕಡಬ ಸಮೀಪದ ನೆಲ್ಯಾಡಿ ನಿವಾಸಿ ಆನಂದ ಗೌಡ (33) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

ಕುಂದಾಪುರದ ಖಾಸಗಿ ಕಾಲೇಜೊಂದರ ಗಣಿತ ಉಪನ್ಯಾಸಕರಾಗಿದ್ದ ಆನಂದ ಗೌಡ ಶುಕ್ರವಾರ ರಾತ್ರಿ ಪರೀಕ್ಷೆಗೆಂದು ಪ್ರಶ್ನೆಪತ್ರಿಕೆ ಸಿದ್ಧಪಡಿಸಿಟ್ಟು ಮಲಗಿದ್ದರು. ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಅವರ ಪತ್ನಿ ಅಡುಗೆ ಮನೆಗೆ ಬಂದು ನೋಡಿದಾಗ ಅಡುಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಎರಡು ತಿಂಗಳ ಹಿಂದೆಯಷ್ಟೇ ಹೆಬ್ರಿ ಮೂಲದ ಉಪನ್ಯಾಸಕಿಯನ್ನು ಮದುವೆಯಾಗಿ ಅಂಕದಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಹಿಂದೆ ಮೂಡಬಿದ್ರೆಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಆನಂದ್ ಗೌಡ ಇತ್ತೀಚೆಗೆ ಅವರು ಹೊಸದಾಗಿ ಕಾರು ಖರೀದಿಸಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version