Kundapra.com ಕುಂದಾಪ್ರ ಡಾಟ್ ಕಾಂ

ವಸ್ತು ಸ್ಥಿತಿ ನಕಾರಾತ್ಮಕವಾಗಿದ್ದರೂ ಬರಹಗಾರನ ಯೋಚನೆ ಸಕಾರಾತ್ಮಕವಾಗಿರಲಿ: ಡಾ. ಚಂದ್ರಹಾಸ ಚಾರ್ಮಾಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಬದಲಾದ ಜಗದಲ್ಲಿ ಜೀವಂತಿಕೆಯ ಬರಹ ಅಗತ್ಯವಿದ್ದು, ಓದು ಮತ್ತು ಬರಹ ವ್ಯಕ್ತಿಯನ್ನು ಉತ್ತಮದೆಡೆಗೆ ಕೊಂಡೊಯ್ಯುತ್ತದೆ ಎಂದು ನಿರಂತರ ಪ್ರಗತಿ ಮ್ಯಾಗಝಿನ್ ಸಂಪಾದಕ ಡಾ. ಚಂದ್ರಹಾಸ ಚಾರ್ಮಾಡಿ ಹೇಳಿದರು

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ಫೋರಂ ವತಿಯಿಂದ ಆಯೋಜಿಸಿದ್ದ ’ಬದಲಾದ ದುನಿಯಾದಲ್ಲಿ ಬರಹ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಬರವಣಿಗೆ ಬರೀ ಅಕ್ಷರ ಮಾತ್ರವಲ್ಲದೆ ಬರಹಗಾರನ ಒಳ-ಹೊರ ಪ್ರಚೋಧಿಸುವ ಅಭಿವ್ಯಕ್ತಿ. ವಸ್ತು ಸ್ಥಿತಿ ನಕಾರಾತ್ಮಕವಾಗಿದ್ದರೂ ಬರಹಗಾರನ ಯೋಚನೆ ಸಕಾರಾತ್ಮಕವಾಗಿರಬೇಕು, ನಮ್ಮ ಬರಹ ಸಮಸ್ಯೆಗೆ ಒಳಗಾದ ವ್ಯಕ್ತಿಯ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿರಬೇಕು. ಬದಲಾದ ಜಗತ್ತಿನಲ್ಲಿ ಸಂದರ್ಭಕ್ಕೆ ಅನುಸಾರವಾದ ವಿಷಯಗಳನ್ನು ಬರಹಗಾರರು ಆಯ್ದುಕೊಳ್ಳಬೇಕು ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಬರಹ ಮತ್ತು ಬದುಕಿನ ವೈರುಧ್ಯಗಳು ಸಮ್ಮಿಳಿತಗೊಂಡಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಒಂದು ಕಾಲಘಟ್ಟದ ಬರಹಗಳು ಇನ್ನೊಂದು ಕಾಲಕ್ಕೆ ಅನ್ವಯಿತವಾಗದೇ ಇರುವುದರಿಂದ ಬರಹಗಳು ಸ್ಥಾವರತೆಯನ್ನುಮ ಕಾಯ್ದುಕೊಳ್ಳುವುದು ಮುಖ್ಯ. ಚಾರಿತ್ರಿಕ ಅಂಶಗಳು ಹಾಗೂ ವ್ಯಕ್ತಿಯ ಮೇಲಿನ ಪ್ರಭಾವಗಳಿಂದ ಯಾರದೋ ಸುಳ್ಳಿಗೆ ಸಾಕ್ಷಿಯಾಗುವ ಗುಣ ಪತ್ರಕರ್ತರಿಗೆ ಇರಬಾರದು ಎಂದು ಹೇಳಿದರು.

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಉಪನ್ಯಾಸಕರಾದ ಡಾ. ಶ್ರೀನಿವಾಸ ಹೊಡೆಯಾಲ, ಸುಶ್ಮಿತಾ ಜಯಾನಂದ್, ಅಕ್ಷಯ್ ರೈ, ನಿಶಾನ್ ಕೋಟ್ಯಾನ್, ಇಂಚರಾ ಗೌಡ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿ ನಳಿನಿ ನಿರೂಪಿಸಿದರು.

Exit mobile version