Kundapra.com ಕುಂದಾಪ್ರ ಡಾಟ್ ಕಾಂ

ಪ್ರಜ್ಞಾವಂತ ಮತದಾರನಿಂದ ಉತ್ತಮ ನಾಯಕ: ಶಾಸಕ ವೈ.ಎಸ್.ವಿ. ದತ್ತ

ಕುಂದಾಪುರ: ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಪ್ರಜ್ಞಾವಂತರಾಗಿ ಕಾರ್ಯವೆಸಗಿದರೆ ಉತ್ತಮ ನಾಯಕರನ್ನು ಆರಿಸಲು ಸಾಧ್ಯವಿದೆ. ವ್ಯವಸ್ಥೆ ಸಂಪೂರ್ಣವಾಗಿ ಆರೋಗ್ಯಕರವಾಗಬೇಕಾದಲ್ಲಿ ರಾಜಕಾರಣಿಗಳ ಜೊತೆಗೆ ಮತದಾರರ ಕೊಡುಗೆ ಕೂಡ ಅಮೂಲ್ಯವಾದದು ಎಂದು ಕಡೂರು ಶಾಸಕ ಜೆಡಿಎಸ್ ಧುರೀಣ ವೈ.ಎಸ್.ವಿ.ದತ್ತ ಹೇಳಿದರು.

ಅವರು ಗುಂಡ್ಮಿಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಬಹುಮಖಿ ಸಾಲಿಗ್ರಾಮ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಮತ್ತು ವರ್ತಮಾನ ಪ್ರಸ್ತುತತೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಗಾಂಧಿ ಯುಗ ಅಂತ್ಯವಾಗಿದೆ ಪ್ರಾಮಾಣಿಕವಾಗಿ ರಾಜಕೀಯದಲ್ಲಿರುವ ನಾವು ನೀವು ವಾನಪ್ರಸ್ಥಾಶ್ರಮಕ್ಕೆ ತೆರಳುವ ಸಂದರ್ಭ ಬಂದಿದೆ. ಆದರೆ ನಿರಾಶೆಯಲ್ಲಿಯೂ ಕ್ರಿಯಾಶೀಲತೆಯನ್ನು ನಂಬಿ ಬಂದಿರುವ ನಾನು ವ್ಯವಸ್ಥೆಯ ಬದಲಾವಣೆಯ ಬಗ್ಗೆ ಇನ್ನೂ ಆಶಾವಾದಿಯಾಗಿ ಎದುರು ನೋಡುತ್ತಿದ್ದೇನೆ. ೧೨೧೫ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ದಿನ ಇಂಗ್ಲೇಂಡ್‌ನ ರಾಜ ಜಾನ್‌ನ ಆಡಳಿತ ವ್ಯವಸ್ಥೆ ವಿರುದ್ಧ ಜನಾದೋಲನವಾಗಿ ಮ್ಯಾಗ್ನಾ ಕಾರ್ಟಾ ನೀಡಿದಾಗ, ಆಡಳಿತ ವ್ಯವಸ್ಥೆ ಜನ ಶಕ್ತಿಯ ಮನವಿಗೆ ಬಾಗಿದ ದಿನವಾಗಿದೆ. ಆದರೆ ಇಂದು ಅಂತಹ ಮನವಿಗಳಿಗೆ ಸೂಕ್ತ ನ್ಯಾಯ ಸಿಗುವ ನಿರೀಕ್ಷೆ ಇರಿಸಿದರೆ ಅದು ಆಶ್ಚರ್ಯವೆನಿಸಿಕೊಳ್ಳುತ್ತದೆ. ನಮ್ಮ ದೇಶದ ಆಡಳಿತ ವ್ಯವಸ್ಥೆಗೆ ಸಂಸದೀಯ ಪ್ರಜಾಪ್ರಭುತ್ವವೇ ಸೂಕ್ತ ಮತ್ತು ಪ್ರಸ್ತುತ. ಆದರೆ ಅದರ ಮೌಲ್ಯವನ್ನು ಕಾಪಾಡಬೇಕಾದ ಅಗತ್ಯತೆ ಇದೆ. ಹಿಂದೆ ರಾಜಕಾರಣಿಗಳಿಗೆ ಜನರ ಬಗ್ಗೆ ಅಂಜಿಕೆ ಇತ್ತು, ಆದರೆ ಇಂದು ಜನರ ವಿಚಾರ ಬಿಡಿ ನಾನಾ ಕಾನೂನು ಕಟ್ಟಲೆಗಳಿದ್ದರೂ ಕೂಡ ಹೆದರಿಕೆ ಇಲ್ಲದಿರುವುದು ಬೇಸರದ ಸಂಗತಿ. ಈ ಹಿನ್ನಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮಾನದಂಡ ಬದಲಾಗಬೇಕಿದೆ ಅಗತ್ಯತೆ ಇದೆ ಎಂದರು.

ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು.

ಬಹುಮುಖಿ ಸಾಲಿಗ್ರಾಮದ ಡಾ.ಕೃಷ್ಣ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು. ಡಾ.ಸೂರ್ಯನಾರಾಯಣ ಉಪಾಧ್ಯ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಗರದ ಸಾಕೇತ ಕಲಾವಿದರಿಂದ ರಾಮ ನಿರ್ಯಾಣ ಯಕ್ಷಗಾನ ಕಾರ್ಯಕ್ರಮ ನಡೆಯಿತು.

ಅಶ್ವಥ್ ಆಚಾರ್ಯ ಯಡಬೆಟ್ಟು

Exit mobile version