Kundapra.com ಕುಂದಾಪ್ರ ಡಾಟ್ ಕಾಂ

ಮೇಕೋಡು: ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಉತ್ತಮ ಆಯ್ಕೆ – ಎಸ್. ಪ್ರಕಾಶ್ಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸ್ವಾವಲಂಭಿ ಬದುಕಿಗೆ ಹೈನುಗಾರಿಕೆ ಉತ್ತಮ ಆಯ್ಕೆಯಾಗಿದೆ. ಹೈನುಗಾರಿಕೆಯ ಅನುಭವ ಇಲ್ಲದವರೂ ತರಬೇತಿ ಪಡೆದು ಇದರಲ್ಲಿ ತೊಡಗಿಕೊಳ್ಳಲು ಅವಕಾಶವಿದೆ. ದುಡಿಯುವ ಕೈಗಳಿಗೆ ಕೆಲಸ ಸಿಗಬೇಕಿದ್ದರೆ ಸ್ವ-ಉದ್ಯೋಗದ ಮಾರ್ಗ ಉತ್ತಮವಾದುದು ಎಂದು ಮೇಕೋಡು ಹಾಲು ಉತ್ಪಾದರ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಅವರು ಶನಿವಾರ ಶ್ರೀ ಮೇಕೋಡಮ್ಮ ಸಭಾಭವನದಲ್ಲಿ ಜರುಗಿದ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿ ಮೇಕೋಡು ಸಂಘವು ಹಾಲು ಉತ್ಪಾದನೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು ವಾರ್ಷಿಕ 6,42,127 ಲೀ. ಹಾಲು ಸಂಗ್ರಹಿಸಿ ರೂ.1,92,02,862 ಹಣವನ್ನು ಸಂಘದ ಮೂಲಕ ಸದಸ್ಯರು ಪಡೆದುಕೊಂಡಿದ್ದಾರೆ. ವಾರ್ಷಿಕ ವಹಿವಾಟಿನಿಂದ ಸಂಘವು ರೂ.9.59 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಟ್ ಹಾಗೂ ಶೇ.65 ಉತ್ಪಾದಕರ ಬೋನಸ್ ನೀಡಲಾಗುತ್ತದೆ ಎಂದರು.

ಮೇಕೋಡು ಸಾಂದ್ರ ಶೀತಲೀಕರಣ ಘಟಕದಿಂದ ಆರಂಭಿಸಿದ ಬಳಿಕ ಪ್ರತಿನಿತ್ಯ ಅಂದಾಜು 8,000 ಲೀ.ನಷ್ಟು ಹಾಲು ಪೂರೈಕೆ ಮಾಡಲಾಗುತ್ತಿದ್ದು ಅದರ ಪ್ರಮಾಣ ಮುಂದೆ ಹೆಚ್ಚಲಿದೆ. ದೂರದಿಂದ ಹಾಲು ಪೂರೈಕೆ ಮಾಡುವ ಕಡೆಗಳಿಗೆ ಸಂಘದ ಮೂಲಕ ವಾಹನ ಕಳುಹಿಸಿ ಹೆಚ್ಚುವರಿ ಹಾಲನ್ನು ಶೀತಲೀಕರಣ ಘಟಕಕ್ಕಾಗಿ ಸಂಗ್ರಹಿಸುವ ಯೋಜನೆಯಿದ್ದು, ಇದರಿಂದ ಹಾಲು ಉತ್ಪಾದಕರಿಗೂ ಅನುಕೂಲವಾಗಲಿದೆ ಎಂದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಕೃಷಿ ಅಧಿಕಾರಿ ಈಶ್ವರ ನಾಯ್ಕ್ ಕೃಷಿ ಮಾಹಿತಿಯನ್ನು, ಕೆಎಂಎಫ್ ಬೈಂದೂರು ವಲಯ ವಿಸ್ತರಣಾಧಿಕಾರಿ ರಾಜರಾಮ ಹೈನುಗಾರಿಕೆ ಮಾಹಿತಿಯನ್ನು ನೀಡಿದರು.

ಸಂಘಕ್ಕೆ ಕಳೆದ ಸಾಲಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಾಲು ಪೂರೈಕೆ ಮಾಡಿದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಸಂತೋಷ ಗೌಡ, ಚಂದ್ರಶೀಲ ಶೆಟ್ಟಿ, ಶ್ಯಾಮಲ ಶೆಟ್ಟಿ, ಉಮೇಶ್ ಪೂಜಾರಿ ಅವರನ್ನು ಗೌರವಿಸಲಾಯಿತು. ಹೆಚ್ಚಿನ ಹಾಲು ಪೂರೈಕೆದಾರರಿಗೆ ವಿವಿಧ ಬಹುಮಾನಗನ್ನು ವಿತರಿಸಲಾಯಿತು. ಬೈಂದೂರು ವಲಯ ವಿಸ್ತರಣಾಧಿಕಾರಿ ರಾಜರಾಮ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಸಂತೋಷ ಗೌಡ ಕೊಣಾಲ್, ನಿರ್ದೇಶಕರುಗಳಾದ ಗೋಪಾಲ ಶೆಟ್ಟಿ, ಎನ್. ಪದ್ಮನಾಭ ಅಡಿಗ, ವೈ. ಜಯರಾಮ ಹೆಬ್ಬಾರ್, ವೈ. ಗೋವಿಂದ ಹೆಬ್ಬಾರ್, ಎಂ.ಎನ್. ಬಾಬು ಪೂಜಾರಿ, ಭಾಸ್ಕರ ದೇವಾಡಿಗ ಉಳ್ಳೂರು, ಉಮೇಶ ಪೂಜಾರಿ ಉಪ್ರಳ್ಳಿ, ಕುಷ್ಟು ಯರುಕೋಣೆ, ಲೀಲಾವತಿ ಪೂಜಾರಿ ಉಪ್ರಳ್ಳಿ, ಸುಶೀಲ ಗಾಣಿಗ ನೂಜಾಡಿ, ಗೌರಿ ಬಿ. ಉಳ್ಳೂರು ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಕುಶಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಹಾಲು ಪರೀಕ್ಷಕಿಯರಾದ ಸುಮನ, ಸರೋಜ, ಗೀತಾ ಸಹಕರಿಸಿದರು.

Exit mobile version