Kundapra.com ಕುಂದಾಪ್ರ ಡಾಟ್ ಕಾಂ

ಮಿತ್ರ ಸೇವಾಶ್ರಯ ಸಮಿತಿ ವಾರ್ಷಿಕೋತ್ಸವ ಮತ್ತು ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಾಮಾಜಿಕ ಕಳಕಳಿ, ನೊಂದ ಜೀವಗಳಿಗೆ ಸ್ಪಂದನೆ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡುವ ಸಂಘಟನೆಗಳ ಕಾರ್ಯ ಸ್ವತಂತ್ರ ಭಾರತದ ಅಮೃತ ಮಹೋತ್ಸವ ಆಚರಣೆಯ ಮಹತ್ವ ಮತ್ತು ಅರ್ಥವನ್ನು ಇಮ್ಮಡಿಗೊಳಿಸುತ್ತದೆ. ಈ ನಿಟ್ಟಿನಲ್ಲಿ ಮಿತ್ರ ಸೇವಾಶ್ರಯ ಸಮಿತಿಯ ಕಾರ್ಯ ಚಟುವಟಿಕೆಗಳು ಶ್ಲಾಘನೀಯ ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕರಾದ ನವೀನ್ ಎಚ್ ಜೆ ನುಡಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ಸಹಯೋಗದೊಂದಿಗೆ ಆಯೋಜಿಸಿದ ಸ್ವಾತಂತ್ರ್ಯ ಅಮೃತಮಹೋತ್ಸವ ಸಾಧಕರಿಗೆ ಸನ್ಮಾನ ವನಮಹೋತ್ಸವ ಮತ್ತು ಮಿತ್ರ ಸೇವಾಶ್ರಯ ಸಮಿತಿಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು

ಕಾಲೇಜಿನ ಪ್ರಾಂಶುಪಾಲರಾದ ಡಾ ರಘು ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ನೌಕಾ ಸೇನೆ ಯೋಧರಾದ ಬಾಬು ಪೂಜಾರಿ ಮತ್ತು ಭೂಸೇನೆಯ ನಿವೃತ್ತ ಯೋಧರಾದ ಗಣಪತಿ ಖಾರ್ವಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಉತ್ತೀರ್ಣರಾದ ಹಳೆ ವಿದ್ಯಾರ್ಥಿ ಸಿ ಎ ಪ್ರವೀಣ್ ಶೆಟ್ಟಿ ಮತ್ತು ಹಾಲಿ ವಿದ್ಯಾರ್ಥಿ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಧನರಾಜ್ ರವರನ್ನು ಸನ್ಮಾನಿಸಲಾಯಿತು ಮತ್ತು ಕಾಲೇಜಿನ ಆವರಣದಲ್ಲಿನ “ಸ್ವಾತಂತ್ರ್ಯ ಅಮೃತಮಹೋತ್ಸವ ಉದ್ಯಾನವನದಲ್ಲಿ” ನೂರು ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಿತ್ರ ಸೇವಾಶ್ರಯ ಸಮಿತಿಯ ಅಧ್ಯಕ್ಷರಾದ ಹರೀಶ್, ಮತ್ತು ಜೆ ಸಿ ಬೈಂದೂರು ಸಿಟಿಯ ಉಪಾಧ್ಯಕ್ಷರಾದ ರಾಘವೇಂದ್ರ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ ಸಣ್ಣ ಚಿಕ್ಕಯ್ಯ ಉಪಸ್ಥಿತರಿದ್ದರು .

ಮಿತ್ರ ಸೇವಾಶ್ರಯ ಸಮಿತಿಯ ಉಪಾಧ್ಯಕ್ಷರಾದ ಸುಧಾಕರ ಪ್ರಾಸ್ತಾವಿಕ ನುಡಿಗಳನ್ನು ಆಡಿದರ . ಕಾರ್ಯದರ್ಶಿ ಭಾಸ್ಕರ್ ಸ್ವಾಗತಿಸಿದರು. ಕುಮಾರಿ ಪ್ರತಿಮಾ ಪ್ರಾರ್ಥನೆಗೈದರು ಹಾಗೂ ವಿದ್ಯಾರ್ಥಿನಿ ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

Exit mobile version