Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟದ ಹಿರಿಯ ಅರ್ಥದಾರಿ ನಾರಾಯಣ ಬಿಲ್ಲವ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಸೂತ್ರಧಾರ ಹಾಗೂ ಅರ್ಥಧರಿ, ಹಿರಿಯ ಗೊಂಬೆಯಾಟ ಕಲಾವಿದ ಹೆಮ್ಮಾಡಿ ಹೇಮಾಪುರ ನಿವಾಸಿ ನಾರಾಯಣ ಬಿಲ್ಲವ (63) ಅನಾರೋಗ್ಯದಿಂದ ಸೋಮವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ನಾರಾಯಣ ಬಿಲ್ಲವ ಅವರು ಕಳೆದ 43 ವರ್ಷದಿಂದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಖಾಯಂ ಕಲಾವಿದರಾಗಿದ್ದು, ಹತ್ತು ಹಲವು ವಿದೇಶದಲ್ಲಿ ನಡೆದ ಗೊಂಬೆಯಾಟ ಪ್ರದರ್ಶನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅರ್ಥ ಹೇಳುತ್ತಿದ್ದರು. ಕನ್ನಡ, ಕೊಂಕಣಿ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಹಿಡಿತ ಹೊಂದಿದ್ದ ಅವರು ಗೊಂಬೆಯಾಟದ ಸೂತ್ರಧಾರಿ ಹಾಗೂ ಅರ್ಥದಾರಿಯಾಗಿ ಜನ ಮಾನಸದಲ್ಲಿ ನೆಲೆಯೂರಿದ್ದರು.

ಉಪ್ಪಿನಕುದ್ರು ಗೊಂಬೆಯಾಟದ ಸಂಸ್ಥಾಪಕ ಕೊಗ್ಗ ದೇವಣ್ಣ ಕಾಮತ್ ಅವರ ಒಡನಾಡಿಯಾಗಿದ್ದು, ಅವರೊಟ್ಟಿಗೂ ತಿರುಗಾಟ ಮಾಡಿದ್ದ ಅವರು, ಮುಂದೆ ಕೊಗ್ಗ ಕಾಮತ್ ಅವರ ಪುತ್ರ ಭಾಸ್ಕರ ಕೊಗ್ಗ ಕಾಮತ್ ಜೊತೆ ಕಲಾವಿದರಾಗಿ ಮುಂದುವರಿದಿದ್ದರು.

ಓದಿದ್ದು ಸ್ವಲ್ಪವಾದರೂ ಇಂಗ್ಲಿಷ್, ಹಿಂದಿ ಭಾಷೆಯ ಅವರ ಹಿಡಿತ ನಿಜಕ್ಕೂ ಅಬ್ದುತ ವಾಗಿತ್ತು. ಕೊಂಕಣಿ ಭಾಷೆ ನಿರ್ಗಳವಾಗಿ ಹರಿದು ಬರುತ್ತಿತ್ತು. ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು. ಮೃತರು ಪತ್ನಿ, ಕುಟುಂಬಿಕರನ್ನು ಅಗಲಿದ್ದಾರೆ. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಹಾಗೂ ಸಹ ಕಲಾವಿದರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

Exit mobile version