Kundapra.com ಕುಂದಾಪ್ರ ಡಾಟ್ ಕಾಂ

ಉದಯ ಕುಮಾರ್ ಎಂ.ಪಿ ಅವರಿಗೆ ಉತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಉದಯ ಕುಮಾರ್ ಎಂ.ಪಿ ಅವರು ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ನೀಡಲಾಗುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೈಂದೂರು ಮಯ್ಯಾಡಿಯವರಾದ ಉದಯ ಕುಮಾರ್ ಅವರು ನ್ಯೂ ಇಂಗ್ಲಿಷ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಶಾಸ್ತ್ರ ಉಪನ್ಯಾಸಕರಾಗಿ ಸೇವೆ ಆರಂಭಿಸಿ ನಂತರ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರು. 2009ರಲ್ಲಿ ಸರಕಾರಿ ಸೇವೆಗೆ ಸೇರಿ ಸರಕಾರಿ ಪದವಿ ಪೂರ್ವ ಕಾಲೇಜು ಮುಂಡುಗೋಡುವಿನಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಬೈಂದೂರು ಸ.ಪ.ಪೂ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬೈಂದೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಎಮ್.ಪಿ.ನಾಗಪ್ಪ ಶೇರುಗಾರ್ ಹಾಗೂ ಕಮಲ ಇವರ ಪುತ್ರರಾದ ಉದಯ ಕುಮಾರ್ ಅವರು ಪ್ರಾಥಮಿಕ ಶಿಕ್ಷಣ ವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿ.ಪ್ರಾ ಶಾಲೆ ಮಯ್ಯಾಡಿಯಲ್ಲಿ ಪೂರೈಸಿ, ಫ್ರೌಡ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು ಹಾಗೂ ಸರಕಾರಿ ಪ್ರೌಢ ಶಾಲೆ ಕಂಬದಕೋಣೆಯಲ್ಲಿ ಪೂರೈಸಿ, ಪದವಿಪೂರ್ವ ಶಿಕ್ಷಣ ವನ್ನು ಅಂಜುಮನ್ ಆರ್ಟ್ ಸಾಯನ್ಸ್ ಕಾಲೇಜು, ಭಟ್ಕಳ, ಬಿ ಎಸ್ಸಿ ಪದವಿಯನ್ನು ಕುಂದಾಪುರದ ಭಂಡಾರ್ಕಸ್ ಪದವಿ ಕಾಲೇಜಿನಲ್ಲಿ ಪೂರೈಸಿ, ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. ನಂತರ ಎಮ್.ಬಿ.ಎ ಪದವಿಯನ್ನು ಕರ್ನಾಟಕದ ಮುಕ್ತ ವಿಶ್ವವಿದ್ಯಾನಿಲಯದಿಂದ, ಎಮ್.ಫಿಲ್ ಪದವಿಯನ್ನು ಆಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯದಿಂದ ಪಡೆದಿರುತ್ತಾರೆ.

ಉತ್ತಮ ಗಣಿತಶಾಸ್ತ್ರ ಉಪನ್ಯಾಸಕರಾಗಿರುವ ಇವರು ಸಾವಿರಾರು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಿದ್ದಗೊಳಿಸಿ ಯಶಸ್ವಿಗೆ ಕಾರಣೀಭೂತರಾಗಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನ್ಯಾಸಕರಿಗೆ ಆಯೋಜಿಸಿದ್ದ ಟಿ.ಎ.ಎಲ್.ಪಿ ತರಬೇತಿಯ ಮಾಸ್ಟರ್ ಟ್ರೈನರ್ ಆಗಿದ್ದು ಉತ್ತಮ ಗುಣಮಟ್ಟದ ತರಬೇತಿಯನ್ನು ಉಪನ್ಯಾಸಕರಿಗೆ ನೀಡಿರುತ್ತಾರೆ.

ಕೋವಿಡ್ ಸಂಧರ್ಭದಲ್ಲಿ ಪಾಠಗಳು ಕುಂಠಿತಗೊಂಡಿದ ಸಂಧರ್ಭದಲ್ಲಿ ಆನ್ಲೈನ್ ಮೂಲಕ ರಾಜ್ಯದಾದ್ಯಂತ 25,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತವಾಗಿ ತರಬೇತಿ ನೀಡಿ ಸಜ್ಜುಗೊಳಿಸಿದ್ದರಲ್ಲದೇ ರಾಜ್ಯದಾದ್ಯಂತ 30,000 ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷೆಗಳನ್ನು ಆನ್ ಲೈನ್ನಲ್ಲಿ ನಡೆಸಿದ್ದು ರಾಜ್ಯದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು.

ಎಲ್ಲಾ ವಿದ್ಯಾರ್ಥಿಗಳು ಉಚಿತವಾಗಿ ಸಿಇಟಿ, ನೀಟ್, ಜೆಇಇ ಪರೀಕ್ಷೆಗೆ ಸಿದ್ಧಗೊಳ್ಳಬೇಕೆಂಬ ಹಂಬಲದೊಂದಿಗೆ ಇವರು ಅಭಿನವ್ ಅಕಾಡೆಮಿ ಎಂಬ ಉಚಿತ ಯೂ ಟ್ಯೂಬ್ ಚ್ಯಾನಲ್ ನಿರ್ಮಿಸಿ ಅದರ ಮೂಲಕ ನೀಡುವ ನಿರಂತರವಾಗಿ ಸರಳ ಪಾಠಗಳು ಉಚಿತವಾಗಿ ವಿದ್ಯಾರ್ಥಿಗಳನ್ನು ತಲುಪುತ್ತಿದೆ

ಶಿಕ್ಷಕರ ದಿನಾಚರಣೆಯಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಗುತ್ತದೆ.

Exit mobile version