Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ, 40.15 ಲಕ್ಷ ರೂ. ಲಾಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಮೋಹನ ಪೂಜಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘ ವರದಿ ವರ್ಷದಲ್ಲಿ ರೂ. 96.80 ಕೋಟಿ ವ್ಯವಹಾರ ನಡೆಸಿ, ರೂ. 40.15 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಮುಂದಿನ ದಿನಗಳಲ್ಲಿ 100 ಕೋಟಿ ರೂ. ವ್ಯವಹಾರದ ಗುರಿಯಿರಿಸಿಕೊಳ್ಳಲಾಗಿದೆ. ಸಂಘವು ಪ್ರಾರಂಭದಿಂದಲೂ ಲಾಭದಲ್ಲಿಯ್ಲೇ ಮುನ್ನಡೆಯುತ್ತಿದ್ದು, ಕಳೆದ 30 ವರ್ಷಗಳಿಂದ ನಿರಂತರ ಡಿವಿಡೆಂಟ್ ನೀಡಿರುವ ಹೆಗ್ಗಳಿಕೆ ಗಳಿಸಿದೆ. ಈ ಭಾರಿ 10% ಡಿವಿಡೆಂಟ್ ಘೋಷಿಸಲಾಗಿದೆ. ಪ್ರಧಾನ ಕಚೇರಿಗೆ ಸುಸಜ್ಜಿತವಾದ ಸಹಕಾರಿ ಸಂಕೀರ್ಣ ನಿರ್ಮಾಣ ಯೋಜನೆಯಿದ್ದು, ಅದಕ್ಕಾಗಿ ಜಾಗ ಮೀಸಲಿರಿಸಲಾಗಿದೆ. ಸಂಘದ ಕಾರ್ಯ ಕ್ಷೇತ್ರದಲ್ಲಿ ಎರಡನೇ ಶಾಖೆ ತೆರೆಯುವುದು ಸೇರಿದಂತೆ ಹಲವು ಯೋಜನೆಗಳನ್ನು ಕಾರ್ಯಕತಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಸಂಘದ ಹಿರಿಯ ಸದಸ್ಯರುಗಳನ್ನು ಗೌರವಿಸಲಾಯಿತು. ವೈದ್ಯಕೀಯ ಪದವಿ ಪೂರೈಸಿದ ಡಾ. ನಿಖಿತಾ ಎಂ. ಪೂಜಾರಿ, ಡಾ. ರಾಜೇಶ್ ಬಿಲ್ಲವ, ಬಿಎಎಂಎಸ್ ಪೂರೈಸಿದ ಡಾ. ಪ್ರೀತಿ ಎಂ. ಪೂಜಾರಿ ಹಾಗೂ ಡಾ. ಭವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಬಿಸಿಎ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ ದೀಕ್ಷಾ ಗೋವಿಂದ ಪೂಜಾರಿ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ರ‍್ಯಾಂಕ್ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.

ಉಪಾಧ್ಯಕ್ಷ ತಿಮ್ಮಪ್ಪ ಪೂಜಾರಿ, ನಿರ್ದೇಶಕರಾದ ಹೆಚ್. ನರಸಿಂಹ ಪೂಜಾರಿ, ಬಿ. ನಾರಾಯಣ ಪೂಜಾರಿ, ಮಂಜ ಪೂಜಾರಿ, ರಾಜು ಪೂಜಾರಿ, ಸುರೇಶ ಪೂಜಾರಿ, ಸಂತೋಷ, ಶಾರದಾ, ಲಕ್ಷ್ಮೀ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಕಾರಿ ಮಹೇಶ್ ಹೆಚ್. ವಾರ್ಷಿಕ ವರದಿ, ಲೆಕ್ಕಪತ್ರ, ಮುಂದಿನ ವರ್ಷದ ಅಂದಾಜು ಆಯವ್ಯಯ ಪತ್ರ ಮಂಡಿಸಿದರು.

Exit mobile version