Kundapra.com ಕುಂದಾಪ್ರ ಡಾಟ್ ಕಾಂ

ಕಾಲದ ಆಘಾತ ತಡೆದು ನಿಂತ ಸತ್ವಭರಿತ ಕಲೆ ಯಕ್ಷಗಾನ: ಗೃಹ ಸಚಿವ ಅರಗ ಜ್ಞಾನೇಂದ್ರ

ನಾಗೂರಿನಲ್ಲಿ ಯಕ್ಷಗಾನ ತಾಳಮದ್ದಲೆ ಸಪ್ತಾಹ ಉದ್ಘಾಟಿಸಿ ಅಭಿಮತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಯಕ್ಷಗಾನ, ತಾಳಮದ್ದಲೆಯಂತಹ ಹತ್ತಾರು ಕಲಾ ಪ್ರಾಕಾರಗಳು ಸಾಂಸ್ಕೃತಿಕ ತಳಹದಿಯಲ್ಲಿ ಬೆಳೆದು ಬಂದಿದೆ. ಕಾಲದ ಆಘಾತಗಳನ್ನು ತಡೆದು ನಿಲ್ಲುವ ಶಕ್ತಿ ಸತ್ವಭರಿತ ಕಲೆಯಾದ ಯಕ್ಷಗಾನಕ್ಕಿದೆ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಪ್ರಸ್ತುತಿಯಲ್ಲಿ ಕಿರಿಮಂಜೇಶ್ವರ-ನಾಗೂರು ಸುತ್ತಲಿನ ನಾಗರಿಕರ ಸಹಯೋಗದಲ್ಲಿ ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದ ಕೋಟ ವೈಕುಂಠ ನಾಯ್ಕರ ಸ್ಮರಣ ವೇದಿಕೆಯಲ್ಲಿ ನಡೆದ ೮ನೇ ವರ್ಷದ ಯಕ್ಷಗಾನ ತಾಳಮದ್ದಲೆ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಪರಂಪರೆಯ ಪ್ರದರ್ಶನಗಳಿಗೆ ಹೋಲಿಸಿದಾಗ ಈಗಿನವು ಅಂತ:ಸತ್ವ ಕಳೆದುಕೊಂಡಿವೆ ಎಂಬ ಟೀಕೆ ಇದೆ. ಯಕ್ಷಗಾನ ತಾಳಮದ್ದಲೆ ಪುರಾಣಗಳನ್ನು ಪ್ರತಿಪಾದಿಸುವ ತತ್ವಾದರ್ಶಗಳನ್ನು ತೆರೆದಿಡುತ್ತದೆ. ಪುರಾಣಗಳ ಮರು ಅವಲೋಕನ ಮತ್ತು ಮರುಸೃಷ್ಟಿಯ ಮೂಲಕ ಅವುಗಳಲ್ಲಿ ಸಮಕಾಲೀನ ಸನ್ನಿವೇಶಗಳಿಗೆ ಮತ್ತು ಬದುಕಿಗೆ ಅನ್ವಯವಾಗುವ ವಿಚಾರಗಳನ್ನು ಹೊರಗೆಡವಲಾಗುತ್ತದೆ. ಆದುದರಿಂದ ಅದು ನಿಜ ಅರ್ಥದಲ್ಲಿ ಒಂದು ಜ್ಞಾನಯಜ್ಞವಾಗಿದೆ ಎಂದರು.

ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾಪೋಷಕರು ಹಾಗೂ ಪ್ರೇಕ್ಷಕರು ಕಲೆ ಮತ್ತು ಕಲಾವಿದರ ಹಿಂದಿರುವ ದೊಡ್ಡಶಕ್ತಿ. ಸಾಂಸ್ಕೃತಿಕ ಅಭಿರುಚಿ, ಅಭಿಮಾನ ಹಾಗೂ ಹಿರಿಯರ ಸನ್ನಡತೆಯ ಸಹಕಾರದಿಂದ ಸತತ ಎಂಟು ವರ್ಷಗಳಿಂದ ಆಚರಿಸುತ್ತಾ ಬಂದಿರುವ ಯಕ್ಷಗಾನ ತಾಳಮದ್ದಲೆ ಸಪ್ತಾಹ ಪರಿಸರದ ಕಲಾಸಕ್ತರ ಮನಮುಟ್ಟುವಲ್ಲಿ ಯಶಸ್ಸು ಕಂಡಿರುವುದು ಕಲಾಕೃಷಿಯ ಸಾರ್ಥಕತೆಯನ್ನು ಬಿಂಬಿಸುತ್ತದೆ ಎಂದರು.

ನಿವೃತ್ತ ಯಕ್ಷಗಾನದ ಖ್ಯಾತ ಸ್ತ್ರೀವೇಷಧಾರಿ ದಯಾನಂದ ಬಳೆಗಾರ್ ದಂಪತಿಯನ್ನು ಸಚಿವರು ತೆಕ್ಕಟ್ಟೆ ಆನಂದ ಮಾಸ್ತರ್ ನೆನಪಿನ ಕಲಾತಪಸ್ವಿ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು. ಟ್ರಸ್ಟ್ ವತಿಯಿಂದ ಗೃಹಸಚಿವರನ್ನು ಸನ್ಮಾನಿಸಲಾಯಿತು.

ಉದ್ಯಮಿ ಉಮೇಶ ಕೋಟ ವೈಕುಂಠ ನಾಯ್ಕ್, ಅರ್ಥಧಾರಿ ಉಜಿರೆ ಅಶೋಖ ಭಟ್, ಸುನಂದಾ ಆನಂದರಾಯ ಶ್ಯಾನುಭಾಗ್ ಉಪಸ್ಥಿತರಿದ್ದರು. ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಸ್ವಾಗತಿಸಿ ಪ್ರಾಸ್ತಾವಿಸಿದರು. ಗೋವಿಂದ ಎಂ. ನಿರೂಪಿಸಿದರು.

Exit mobile version