Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮಕ್ಕಳು ಮನೆಯ ಸಂಪತ್ತು. ಮಗುವಿನ ಆಗು ಹೋಗುಗಳನ್ನು ಪೋಷಕರು ಅರಿತುಕೊಳ್ಳಬೇಕು. ಪರಸ್ಪರ ಪ್ರೀತಿ ವಿಶ್ವಾಸ ಅವರಲ್ಲಿ ಬೆಳೆಸಬೇಕು ಎಂದು ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕ ಹಾಗೂ ಆಪ್ತ ಸಮಾಲೋಚರಾದ ಲೆಸ್ಲಿ ಆರೋಜಾರವರು ಹೇಳಿದರು.

ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ರಕ್ಷಕ-ಶಿಕ್ಷಕ ಸಭೆಯಲ್ಲಿ ಅವರು ವಿದ್ಯಾರ್ಥಿಗಳ ಪೋಷಕರನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ದೊಡ್ಡದು. ಯೌವನ ಕಾಲಿಡುತ್ತಿರುವಾಗ ಮಕ್ಕಳ ಕಡೆ ತಮ್ಮ ಗಮನ ಅವಶ್ಯ. ಮಾದಕ ವಸ್ತುಗಳ ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕರು, ಸ್ಥಳೀಯ ಚರ್ಚಿನ ಧರ್ಮಗುರುಗಳಾದ ಅ| ವಂ| ಫಾದರ್ ಸ್ಟ್ಯಾನಿ ತಾವರೋ ಅವರು ಮಾತನಾಡಿ ಪೋಷಕರಿಗೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಅವರ ಆಹಾರಕ್ರಮದ ಕಡೆ ತಮ್ಮ ಗಮನವಿರಲಿ. ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ತಯಾರಿ ಅಗತ್ಯ. ನಮ್ಮ ವಿದ್ಯಾ ಸಂಸ್ಥೆಯು ಸ್ಪರ್ಧಾತ್ಮಕ ಪರೀಕ್ಷೆ ಗೆ ಎಲ್ಲಾ ರೀತಿಯ ತರಬೇತಿ ನೀಡುತ್ತದೆ. ತಮ್ಮ ಮಕ್ಕಳನ್ನು ಕಳಿಸಿ ಪ್ರೋತ್ಸಾಹಿಸಿ ಎಂದರು.

ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಷ್ಮಾ ಫೆರ್ನಾಂಡಿಸ್, ಉಪ ಪ್ರಾಂಶುಪಾಲರಾದ ಮಂಜುಳಾ ನಾಯರ್, ಕಾರ್ಯಕ್ರಮದ ಸಂಯೋಜಕರು, ಅರ್ಥಶಾಸ್ತ್ರ ಉಪನ್ಯಾಸಕರಾದ ಪ್ರೀತಿ ಕ್ರಾಸ್ತಾ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ನಾಗರಾಜ್ ಶೆಟ್ಟಿ ಸ್ವಾಗತಿಸಿದರು. ಸಂಯೋಜಕರಾದ ಪ್ರೀತಿ ಕ್ರಾಸ್ತಾರವರು ವಂದಿಸಿ, ರಸಾಯನಶಾಸ್ತ್ರದ ಉಪನ್ಯಾಸಕಿ ಉಷಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತ್ತು.

Exit mobile version