Kundapra.com ಕುಂದಾಪ್ರ ಡಾಟ್ ಕಾಂ

ದೈವದಬ್ಬರ, ಮನುಷ್ಯ – ಮರ – ಸರಕಾರದ ಸುತ್ತ ಹೆಣೆದ ಕತೆ ‘ಕಾಂತಾರ’ | ಪಿಚ್ಚರ್ ಲಾಯ್ಕ್ ಇತ್ತ್ ಕಾಣಿ

ಕುಂದಾಪ್ರ ಡಾಟ್ ಕಾಂ.
ಸಿನಿಮಾದೊಳಕ್ಕೆ ದೈವದ ಅಬ್ಬರ, ಗರ್ನಲ್ ಸದ್ದು ಮಾಡಿದ್ರೇ, ಹೊರಗಡೆ ಕನ್ನಡ ಚಿತ್ರರಂಗವೇ ಕಂಪಿಸುವಂತೆ ಸದ್ದು ಮಾಡುತ್ತಿದೆ ‘ಕಾಂತಾರ’.

ಕಾಡಿನ ಮಕ್ಕಳಾಗಿ, ಅದರ ಜೊತೆಗೆ ಬೆಸೆದುಕೊಂಡು ಬದುಕುವ ಊರಿನ ಜನ. ಕಾಡಿನ ಒಂದಡಿ ಭೂಮಿಯನ್ನು ಒತ್ತುವರಿ ಆಗದಂತೆ ತಡೆಯಬೇಕೆಂಬ ಅರಣ್ಯಾಧಿಕಾರಿ. ಇದರ ಲಾಲಸೆಯ ಬುದ್ಧಿಯುಳ್ಳ ರಾಜಕಾರಣಿ… ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರೇ ಹೇಳುವಂತೆ ಇದು ‘ಮಾನವ ಮತ್ತು ಪ್ರಕೃತಿ ಸಂಘರ್ಷ’. ಎರಡೂವರೆ ಗಂಟೆಯಲ್ಲಿ ಈ ಎಲ್ಲೆವನ್ನೂ ಹಿಡಿದಿಟ್ಟ, ಕಟ್ಟಿಕೊಟ್ಟ ಪರಿ ಮಾತ್ರ ಬೆರಗುಮೂಡಿಸುತ್ತೆ. ಇದರಲ್ಲಿ ಆಂಗ್ರಿಯಂಗ್ಮ್ಯಾನ್ ಲುಕ್ನಲ್ಲಿರುವ ಶಿವ (ರಿಷಬ್ ಶೆಟ್ಟಿ) ಬಂಡಾಯ ರೂಪಕವಾಗಿ ಕಾಣಿಸಿಕೊಳ್ಳುತ್ತಾನೆ. ಕೊನೆಯಲ್ಲಿ ತನ್ನ ನೈಜ ಅಸ್ತಿತ್ವವನ್ನು ಗ್ರಹಿಸುವ ಮೂಲಕ ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ಯತ್ನಿಸುತ್ತಾನೆ. ಇದು ಹೇಗೆ ಸಫಲವಾಗುತ್ತೇ ಎಂಬುದೇ ಕಥೆ ತಿರುಳು.

ಕರಾವಳಿಯ ನೆಲದ ಸಂಪ್ರದಾಯವಾದ ಕಂಬಳ ಮತ್ತು ಭೂತ ಕೋಲ ಜೀವಂತಗೊಳಿಸುವ ದೃಶ್ಯ ವೈಭವ ಕಾಂತಾರದಲ್ಲಿದೆ. ಕರಾವಳಿ ಜನರ ಧಾರ್ಮಿಕ ನಂಬಿಕೆಗಳು ಹಾಗೂ ಭಾವನೆಗಳನ್ನು ಅತ್ಯುತ್ತಮವಾಗಿ ತೋರಿಸುವ ಪ್ರಯತ್ನವನ್ನು ರಿಷಬ್ ಮಾಡಿದ್ದಾರೆ. ಮೂಲ ನಿವಾಸಿಗಳು ಕಥೆ ವ್ಯಥೆಯನ್ನು ಸುಂದರವಾಗಿ ಹೆಣೆಯುವ ಕಾರ್ಯ ಮಾಡಲಾಗಿದೆ.

ನಿರ್ದೇಶಕರಾಗಿ ರಿಷಬ್ ಪ್ರತಿ ಫ್ರೇಮ್’ನ್ನೂ ಸುಂದರವಾಗಿಸಿದ್ದಾರೆ. ಹೊಸ ಥರದ ಪಾತ್ರಕ್ಕೆ ಸಮರ್ಥವಾಗಿ ಜೀವ ತುಂಬಿದ್ದಾರೆ. ಹಾಗೆಯೇ, ಕೊನೆಯ ಇಪ್ಪತ್ತು ನಿಮಿಷ ಯಾರೂ ಊಹಿಸಲಾರದಂತಹ ನಟನೆಯನ್ನು ಮಾಡಿದ್ದಾರೆ. ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಅವರದ್ದು ಸಹಜಾಭಿನಯ. ಕಿಶೋರ್ ಹಾಗೂ ಅಚ್ಯುತ್ ಕುಮಾರ್ ಎಂದಿನಂತೆ ತಮ್ಮ ಪಾತ್ರಕ್ಕೆ ಪರಿಪೂರ್ಣತೆಯನ್ನು ತಂದುಕೊಟ್ಟಿದ್ದಾರೆ. ಅವರಿಬ್ಬರ ನಟನೆಯನ್ನು ತೆರೆಮೇಲೆ ನೋಡಿ ಆಸ್ವಾದಿಸುವುದೇ ಒಂದು ಖುಷಿ. ಅಮ್ಮನಾಗಿ ಮಾನಸಿ ಸುಧೀರ್ ಇಷ್ಟವಾಗುತ್ತಾರೆ. ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ಸ್ಯಾನಿಲ್ ಗುರು, ರಘು ಪಾಂಡೇಶ್ವರ್, ಯೋಗೀಶ್ ಬಂಕೇಶ್ವರ ನಟನೆ ಕೂಡ ಖುಷಿ ನೀಡುತ್ತದೆ.

ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಾಹಕ ಈ ಸಿನೆಮಾ ಗಟ್ಟಿಯಾಗಿ ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಪ್ರಮೋದ್ ಮರವಂತೆ ರಚನೆಯ ‘ಸಿಂಗಾರದ ಸಿರಿಯೇ’ ಕಚಗುಳಿಯಿಡುತ್ತೆ. ಪ್ರಗತಿ ರಿಷಬ್ ಶೆಟ್ಟಿ ಅವರು ಸಿನೆಮಾದ ವಸ್ತ್ರವಿನ್ಯಾಸಕಿಯಾಗಿ ಗೆದ್ದಿದ್ದಾರೆ. ಕಲಾ ನಿರ್ದೇಶಕರುಗಳ ಶ್ರಮ ಚಿತ್ರದಲ್ಲಿ ದೊಡ್ಡದಾಗಿಯೇ ಇದೆ. ಹೊಂಬಾಳೆ ಫಿಲಂಲ್ಸ್’ನಂತಹ ದೊಡ್ಡ ಪ್ರೊಡಕ್ಷನ್ ಹೌಸ್ ಇಂತಹದ್ದೊಂದು ಚಿತ್ರ ನಿರ್ಮಿಸಿರುವುದು ಅದರ ಕೀರ್ತಿಕಲಶಕ್ಕೆ ಇನ್ನೊಂದು ಗರಿ ಮೂಡಿದಂತಾಗಿದೆ.

Exit mobile version