Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಒಂದೇ ದಿನದಲ್ಲಿ ವಿದ್ಯಾರ್ಥಿ ಅಪಹರಣ ಪ್ರಕರಣದ ಭೇದಿಸಿದ ಪೊಲೀಸರು. ಹಣಕ್ಕಾಗಿ ಸಂಚು?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ನ.02:
ಕಾಲೇಜು ವಿದ್ಯಾರ್ಥಿಯೋರ್ವನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, 24 ಗಂಟೆಯೊಳಗೆ ಕುಂದಾಪುರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪಹರಣಕ್ಕೊಳಗಾದ ವಿದ್ಯಾರ್ಥಿಯನ್ನು ಸಿದ್ದಾಪುರ ಜನ್ಸಾಲೆಯ ಗೋವಿಂದ ಶೆಟ್ಟಿ ಎಂಬುವರ ಪುತ್ರ ಶಶಾಂಕ (21) ಎಂದು ಗುರುತಿಸಲಾಗಿದೆ.

ಶಶಾಂಕ್

ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಶಶಾಂಕ್, ಅ.31ರ ಬೆಳಿಗ್ಗೆ ಕಾಲೇಜಿಗೆ ತೆರಳಿದ್ದು, ಬಳಿಕ 9.30ರ ಸುಮಾರಿಗೆ ತಂದೆಯ ಮೊಬೈಲಿಗೆ ಕರೆ ಮಾಡಿ, ತನ್ನನ್ನು ಕೋಟೇಶ್ವರದ ಕೋಸ್ಟೆಲ್ ಕ್ರೌನ್ ಮಾಲ್ ಬಳಿಯಿಂದ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾಗಿ ತಿಳಿಸಿದ್ದಾನೆ. ಬಳಿಕ 30 ಲಕ್ಷ ಹಣ ನೀಡಿ ಮಗನನ್ನು ಕರೆದೊಯ್ಯುವಂತೆ ಆರೋಪಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಘಟನೆ ನಡೆದು ಒಂದು ದಿನ ಕಳೆದರೂ ಮಗ ಮನೆಗೆ ಬರದೇ ಇರುವುದರಿಂದ ಗಾಬರಿಗೊಂಡ ಶಶಾಂಕ್ ತಾಯಿ ಕುಂದಾಪುರ ಠಾಣೆಯಲ್ಲಿ ಮಂಗಳವಾರ ಸಂಜೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾಗಿ 24 ಗಂಟೆಗಳೊಳಗೆ ನಾಪತ್ತೆಯಾದ ಶಶಾಂಕ್ ಹಾಗೂ ಆರೋಪಿ ಹುಬ್ಬಳ್ಳಿ ಮೂಲದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಕುಂದಾಪುರ ಪೊಲೀಸ್ ಠಾಣೆ ಪಿಎಸ್ಐ ಸದಾಶಿವ ಗವರೋಜಿ ಅವರ ನೇತೃತ್ವದ ತಂಡ, ಕುಷ್ಟಗಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈರ್ವರನ್ನು ಇಂದು ಸಂಜೆ ಕುಂದಾಪುರಕ್ಕೆ ಕರೆತರಲಾಗಿದ್ದು, ಹಣಕ್ಕಾಗಿ ಅಪಹರಣ ನಡೆದಿದೆ ಎನ್ನಲಾಗಿದೆಯಾದರೂ ನಿಖರ ಕಾರಣ ಈತನಕ ತಿಳಿದುಬಂದಿಲ್ಲ. ಕುಂದಾಪುರ ಪೊಲೀಸರು ತನಿಕೆ ಮುಂದುವರಿಸಿದ್ದಾರೆ.

Exit mobile version