Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲಾ ಮಟ್ಟದ ‘ಅಂಬೇಡ್ಕರ್ ಓದು’ ಅಭಿಯಾನಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಇಂದಿನ ವಿದ್ಯಾರ್ಥಿಗಳು ಅಧ್ಯಯನ ಮಾಡಿ ದೇಶಕ್ಕೆ ಅವರ ಕೊಡುಗೆಯನ್ನು ತಿಳಿಯಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಉಡುಪಿ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಅವರು ಕರೆ ನೀಡಿದರು.

ಅವರು ಸಮುದಾಯ ಸಾಂಸ್ಕೃತಿಕ ಸಂಘಟನೆ ರಿ. ಕುಂದಾಪುರ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಉಡುಪಿ ಜಿಲ್ಲೆ ಇವರು ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಅಂಬೇಡ್ಕರ್ ಓದು ಅಭಿಯಾನವನ್ನು ಸಂವಿಧಾನದ ಪ್ರಸ್ತಾವನೆಯನ್ನು ಸಭಿಕರಿಗೆ ಪ್ರತಿಜ್ಞಾ ವಿಧಿಯಾಗಿ ಬೋಧಿಸುವುದರ ಮೂಲಕ ಚಾಲನೆಗೊಳಿಸಿ ಮಾತನಾಡಿದರು.

ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಮೂರೂ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಅಂಬೇಡ್ಕರ್ ಅವರ ಸಾರ್ವಜನಿಕ ಜೀವನದ ಒಂದು ಮಹತ್ವದ ಘಟನೆಯ ಕುರಿತು ಯಾವುದೇ ಮಾಧ್ಯಮದಲ್ಲಿ ಪೋಸ್ಟರ್ ರಚನೆ, ಜೈ ಭೀಮ್ ಕ್ವಿಜ್, ಅಂಬೇಡ್ಕರ್ ಅವರ ಜೀವನದ ಕುರಿತಾದ ಯಾವುದೇ ಒಂದು ಮಹತ್ವದ ಘಟನೆಯನ್ನು ಆಧರಿಸಿದ ವೀಡಿಯೋ ಭಾಷಣ, ಸಂವಿಧಾನದ ಪ್ರಸ್ತಾವನೆಯ ಸಂಯೋಜಿತ ಓದು. ಸಂವಿಧಾನ ಪ್ರಸ್ತಾವನೆಯ ಸಮೂಹಗಾನ, ಅಂಬೇಡ್ಕರ್ ಹಾಗೂ ಅವರಿಗೆ ಸಂಬಂಧಿಸಿದ ಯಾವುದೇ ಘಟನೆಯನ್ನು ಆಧರಿಸಿದ ಚಿತ್ರ ರಚನೆ, ಅಂಬೇಡ್ಕರ್ ಬದುಕು, ಬರಹ, ಚಿಂತನೆಗಳನ್ನು ಆಧರಿಸಿದ ಕಿರುನಾಟಕ ಇತ್ಯಾದಿ ಸ್ಪರ್ಧೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿರುವುದನ್ನು ಪ್ರಶಂಶಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಪಿ ಮಂಜುನಾಥ ಗಿಳಿಯಾರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ದೋಮ ಚಂದ್ರಶೇಖರ, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ಸಂಚಾಲಕರಾದ ರಾಘವೇಂದ್ರ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಮುದಾಯ ಕುಂದಾಪುರದ ಉಪಾಧ್ಯಕ್ಷರಾದ ವಾಸುದೇವ ಗಂಗೇರ ಅವರ ತಂಡ ಆರಂಭಗೀತೆ ಹಾಡಿದರು. ಸಮುದಾಯ ಕುಂದಾಪುರದ ಅಧ್ಯಕ್ಷರಾದ ಉದಯ ಗಾಂವಕರ ಸ್ವಾಗತ ಕೋರಿ ಪ್ರಾಸ್ತಾವನೆಗೈದರು. ಸಮುದಾಯ ಕುಂದಾಪುರದ ಕೋಶಾಧಿಕಾರಿ ಬಾಲಕೃಷ್ಣ ಸಂವಿಧಾನದ ಪ್ರಸ್ತಾವನೆಯನ್ನು ಹಂಚಿ ಸ್ವಾಗತ ಕೋರಿದರು. ಕುಂದಾಪುರ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ರಾಜು ಬೆಟ್ಟಿನಮನೆ ಅವರು ಧನ್ಯವಾದಗೈದರು. ಕಾರ್ಯಕ್ರಮವನ್ನು ಸಮುದಾಯ ಕುಂದಾಪುರದ ಕಾರ್ಯದರ್ಶಿ ಡಾ. ಸದಾನಂದ ಬೈಂದೂರು ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ “ಭಾರತ ಭಾಗ್ಯವಿಧಾತಾ” ವಿಡಿಯೋ ಪ್ರದರ್ಶನ ಮಾಡಲಾಯಿತು. ಸಮುದಾಯ ಕುಂದಾಪುರ, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಹಾಗೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

Exit mobile version