Kundapra.com ಕುಂದಾಪ್ರ ಡಾಟ್ ಕಾಂ

ಸಂಭ್ರಮದಿಂದ ಜರುಗಿದ ಪ್ರಸಿದ್ಧ ತಗ್ಗರ್ಸೆ ಕಂಬಳೋತ್ಸವ, ಬಹುಮಾನ ವಿತರಣೆ

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು:
ಶತಮಾನದ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ತಗ್ಗರ್ಸೆ ಕಂಬಳೋತ್ಸವವು ಶುಕ್ರವಾರ ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ವಿಜೃಂಭಣೆಯಿಂದ ನಡೆಯಿತು. 60ಕ್ಕೂ ಅಧಿಕ ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿ ಕಂಬಳದ ಮೆರಗು ಹೆಚ್ಚಿಸಿದವು.

Thaggarse Kambalotsava | Raw Audio | KAMBALA 2022 | Vlog

ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು. ಕಂಬಳ ಗದ್ದೆಯನ್ನು ಖುರ್ಜು ನಿಲ್ಲಿಸಿ, ತೋರಣಗಳಿಂದ ಅಲಂಕರಿಸಲಾಗಿತ್ತು. ಊರಿನ ಒಂದು ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸಿದ ಬಳಿಕ ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯಿತು.

ವಿಶೇಷ ವೇಷಭೂಷಣ, ವಾದ್ಯ ಮುಂತಾದವುಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಹರಕೆಯ ಸಲುವಾಗಿ ಓಡಿಸಿದರೇ, ಉಳಿದ ಕೋಣಗಳು ಹಗ್ಗ ಹಾಗೂ ಹಲಗೆ ವಿಭಾಗದ ಸ್ವರ್ಧೆಯಲ್ಲಿ ಪಾಲ್ಗೊಂಡವು. ಈ ಭಾರಿ ಕೋಣಗಳ ವೇಗವನ್ನು ಅಳೆಯಲು ಸೆನ್ಸಾರ್ ಅಳವಡಿಸಲಾಗಿತ್ತು.

ಕಂಠದಮನೆ ಕುಟುಂಬದ ಟಿ. ನಾರಾಯಣ ಹೆಗ್ಡೆಯವರ ನೇತೃತ್ವದಲ್ಲಿ ಸಾಂಪ್ರದಾಯಿಕ ಕಂಬಳ ಮುನ್ನಡೆಯುತ್ತಿದ್ದು ಊರಿನ ಜನ ಹಬ್ಬದಂತೆ ಸಂಭ್ರಮಿಸಿದರು. ವಿಶಾಲ ಗದ್ದೆಯ ಅಂಚುಗಳಲ್ಲಿ ನಿಂತು ಕಂಬಳದ ಸೊಬಗನ್ನು ಸವಿದವರು. ವಿವಿಧ ಗಣ್ಯರು ಕಂಬಳೋತ್ಸವ ವೀಕ್ಷಣೆಗೆ ಆಗಮಿಸಿದ್ದರು.

ಬಹುಮಾನ ವಿತರಣೆ:
ಕಂಠದ ಮನೆಯ ಕೋಣಗಳು ಕೊನೆಯಲ್ಲಿ ಗದ್ದೆಗೆ ಇಳಿಯುವ ಮೂಲಕ ಕಂಬಳೋತ್ಸವ ಮುಕ್ತಾಯಗೊಂಡಿತು. ಬಳಿಕ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಂಬಳ ಪ್ರತಿಭೆಗಳಾದ ರಾಘವೇಂದ್ರ ಶೆಟ್ಟಿ ಹಂಡಿಕೇರಿ, ಗೋಪಾಲ ನಾಯ್ಕ್ ಶಿರೂರು, ಕಾಂತಾರ ಸಿನಿಮಾ ಖ್ಯಾತಿಯ ನಾಗರಾಣ ಪಾಣ ಅವರನ್ನು ಸನ್ಮಾನಿಸಲಾಯಿತು. ಕಂಬಳ ಸಮಿತಿ ಪ್ರಮುಖರಾದ ಶಾಂತಾರಾಮ ಶೆಟ್ಟಿ ಬಾರ್ಕೂರು, ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ, ಕಂಠದಮನೆ ಕುಟುಂಬಿಕರಾದ ವಸಂತ ಹೆಗ್ಡೆ ಕಂಠದಮನೆ, ಟಿ. ಬಾಬು ಶೆಟ್ಟಿ ತಗ್ಗರ್ಸೆ, ಸುಭಾಶ್ಚಂದ್ರ ಶೆಟ್ಟಿ ಕೂರಾಡಿ, ಕರುಣಾಕರ ಹೆಗ್ಡೆ ತಗ್ಗರ್ಸೆ, ಬಾಲಕೃಷ್ಣ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಕಂಬಳೋತ್ಸವದ ನೇತೃತ್ವ ವಹಿಸಿದ್ದ ಕಂಠದಮನೆ ಟಿ. ನಾರಾಯಣ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜನ್ಮನೆ ರತ್ನಾಕರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ಕಂಠದಮನೆಯ ಉದಯ ಹೆಗ್ಡೆ ತಗ್ಗರ್ಸೆ ಹಾಗೂ ಅರ್ಜುನ್ ಶೆಟ್ಟಿ ತಗ್ಗರ್ಸೆ ಸಹಕರಿಸಿದರು. ಕಂಬಳೋತ್ಸವದ ವೀಕ್ಷಕ ವಿವರಣೆಯಲ್ಲಿ ಗಣೇಶ್ ಕೊಠಾರಿ, ಕಿಶೋರ್ ಪೂಜಾರಿ ಸಸಿಹಿತ್ಲು ಸಹಕರಿಸಿದರು.

ಕಂಬಳ ಫಲಿತಾಂಶ:
ಹಲಗೆ ವಿಭಾಗ:
ಪ್ರಥಮ: ನೀರಜ್ ಆತ್ಮಜ್ ಬಾರಕೂರು ಅವರ ಕೋಣಗಳು, ದ್ವಿತೀಯ: ಪವನ್ ಕುಮಾರ್ ಮಾಣಿಬಲು ಗಂಗೆಬೈಲು

ಹಗ್ಗ ವಿಭಾಗ ಹಿರಿಯ:
ಪ್ರಥಮ:
ದಿ.ಕಾರಿಕಟ್ಟೆ ಮಹಾಬಲ ಶೆಟ್ಟಿ ಅವರ ಕೋಣಗಳು, ದ್ವಿತೀಯ: ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರು

ಹಗ್ಗ ವಿಭಾಗ ಕಿರಿಯ ಎ:
ಪ್ರಥಮ:
ನೆಲ್ಯಾಡಿ ದಿವಾಕರ ಶೆಟ್ಟಿ ಅವರ ಕೋಣಗಳು, ದ್ವಿತೀಯ: ಸಮೃದ್ಧಿ ಪ್ರಸಿದ್ದಿ ದುರ್ಗಾ ಫ್ರೆಂಡ್ಸ್ ಕಂಚಿಕಾನು

ಹಗ್ಗ ವಿಭಾಗ ಕಿರಿಯ ಬಿ:
ಪ್ರಥಮ:
ಕೋಟ ಪಡುಕೆರೆ ಮಣೂರು ದಿ.ಶೀನ ಪೂಜಾರಿ ಅವರ ಕೋಣಗಳು, ದ್ವಿತೀಯ: ಸ್ಕಂದ ಉಳ್ಳೂರು ಕಂದಾವರ

ಅತೀ ವೇಗವಾಗಿ ಕೋಣಗಳನ್ನು ಓಡಿಸಿದ ಗೋಪಾಲ ನಾಯ್ಕ ಶಿರೂರು ಮುದ್ದುಮನೆ, ಮಂಜುನಾಥ ಗೌಡ, ಮಂಜುನಾಥ ದೇವಾಡಿಗ ಹಾಗೂ ಗಣೇಶ ಕಂದಾವರ ಅವರಿಗೆ ಬಹುಮಾನ ವಿತರಿಸಲಾಯಿತು.

Exit mobile version