Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು – ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ರೂ. 1012.75 ಕೋಟಿ ಅನುದಾನ ಮಂಜೂರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬೈಂದೂರಿನಿಂದ ಕೊಲ್ಲೂರು, ನಗರ, ಹೊಸನಗರ, ಆನಂದಪುರ, ಶಿಕಾರಿಪುರ, ಮಾಸೂರು, ರಟ್ಟೆಹಳ್ಳಿ, ಮೂಲಕ ರಾಣೆಬೆನ್ನೂರಿಗೆ ಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 766(ಸಿ)ಯನ್ನು ಸಂಪೂರ್ಣವಾಗಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲು ಕೇಂದ್ರ ಭೂಸಾರಿಗೆ ಮಂತ್ರಾಲಯವು ಸಕಾರಾತ್ಮಕವಾಗಿ ಸ್ಪಂದಿಸಿದೆ.

2022-23ನೇ ಸಾಲಿಗೆ ಬೈಂದೂರಿನಿಂದ ಹಾಲ್ಕಲ್ ಜಂಕ್ಷನ್ ಮತ್ತು ಕೊಲ್ಲೂರು ಮೂಲಕ ನಾಗೋಡಿ ವರೆಗಿನ 40.40 ಕಿ.ಮೀ ಉದ್ದದ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸುವ ರೂ 394.05ಕೋಟಿ ಮೊತ್ತದ ಡಿ.ಪಿ.ಆರ್ಗೆ ಕೇಂದ್ರ ಭೂಸಾರಿಗೆ ಮಂತ್ರಾಲಯವು ಮಂಜೂರಾತಿ ನೀಡಿದೆ. ಸದರಿ ಹೆದ್ದಾರಿಯ ಶಿಕಾರಿಪುರ ಪಟ್ಟಣಕ್ಕೆ 6.576 ಕಿ.ಮೀ ಉದ್ದದ ಬೈಪಾಸ್ ರಸ್ತೆ ನಿರ್ಮಾಣ ಮಾಡಲು 66.44 ಕೋಟಿ ಮೊತ್ತದ ಡಿ.ಪಿ.ಆರ್ ಹಾಗೂ ಹೊಸನಗರ ಮಾವಿನಕೊಪ್ಪ ವೃತ್ತದಿಂದ ಹೊಸನಗರ ಬೈಪಾಸ್, ಶರಾವತಿ ಹಿನ್ನೀರಿಗೆ 1.54 ಕಿ.ಮೀ ಮತ್ತು 0.72 ಕಿ.ಮೀ ಉದ್ದದ 2 ಭಾರೀ ಸೇತುವೆಗಳ ನಿರ್ಮಾಣದೊಂದಿಗೆ ಆಡುಗೋಡಿವರೆಗೆ 13.82 ಕಿ.ಮೀ ಉದ್ದದ ಬದಲೀ ರಸ್ತೆ ನಿರ್ಮಾಣ ಮಾಡುವ ರೂ 313.56 ಕೋಟಿಯ ಡಿ.ಪಿ.ಆರ್ಗೆ ಮಂಜೂರಾತಿ ನೀಡಲಾಗಿದ್ದು ಬಾಕಿ ಉಳಿದ ಹೆದ್ದಾರಿ ಅಗಲೀಕರಣ ಮಾಡಲು ಡಿ.ಪಿ.ಆರ್ ತಯಾರಿಸಲು ಸಹ ಕೇಂದ್ರ ಭೂಸಾರಿಗೆ ಮಂತ್ರಾಲಯವು ಆದೇಶಿಸಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

ಕಳೆದ ವರ್ಷ ಸದರಿ ಹೆದ್ದಾರಿಯ 7 ಕಿರು ಸೇತುವೆಗಳ ಹಾಗು ಹಾಗು 27.70 ಕಿ.ಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣದ ರೂ ಒಟ್ಟು ರೂ 238.70 ಕೋಟಿಗಳ ಡಿ.ಪಿ.ಆರ್ಗೆ ಮಂಜೂರಾತಿ ನೀಡಿದ್ದು ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದೆ.

ರಾಷ್ಟ್ರೀಯ ಹೆದ್ದಾರಿ 766(ಸಿ) ಸಂಪೂರ್ಣ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲು ಕ್ರಮವಹಿಸಿ ಈವರೆಗೂ ಒಟ್ಟು 1012.75 ಕೋಟಿರೂಗಳನ್ನು ಮಂಜೂರು ಮಾಡಿದ ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಜೈರಾಂ ಗಡ್ಕರಿಯವರನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಖುದ್ದು ಭೇಟಿಯಾಗಿ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಶಿವಮೂಗ್ಗ ಲೋಕಸಭಾ ಕ್ಷೇತ್ರದ ಪ್ರಮುಖ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಒಪ್ಪಿಗೆ:
ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿಗಳಾದ 1) ಶಿವಮೊಗ್ಗ- -ಹೊನ್ನಾಳಿ- ಮಲೆಬೆನ್ನೂರು-ಹರಿಹರ- ಹರಪನಹಳ್ಳಿ-ಮರಿಯಮ್ಮನಹಳ್ಳಿ ರಸ್ತೆ 2) ಶಿವಮೊಗ್ಗ-ಶಿಕಾರಿಪುರ-ಶಿರಾಳಕೊಪ್ಪ-ಹಾನಗಲ್-ತಡಸ ರಸ್ತೆ 3) ಆಯನೂರು-ರಿಪ್ಪನ್ಪೇಟೆ-ಹುಂಚ-ತೀರ್ಥಹಳ್ಳಿ-ಮಾಸ್ತಿಕಟ್ಟೆ-ಕುಂದಾಪುರ ರಸ್ತೆ ಹಾಗೂ 4)ಸಾಗರ – ಸೊರಬ – ಶಿರಾಳಕೊಪ್ಪ- ಆನವಟ್ಟಿ ರಸ್ತೆಗಳನ್ನು ಸಹ ಮೇಲ್ದರ್ಜೆಗೇರಿಸಿ 4 ಪಥದ ರಸ್ತೆಗಳನ್ನಾಗಿ ಅಗಲೀಕರಣಗೊಳಿಸಿಕೊಡಲು ಸಹ ಕೋರಲಾಗಿದ್ದು ಸನ್ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸದರಿ ಹೆದ್ದಾರಿಗಳ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲು ಒಪ್ಪಿಗೆ ನೀಡಲಾಗಿದೆ.

ಶಿವಮೊಗ್ಗ ನಗರ ಉತ್ತರ ಭಾಗದ ಬೈಪಾಸ್ ರಸ್ತೆಗೆ ಒಪ್ಪಿಗೆ:
ಈ ಸಂದರ್ಭದಲ್ಲಿ ಸನ್ಮಾನ್ಯ ಕೇಂದ್ರ ಭೂಸಾರಿಗೆ ಸಚಿವರಿಗೆ ಶಿವಮೊಗ್ಗ ನಗರದ ಉತ್ತರ ಭಾಗದ ಭಾಕಿ ಉಳಿದ 15 ಕಿ.ಮೀ ಉದ್ದದ ಬೈಪಾಸ್ ರಸ್ತೆಗೆ ಮಂಜೂರಾತಿ ನೀಡಿ ಶಿವಮೊಗ್ಗ ನಗರಕ್ಕೆ 34 ಕಿ.ಮೀ ಉದ್ದದ ರಿಂಗ್ ರಸ್ತೆ ಪೂರ್ಣಗೊಳಿಸಲು ನೆರವು ನೀಡಲು ಕೋರಲಾಗಿದ್ದು ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯರಿಗೆ ಶಿವಮೊಗ್ಗ ನಗರದ ಉತ್ತರಬಾಗದ ಬೈಪಾಸ್ ರಸ್ತೆಗೆ ಮಂಜೂರಾತಿ ದೊರಕಿಸಿಕೊಡಲು ಕ್ರಮವಹಿಸಲು ಸೂಚಿಸಿರುತ್ತಾರೆ ಎಂದು ಸಂಸದರು ತಿಳಿಸಿದ್ದಾರೆ.

ಇದನ್ನೂ ಓದಿ:
► ಮೀನುಗಾರಿಕೆಗೆ ಬಾಕಿ ಉಳಿದ ಸೀಮೆಎಣ್ಣೆ ಶೀಘ್ರ ಬಿಡುಗಡೆಗೊಳಿಸಲು ಸಂಸದ ಬಿ.ವೈ. ರಾಘವೇಂದ್ರ ಮನವಿ – https://kundapraa.com/?p=63741 .

Exit mobile version