Kundapra.com ಕುಂದಾಪ್ರ ಡಾಟ್ ಕಾಂ

ಭಾರತೀಯ ಸ್ಕೌಟ್ಸ್ & ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ.ಡಿ.21:
ಶಾರೀರಿಕ, ಆಧ್ಯಾತ್ಮಿಕ, ಭೌದ್ಧಿಕ ಬೆಳವಣಿಗೆ ವಿದ್ಯಾರ್ಥಿಗಳಿಗೆ ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಪ್ರೇರೇಪಿಸುತ್ತದೆ ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಹೇಳಿದರು.

ಅವರು ಇಲ್ಲಿನ ವಿದ್ಯಾಗಿರಿಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ-2022’ ಉದ್ಘಾಟಿಸಿ ಮಾತನಾಡಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸ್ಕೌಟ್ಸ್ ಗೈಡ್ಸ್‌ನ ಸೇವೆ ಅಪಾರ. ದೇಶದ ಅಭಿವೃದ್ದಿಯಲ್ಲಿ ಯುವಕರ ಪಾತ್ರ ದೊಡ್ಡದಿದೆ. ನಾವೆಲ್ಲರೂ ಕೂಡ ವಿಶ್ವ ಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಶ್ರಮಿಸಬೇಕಿದೆ. ಜೊತೆಗೆ ದೇಶದ ಹಿತರಕ್ಷಣೆ ಮತ್ತು ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂದು ಆಲೋಚಿಸಿ ಮುಂದಡಿಯಿಟ್ಟರೆ ಮುಂದಿನ 25 ವರ್ಷಗಳ ಅವಧಿಯಲ್ಲಿ ಭಾರತವನ್ನು ಮತ್ತಷ್ಟು ಪ್ರಭಾವೀ ರಾಷ್ಟ್ರವನ್ನಾಗಿ ರೂಪಿಸಬಹುದು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸಂದಿಗ್ಧ ಸಂದರ್ಭಗಳನ್ನು ಎದುರಿಸುವ ಧೈರ್ಯ ಮತ್ತು ಸ್ಥೈರ್ಯದ ಮನೋಧರ್ಮವನ್ನು ರೂಪಿಸಿಕೊಳ್ಳುವುದರ ಕಡೆಗೆ ಯುವಕರು ಹೆಚ್ಚು ಆದ್ಯತೆ ನೀಡಬೇಕು. ಯಾವುದೇ ಸಂದರ್ಭಗಳಲ್ಲಿಯೂ ಧೃತಿಗೆಡಬಾರದು. ಸವಾಲಿನ ಸಂದರ್ಭಗಳನ್ನು ಎದುರಿಸುವ ನಿಶ್ಚಿತ ಪ್ರಜ್ಞೆಯಿದ್ದರೆ ಬಿಕಟ್ಟುಗಳುಂಟಾದಾಗ ವಿಚಲಿತರಾಗುವ ಪ್ರಮೇಯ ಬರುವುದಿಲ್ಲ. ವ್ಯಕ್ತಿತ್ವಕ್ಕೆ ಮೌಲಿಕ ಆಯಾಮ ತಂದುಕೊಳ್ಳುವ ನಿಶ್ಚಿತ ಪ್ರಜ್ಞೆಯೊಂದಿಗೆ ಗಟ್ಟಿಹೆಜ್ಜೆಗಳನ್ನಿರಿಸಿ ಸಾಮಾಜಿಕ ಬದಲಾವಣೆ ನೆಲೆಗೊಳಿಸುವ ಕಡೆಗೆ ಯುವಜನತೆ ಹೆಚ್ಚು ಗಮನಹರಿಸಬೇಕು ಎಂದರು.

ವರ್ಲ್ಡ್ ಆರ್ಗನೈಸೇಶನ್ ಆಫ್ ದ ಸ್ಕೌಟ್ ಮೂವ್‌ಮೆಂಟ್‌ನ ಸೆಕ್ರೆಟರಿ ಜನರಲ್ ಅಹಮದ್ ಅಲ್‌ ಹೆಂದಾವಿ ಮಾತನಾಡಿ, ಭಾರತದ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು ವಿವಿಧತೆಯಲ್ಲಿ ಏಕತೆ ಎಂಬ ಪರಿಕಲ್ಪನೆಯಲ್ಲಿರುವವರು ಹಾಗಾಗಿ ಭಾರತದಲ್ಲಿ ಸಾಂಸ್ಕೃತಿಕ ಜಾಂಬೂರಿ ಬರೀ ಕಾರ್ಯಕ್ರಮವಲ್ಲ ಬದಲಾಗಿ ಭಾರತೀಯರ ಜೀವನ ಪದ್ಧತಿ. ಎಲ್ಲರಿಂದಲೂ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಬದಲಾಗಿ ಎಲ್ಲರಿಂದ ಏನಾದರೊಂದು ಸಾಧನೆ ಮಾಡಲು ಸಾಧ್ಯ. ಸಮಾಜಕ್ಕೆ ಉಪಯೋಗ ಆಗುವಂತಹ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸೋಣ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೊಟ್ಯಾನ್, ಸ್ಕೌಟ್ಸ್ ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ, ಜಿಲ್ಲಾಧಿಕಾರಿ ರವಿಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಡಾ. ಕುಮಾರ್, ಪೊಲೀಸ್ ಆಯುಕ್ತ ಶಶಿಕುಮಾರ್ ಇದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ವಂದಿಸಿದರು.

ವೈಭವದ ಸಾಂಸ್ಕೃತಿಕ ಮೆರವಣಿಗೆ:
ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಆಕರ್ಷಕ ಮೆರವಣಿಗೆ ಕಣ್ಮನ ಸೆಳೆಯಿತು. ಹೊರರಾಜ್ಯ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಕಲಾ ತಂಡಗಳಿಂದ ನಡೆದ ವಿಜೃಂಭಣೆಯ ಮೆರವಣಿಗೆ ಕಲಾ ಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು. ರಾಜೇಂದ್ರ ದಾಸ ತಂಡದವರ ಶಂಖ ವಾದನ, ಮೈಸೂರು ತಂಡದ ಕಹಳೆ, ಕುಂದಾಪುರ ಕೊರಗರ ತಂಡದ ಡೋಲು, ಮಂಡ್ಯ ಜಾನಪದ ಕಲಾ ತಂಡದ ನಂದೀಧ್ವಜ, ಆಳ್ವಾಸ್ ವಿದ್ಯಾರ್ಥಿಗಳ ಯಕ್ಷಗಾನ ವೇಷ ಹಾಗೂ ಆಕರ್ಷಕ ಕೊಡೆಗಳು, ಚೆಂಡೆ, ಕೇರಳದ ದೇವರ ವೇಷಗಳು, ಗೊರವರ ಕುಣಿತ, ವಿಚಿತ್ರ ಮಾನವ, ಕೇರಳ ತಂಡದ ಕಥಕ್ಕಳಿ ವೇಷಗಳು ಸೇರಿದಂತೆ ಹತ್ತಾರು ವೇಷಭೂಷಣಗಳು ಮೆರವಣಿಗೆಯ ರಂಗು ಹೆಚ್ಚಿಸಿದ್ದವು.

Exit mobile version