Kundapra.com ಕುಂದಾಪ್ರ ಡಾಟ್ ಕಾಂ

ಅಮಲು ಮುಕ್ತ ಕಲ್ಪರಸ, ದೇಹಕ್ಕೆ ಅಮೃತಪಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ನಲ್ಲಿ ಜರುಗುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಜಾಂಬೂರಿಯ ಕೃಷಿ ಮತ್ತು ಆಹಾರ ಮೇಳದಲ್ಲಿ ಬಗೆ ಬಗೆಯ ಪಾನೀಯಗಳು ಮಾರಾಟವಾಗುತ್ತಿದೆ. ಆ ಪೈಕಿ ತೆಂಗಿನ ಮರದ ಇನ್ನೂ ಅರಳದ ಗರಿಗಳನ್ನು ಹದಗೊಳಿಸಿ ಶೀಥಲೀಕೃತ ಪೆಟ್ಟಿಗೆಯ ಮೂಲಕ ಸಂಗ್ರಹಿಸುವ ಕಲ್ಪರಸವೂ ಒಂದಾಗಿದೆ.

ಅರೇ..! ಇದು ಅಮಲಿನ ಪದಾರ್ಥ ‘ನೀರಾ’ ಅಲ್ಲವಾ? ಎಂದು ಕೇಳಬೇಡಿ. ಇದು ಅಮಲು ಮುಕ್ತವಾದ ಸಿಹಿಯಾದ ಪಾನೀಯವಾಗಿದೆ. ಎಳೆನೀರಿಗೆ ಹೋಲಿಸಿದರೆ ಸತ್ವ ಮತ್ತು ಪೋಷಕಾಂಶಗಳು ಕಲ್ಪರಸದಲ್ಲಿಯೇ ಹೆಚ್ಚಿರುತ್ತದೆ.

ಕಲ್ಪರಸ ಸಂಗ್ರಹಿಸುವ ತಂತ್ರಜ್ಞಾನವನ್ನು ಕಾಸರಗೋಡಿನ ಸಿ.ಪಿ.ಸಿಆರ್,ಐ ಸಂಸ್ಥೆ ಅಭಿವೃದ್ದಿ ಪಡಿಸಿದ್ದು ಭಾರತೀಯ ಕಿಸಾನ್ ಸಂಘದ ಮಾರ್ಗದರ್ಶನದಲ್ಲಿ ಉಡಪಿಯ ಕೊಕೊನಟ್ ಕಂಪನಿ ಇದನ್ನ ವೈಜ್ಞಾನಿಕವಾಗಿ ತಯಾರಿಗೆ ಮೌನ್ಯವರ್ಧಿತ ಉತ್ಪನ್ನವನ್ನಾಗಿ ಮಾರಾಟ ಮಾಡುತ್ತಿದೆ.

ತೆಂಗಿನ ಮರವನ್ನು ಹತ್ತಿ ಹೋಂಬಾಳೆಯನ್ನ ಹದಗೊಳಿಸಿ ಅದರ ರಸವನ್ನ ಪೆಟ್ಟಿಗೆಯಲ್ಲಿ ಸಂಗ್ರಹಿಸಿ ನಂತರ ಮಾರಾಟವಾಗುವ ತನಕ ಅದನ್ನ ೪ ಡಿಗ್ರಿಗಿಂತ ಕಡಿಮೆ ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಬಳಿಕ ಮೌಲ್ಯವರ್ಧಿತ ಪೊಟ್ಟಣವನ್ನಾಗಿ ಐವತ್ತು ರೂಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದು ೧೭ ರೀತಿಯ ಅಮೈನೋ ಆಮ್ಲಗಳನ್ನು ಹೊಂದಿರುವುದರಿಂದ ದೇಹಕ್ಕೆ ಬೇಕಾದ ಹೆಚ್ಚಿನ ಪ್ರೋಟಿನ್ ಉತ್ಪಾದನೆಗೆ ಸಹಕಾರಿ. ಹೇರಳ ಪ್ರಮಾಣದಲ್ಲಿ ವಿಟಮಿನ್ ಎ ಮತ್ತು ಬಿ ಕಾಂಪ್ಲೆಕ್ಸ್ ಹಾಗು ವಿಟಮಿನ್ ಸಿ ಹೊಂದಿರುವ ಏಕೈಕ ಪಾನೀಯವಾಗಿದೆ.

ಕಲ್ಪರಸದಿಂದ ಅನೇಕ ಪ್ರಯೋಜನಗಳಿದ್ದು, ಚರ್ಮದ ಖಾಯಿಲೆಗೆ, ಕಣ್ಣಿನ ಸಮಸ್ಯೆಗಳಿಗೆ, ರಕ್ತ ಹೀನತೆಗೆ, ಸಕ್ಕರೆ ಕಾಯಿಲೆಗೆ ಇದು ರಾಮಬಾಣ. ಪೊಟ್ಯಾಶಿಯಂ ಹೇರಳವಾಗಿರುವುದರಿಂದ ದೇಹದಲ್ಲಿ ರಕ್ತ ಸಂಚಾರ ಸುಲಭವಾಗಿ ಆಗಲು ಇದು ಸಹಕಾರಿ. ರಕ್ತದೊತ್ತಡವನ್ನ ನಿಯಂತ್ರಿಸುವ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಇದು ಹೆಚ್ಚಿಸುತ್ತದೆ. ಮಹಿಳೆಯರಲ್ಲಿ ಕಂಡುಬರುವ ಪಾಲಿಸಿಸ್ಟಿಕ್ ಒವರಿಯನ್ ಸಿಂಡ್ರೋಮ್ ಅನ್ನು ಕಡಿಮೆಮಾಡಿ ಸಂತಾನೋತ್ಪತ್ತಿಗೆ ಸಹಯಮಾಡುತ್ತದೆ. ಕೊಬ್ಬನ್ನು ನಿಯಂತ್ರಿಸುವುದರ ಜೊತೆಗೆ ಮಾನಸಿಕ ಖಿನ್ನತೆಯನ್ನೂ ಕಡಿಮೆ ಮಾಡುವ ಈ ಪೇಯ ಯಾರು ಬೇಕಾದರು ಕುಡಿಯಬಹುದಾದ ಪೇಯ. ಈ ಕಾರಣಕ್ಕಾಗಿಯೇ ವಿಜ್ಞಾನ ಮೇಳದಲ್ಲಿನ ಸ್ಟಾಲ್‌ವೊಂದರ ಮೂಲಕ ಈ ಪಾನೀಯ ಹಲವರನ್ನು ತನ್ನತ್ತ ಸೆಳೆಯುತ್ತಲೇ ಇದೆ.

Exit mobile version