Kundapra.com ಕುಂದಾಪ್ರ ಡಾಟ್ ಕಾಂ

ನುಡಿಸಿರಿ ವೇದಿಕೆಯಲ್ಲಿ ‘ಹಾಸ್ಯ ಲಹರಿ’

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ವಿವಿಧೆಡೆ ಓಡಾಡಿ ದಣಿದವರಿಗೆ ಅಲ್ಲಿ ಉತ್ಸಾಹದ ಚಿಲುಮೆಯಿತ್ತು. ದಣಿದಿದ್ದ ಮುಖಗಳಲ್ಲಿ ನಗುವಿನ ಛಾಯೆಯಿತ್ತು. ಅಲ್ಲೆಲ್ಲಾ ನಗುವಿನ ಉತ್ಸಾಹ. ಚಪ್ಪಾಳೆಯ ಸುರಿಮಳೆ.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಎರಡನೇ ದಿನ ಗುರುವಾರ ನುಡಿಸಿರಿ ಆಯೋಜನೆಗೊಂಡಿದ್ದ ‘ಹಾಸ್ಯ ಲಹರಿ’ದ ಪರಿಯಿದು.

ಖ್ಯಾತ ಹಾಸ್ಯಕಲಾವಿದರಾದ ಮಹಾಂತೇಶ್ ಹಡಪದ ಮತ್ತು ಸುನೀಲ್ ಗುಡಗುಂಟಿ ಮಠ್ ಅವರ ಹಾಸ್ಯ ನಗುವಿನ ಅಲೆಯನ್ನು ಮೂಡಿಸಿತು. ಮಹಾಂತೇಶ್ ಅವರ ಹಾಸ್ಯದ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಗಿಡ್ಡನೆಯ ವ್ಯಕ್ತಿಗಳಿಗಾಗಬಹುದಾದ ಉಪಯೋಗಗಳನ್ನು ಹಾಸ್ಯಮಯವಾಗಿ ಹೇಳಿದರು. ನಂತರ ಕೋಳಿ, ಕಪ್ಪೆ, ಬೆಕ್ಕು, ನಾಯಿ, ಎಮ್ಮೆ, ಕೋಣ, ಗಿಳಿ ಮತ್ತು ಹಂದಿ ಮುಂತಾದ ಪ್ರಾಣಿಗಳ ನಡುವಿನ ಕಾಲ್ಪನಿಕ ಸಂಭಾಷಣೆ ಜೊತೆಗೆ ಆಂಬುಲೆನ್ಸ್, ಅಗ್ನಿ ಶಾಮಮಕದಳದ ವಾಹನ, ಪೊಲೀಸ್ ವಾಹನದ ಸದ್ದುಗಳನ್ನು ಮಿಮಿಕ್ರಿಯ ಮೂಲಕ ಹಾಸ್ಯಾತ್ಮಕವಾಗಿ ಪ್ರಸ್ತುತಪಡಿಸಿದರು.

‘ದವಾಖಾನೆ ಎಲ್ಲಿ ಬರ್‍ತದ?’ ಎಂಬ ಪ್ರಶ್ನೆಗೆ ‘ಅದು ಎಲ್ಲೂ ಬರಲ್ಲ ನೀವೇ ಅಲ್ಲಿಗೆ ಹೋಗ್ಬೇಕು’ ಎಂಬ ಉತ್ತರದ ಸಂಭಾಷಣೆ ನಗೆಯುಕ್ಕಿಸಿತು. ಈ ರೀತಿಯ ದೈನಂದಿನ ಜೀವನದ ಆಗುಹೋಗುಗಳ ನಡುವೆ ಉಂಟಾಗುವ ಸಂಭಾಷಣೆಗಳಲ್ಲಿ ಬೆರೆತಿರುವ ಹಾಸ್ಯವನ್ನು ಮಾತಿನ ಮೂಲಕ ಕಟ್ಟಿಕೊಡುವಲ್ಲಿ ಕಲಾವಿದರು ಯಶಸ್ವಿಯಾದರು. ಕಾಲೇಜು-ಹುಡುಗ ಹುಡುಗಿಯರ ಮನಸ್ಸಿನ ಭಾವನೆಗಳು, ಗಂಡ ಹೆಂಡತಿ ನಡುವಿನ ಹಾಸ್ಯ ಪ್ರಸಂಗ, ತರಗತಿಯೊಳಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಾಸ್ಯಪ್ರಜ್ಞೆಯ ಪ್ರಸಂಗಗಳು ಖುಷಿ ನೀಡಿದವು.

ಸುನೀಲ್ ಗುಡಗುಂಟಿಮಠ್ ವಿವಿಧ ವಯೋಮಾನದವರ ಜೀವನ ಶೈಲಿಯ ಬಗ್ಗೆ ಪ್ರಸ್ತಾಪಿಸಿ ಹಾಸ್ಯಪ್ರಜ್ಞೆ ಮೆರೆದರು. ಜೀವನ ಮೌಲ್ಯಗಳ ಕುರಿತು ಮಹತ್ವದ ಸಂದೇಶ ನೀಡಿದರು. ಮದುವೆಯ ನಂತರದ ಜೀವನದಲ್ಲಿ ಆಗುವ ಹಾಸ್ಯಾತ್ಮಕ ಬೆಳವಣಿಗೆಗಳನ್ನು ಪ್ರಸ್ತುತ ಪಡಿಸಿದರು. ಕನ್ನಡದ ಖ್ಯಾತ ನಟರಾದ ಡಾ. ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣು ವರ್ಧನ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಮಿಮಿಕ್ರಿ ಮಾಡಿದರು.

ಒಂದೂವರೆ ಗಂಟೆಗಳ ನಡೆದ ‘ಹಾಸ್ಯ ಲಹರಿ’ ನೆರೆದಿದ್ದವರನ್ನು ಹಾಸ್ಯಲೋಕಕ್ಕೆ ಕರೆದೊಯ್ದಿತ್ತು. ಸುನೀಲ್ ಗುಡಗುಂಟಿ ಮಠ್ ಪುನೀತ್ ರಾಜ್ ಕುಮಾರ್ ಅವರ ಹಾಡು ಹಾಡುವುದರ ಮೂಲಕ ಕಾರ್ಯಕ್ರಮ ಕೊನೆಗೊಳಿಸಿದರು.

Exit mobile version