Kundapra.com ಕುಂದಾಪ್ರ ಡಾಟ್ ಕಾಂ

ರೈತನ ಹೆಸರಿನಲ್ಲಿ ಪ್ರಮಾಣ – ಪ್ರಚಾರಕ್ಕಿಂತ, ರೈತನ ಸಮಸ್ಯೆಗೆ ಸ್ಪಂದಿಸುವುದು ಅಗತ್ಯ: ಕೆ. ಪ್ರತಾಪಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ, ರೈತಸಿರಿ ಹಾಗೂ ರೈತ ಸೇವಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಾಗೂರು ಶ್ರೀಕೃಷ್ಣಲಲಿತಾ ಕಲಾಮಂದಿರದಲ್ಲಿ ರೈತರ ದಿನಾಚರಣೆಯ ಅಂಗವಾಗಿ ಆಯೋಜಿಸಿದ 11ನೇ ವರ್ಷದ ರೈತರ ದಿನಾಚರಣೆ ಕಾರ್ಯಕ್ರಮ ಮತ್ತು ಕೃಷಿ ಪರಿಕರಗಳ ವಸ್ತುಪ್ರದರ್ಶನ ಉದ್ಘಾಟನೆಗೊಂಡಿತು.

ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ರೈತರಿಗೂ ಸಹಕಾರಿ ಸಂಘಗಳಿಗೂ ನಿಟಕಟವಾದ ಸಂಬಂಧವಿದೆ. ವ್ಯವಸಾಯ ಎಂಬ ಸೇವೆಗೆ ಸಹಕಾರ ನೀಡುವಂತಹ ಸದುದ್ದೇಶದಿಂದ ಆರಂಭಿಸಲಾದ ಸಹಕಾರಿ ಸಂಸ್ಥೆಗಳು ಅವಿಭಜಿತ ದಕ ಜಿಲ್ಲೆಯಲ್ಲಿ ಅತ್ಯಂತ ಉನ್ನತ ಮಟ್ಟಕ್ಕೇರಿದೆ. ರೈತರಿಗೆ ಕೃಷಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.

ರೈತರ ದಿನಾಚರಣೆ ರೈತರು ಆಚರಿಕೊಳ್ಳುವ ಕಾರ್ಯಕ್ರಮವಲ್ಲ. ಬದಲಾಗಿ ಜವಾಬ್ದಾರಿಯುತ ಜನಪ್ರತಿನಿಧಿಗಳು ಮಾಡಬೇಕಾದ ಕಾರ್ಯವಾಗಿದೆ. ಆದರೆ ಇಂದಿನ ಕಾಲಘಟ್ಟದಲ್ಲಿ ಯಾರು ತಮ್ಮತನವನ್ನು ಎಲ್ಲಿ ಗುರುತಿಸಿಕೊಳ್ಳಬೇಕಿತ್ತೋ ಅಲ್ಲಿ ಗುರುತಿಸಿಕೊಳ್ಳದೇ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ವಿಷಾದನೀಯ. ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕಾರ, ರೈತ ದೇಶದ ಬೆನ್ನೆಲಬು, ರೈತಪರ ನಾವಿದ್ದೇವೆ ಎಂಬ ಘೋಷಣೆಗಳ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುಕ್ಕಿಂತ ತನ್ನದೇ ಕಾರ್ಯಕ್ರಮವೆಂಬ ಭಾವನೆಯಿಂದ ಸರ್ಕಾರದ ವತಿಯಿಂದಲೇ ರೈತದಿನ ಆಚರಿಸುವುದು ಮತ್ತು ಆತನ ನೋವುಗೆ ಸ್ಪಂದಿಸುವುದು ಅರ್ಥಪೂರ್ಣವಾಗಿರುತ್ತದೆ ಎಂದರು.

ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಹಿರಿಯ ಕೃಷಿಕ ಹಗ್ಗೇರಿಹಿತ್ಲು ನಾರಾಯಣ ದೇವಾಡಿಗ ಹೇರಂಜಾಲು, ಹಿರಿಯ ಸಹಕಾರಿ, ಬೈಂದೂರು ಸಹಕಾರಿ ಯೂನಿಯನ್ ಅಧ್ಯಕ್ಷ ವಾಸುದೇವ ಯಡಿಯಾಳ ಇವರನ್ನು ಸನ್ಮಾನಿಸಲಾಯಿತು. ಸಂಘದ ವ್ಯಾಪ್ತಿಯ ಹಾಲು ಉತ್ಪಾದಕರ ಸಂಘದಲ್ಲಿ 2021-22ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ, ಕೃಷಿ ಕ್ಷೇತ್ರದಲ್ಲಿ ಸಾಧಿಸಿ ಇಲಾಖಾ ಮಟ್ಟದಲ್ಲಿ ಗುರುತಿಸಿ ಪ್ರಶಸ್ತಿ ಪಡೆದ ರೈತರನ್ನು ಸನ್ಮಾನಿಸಲಾಯಿತು. ಸಂಘದ ವ್ಯಾಪ್ತಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡು ಪ್ರಶಸ್ತಿ ಪಡೆದ ಶಾಧಕರಿಗೆ ರೈತಸಿರಿ ಗೌರವಾರ್ಪಣೆ ಸಲ್ಲಿಸಲಾಯಿತು. ಹೊಸವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು. ಅದೃಷ್ಟ ರೈತರಿಗೆ ಬಹುಮಾನ ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಗೀತಾ, ಸಂಘದ ಉಪಾಧ್ಯಕ್ಷ ಈಶ್ವರ ಹಕ್ಲತೋಡು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಸ್ವಾಗತಿಸಿದರು. ಹಿರಿಯ ವ್ಯವಸ್ಥಾಪಕ ಚಂದಯ್ಯ ಶೆಟ್ಟಿ ವಂದಿಸಿದರು. ಉದಯ್ ನಾಯ್ಕ್ ನಿರೂಪಿಸಿದರು. ನಂತರಬಡಗುತಿಟ್ಟಿನ ಕಲಾವಿದರ ಕೂಡುವಿಕೆಯಲ್ಲಿ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

Exit mobile version