Kundapra.com ಕುಂದಾಪ್ರ ಡಾಟ್ ಕಾಂ

ಸ್ವಾವಲಂಭಿ ಮಹಿಳೆಯರ ಕಲಾಕೌಶಲ್ಯದಿಂದ ತಯಾರಾಗುತ್ತಿದೆ ಮಣ್ಣಿನ ಆಭರಣ!

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಮಣ್ಣಿನಿಂದ ವಿವಿಧ ಅಲಂಕಾರಿಕ ವಸ್ತುಗಳು ಹಾಗೂ ದಿನಬಳಕೆಯ ಪಾತ್ರೆಗಳನ್ನು ತಯಾರಿಸಬಹುದು. ಆದರೆ, ಆಭರಣಗಳನ್ನು ತಯಾರಿಸುವುದನ್ನು ನೋಡಿದ್ದೀರಾ? ಅಬ್ಬಬ್ಬಾ. ಎಂತಹ ಅಧ್ಬುತ ವಿನ್ಯಾಸದ ಆಭರಣಗಳು! ಆಳ್ವಾಸ್ ಆವರಣದಲ್ಲಿ ಜರುಗುತ್ತಿರುವ ಜಾಂಬೂರಿಯ ಕರಕುಶಲ ವಸ್ತು ಪ್ರದರ್ಶನದಲ್ಲಿ ಇಂತಹದ್ದೊಂದು ವಿಶೇಷ ಮಳಿಗೆ ಗಮನ ಸೆಳೆಯಿತು.

ರಾಯಚೂರು ಜಿಲ್ಲೆಯ ಹನುಮಂತಿ ಎಂಬ ಮಹಿಳೆ ಮತ್ತು ತಂಡದವರು ಜೇಡಿಮಣ್ಣಿನಿಂದ ಸುಂದರವಾದ ಕಾಲ್ಗೆಜ್ಜೆ, ಕಿವಿಯೋಲೆ, ಕೈಬಳೆ, ಕೈಹಾರ, ಕೊರಳ ಸರ, ಕೀ ಬಂಚ್, ಜುಮ್ಕಿ, ಹ್ಯಾಂಗಿಗ್ಸ್, ಬಾಗಿಲು ತೋರಣಗಳನ್ನು ತಯಾರಿಸುತ್ತಿದ್ದಾರೆ. ಹೀಗೆ ವಿವಿಧ ವಿನ್ಯಾಸಗಳಿಂದ ಗ್ರಾಹಕರು ಒಮ್ಮೆ ತಮ್ಮ ಅಂಗಡಿಯತ್ತ ಕಣ್ಣು ಹಾಯಿಸುವಂತೆ ಮಾಡುತ್ತಿದ್ದಾರೆ ಈ ಗೃಹಿಣಿ.

ಸದಾ ಕೃಷಿ ಹಾಗೂ ಮನೆ ಕೆಲಸದಲ್ಲಿ ನಿರತರಾಗಿರುವ ಗೃಹಿಣಿಯರ ಕಷ್ಟವನ್ನು ಅರಿತ ಸರ್ಕಾರೇತರ ಸಂಸ್ಥೆಗಳು ಹಳ್ಳಿ ಪ್ರದೇಶಗಳ ಮಹಿಳೆಯರಿಗೆ ಹೊಸ ಜೀವನೋಪಾಯವನ್ನು ಪರಿಚಯಿಸಿದರು. ಕೇರಳ, ದೆಹಲಿ, ಬೆಂಗಳೂರು, ಉಡುಪಿ ಹೀಗೆ ಬೇರೆ ಬೇರೆ ಪ್ರದೇಶಗಳಿಂದ ರಾಯಚೂರಿಗೆ ಆಗಮಿಸಿ ಸಂಘಟನೆಯನ್ನು ಆರಂಭಿಸಿದರು. ಪೋತ್ನಾಳ್‌ನಲ್ಲಿ ಹತ್ತು ರೂಪಾಯಿಯ ಉಳಿತಾಯ ಖಾತೆ ತೆರೆದು ಆರಂಭವಾದ ‘ಚಿಗುರು ಸ್ತ್ರೀಶಕ್ತಿ ಸ್ವ-ಸಹಾಯ ಸಂಘ’ದ ಈ ಕಾರ್ಯ ಮುಂದೆ ಜೀವನಕ್ಕೆ ಹೊಸ ತಿರುವನ್ನು ನೀಡಿತು.

ಆರಂಭದಲ್ಲಿ ಆಭರಣಗಳ ಕೆಲವು ವಿನ್ಯಾಸಗಳ ತಯಾರಿಯಲ್ಲಿ ಈ ಸಂಸ್ಥೆಗಳು ಸಹಕರಿಸಿದವು. ಮುಂದೆ ಗೃಹಿಣಿಯರೇ ಹೊಸ ವಿನ್ಯಾಸಗಳನ್ನು ಸ್ವತಃ ತಯಾರಿಸಿ ವಿನೂತನ ಪ್ರಯೋಗಗಳಿಗೆ ಮುಂದಾದರು. ಹೀಗೆ ತಯಾರಿಸಿದ್ದರಲ್ಲಿ ಮುಂಗಾರುಮಳೆ ಖ್ಯಾತಿಯ ಸರವೂ ಒಂದು!

ಜೇಡಿ ಮಣ್ಣು ಹಾಗೂ ಇತರೆ ಪರಿಕರಗಳನ್ನು ಬೆಂಗಳೂರಿನಿಂದ ತಂದು ತಮ್ಮೂರಿನಲ್ಲಿ ಅವುಗಳಿಗೆ ಹೊಸ ರೂಪ ಕೊಟ್ಟು ಬಣ್ಣಗಳಿಂದ ಅಲಂಕೃತಗೊಳಿಸುತ್ತಾರೆ. ಈ ಆಭರಣಗಳು ಆರೋಗ್ಯಕ್ಕೂ ಹಿತಕರವಾಗಿದ್ದು ಇವುಗಳನ್ನು ಧರಿಸಿದರೆ ಚರ್ಮಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ.

ಬೇರೆ ರಾಜ್ಯಗಳಿಗೂ ವ್ಯಾಪಾರಕ್ಕಾಗಿ ತೆರಳುವ ಹನುಮಂತಿ ಅವರಿಗೆ ತಮ್ಮದೇ ಆದ ಗ್ರಾಹಕರಿದ್ದಾರೆ. ವ್ಯವಹಾರದಲ್ಲಿ ಸ್ವತಃ ಮಗನೇ ಜೊತೆಗಿದ್ದು ಸಹಾಯಮಾಡಿ ತನ್ನ ತಾಯಿಯ ಪ್ರತಿಭೆಗೆ ಪ್ರೋತ್ಸಾಹಿಸುತ್ತಿದ್ದಾರೆ.

Exit mobile version