Kundapra.com ಕುಂದಾಪ್ರ ಡಾಟ್ ಕಾಂ

ಜಂಬೂರಿಯಲ್ಲಿ ಮೀಸೆಯಿಂದ ಕಲ್ಲುಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು!

ಐಶ್ವರ್ಯ ಕೋಣನ | ಕುಂದಾಪ್ರ ಡಾಟ್ ಕಾಂ ವರದಿ.
ವಿದ್ಯಾಗಿರಿ:
ಅಲ್ಲಿ ಮೀಸೆ ಹೊತ್ತ ಇಬ್ಬರು ವಯೋವೃದ್ಧ ಗಂಡಸರಿಗೆ ಎಲ್ಲಿಲ್ಲದ ಡಿಮ್ಯಾಂಡು. ಜೊತೆಗೆ ಕಟ್ಟುಮಸ್ತಾದ ತರುಣರೂ ಗಮನ ಸೆಳೆಯುತ್ತಿದ್ದರು. ಆಳ್ವಾಸ್ ಕ್ಯಾಂಪಸ್ಸಿನಲ್ಲಿ ನಡೆಯುತ್ತಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ, ನುಡಿಸಿರಿ ವೇದಿಕೆಯ ಸಮೀಪ ಸಾಹಜ ಪ್ರದರ್ಶನ ನಡೆಸುತ್ತಿದ್ದ ಬಿಜಾಪುರದ ದಾನೇಶ್ವರಿ ತಂಡ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಜನರ ಸಮ್ಮುಖದಲ್ಲಿ ಚಕ್ಕಡಿಕಲ್ಲಿಗೆ ಹಗ್ಗ ಕಟ್ಟಲಾಗುತ್ತದೆ. ಆ ಹಗ್ಗವನ್ನು ಬಿಜಾಪುರದ ದಿಗಂಬರಪ್ಪ ಅವರ ಮೀಸೆಗೆ ಜೋಡಿಸಲಾಗುತ್ತದೆ. ತಕ್ಷಣ ಅವರು ತಮ್ಮ ಮೀಸೆಯಿಂದಲೇ ೪೦ಕೆ.ಜಿ ಭಾರದ ಚಕ್ಕಡಿಕಲ್ಲನ್ನು ಎತ್ತುತ್ತಾರೆ. ಶಂಕರಪ್ಪ ಮತ್ತು ದಿಗಂಬರಪ್ಪ ಎನ್ನುವವರು ಕ್ರಮವಾಗಿ ೪೦ ಮತ್ತು ೪೫ ಕೆ.ಜಿ. ತೂಕದ ಚಕ್ಕಡಿಕಲ್ಲು ಎತ್ತುವ ಸಾಹಸ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಿಜಾಪುರದ ರಮೇಶ್ ದಾನಪ್ಪ ಪಾಟೀಲ್ ಬಾಯಿಂದ 120 ಕೆಜಿಯ ತೂಕವನ್ನು ಹಾರೆಯ ಮೂಲಕ ಎತ್ತುತ್ತಾರೆ. 14 ವರ್ಷದ ಹುಡುಗ 122 ಕೆಜಿಯ ಭತ್ತದ ಚೀಲವನ್ನು ಬೆನ್ನ ಮೇಲೆ ಹೊತ್ತುಕೊಳ್ಳುವ ಸಣ್ಣಗೆ ಭಯ ಹುಟ್ಟಿಸುತ್ತದೆ. ಮುನ್ನಾ ಪೂಜಾರ್, ಬೀರಪ್ಪ ಪೂಜಾರ್ ಸಂಜಯಕುಮಾರ್ ಸಿದ್ಧಪ್ಪ, ಗೋಪಾಲ್ ಶಿವಪ್ಪ ನಾಯ್ಕೋಡಿ ಮತ್ತಿತರರು 75ಕೆ.ಜಿ ತನಕದ ಗುಂಡು ಕಲ್ಲು, ಚಕ್ಕಡಿ ಕಲ್ಲನ್ನು ಎತ್ತಿ ಸಾಹಸ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ದಾನೇಶ್ವರಿ ತಂಡದ ಸದಸ್ಯರು ಮೂಲತಃ ರೈತರು. ಬಿಡುವಿನ ಸಮಯದಲ್ಲಿ ಕಾರ್ಯಕ್ರಮಗಳಿಗೆ ತೆರಳಿ ಸಾಹಸ ಪ್ರದರ್ಶನ ಮಾಡುತ್ತಾರೆ. ಗುಂಡು ಕಲ್ಲು, ಚಕ್ಕಡಿ ಕಲ್ಲು, ಭತ್ತದ ಮೂಟೆ ಹೀಗೆ ವಿಭಿನ್ನ ರೀತಿಯ ಭಾರದ ಕಲ್ಲುಗಳನ್ನು ಜನರ ಮುಂದೆ ಎತ್ತಿ ಎಲ್ಲರನ್ನು ಆಕರ್ಷಿಸುತ್ತಿದ್ದಾರೆ. ಇದೇ ಸಮಯದಲ್ಲಿ ಯುವಕ ಯುವತಿಯರು ಮೀಸೆ ನೋಡಿ ಆಕರ್ಷಿತರಾಗಿ ಮೀಸೆಗೆ ಜೋತು ಬಿದ್ದು ಫೋಟೋಗಳನ್ನು ತೆಗೆದುಕೊಳ್ಳುತಿದ್ದಾರೆ. ವಿದಾರ್ಥಿನಿ ವಿನೀತಾ ಮೀಸೆಗೆ ಜೋತು ಬಿದ್ದದೃಶ್ಯ ಎಲ್ಲರ ಗಮನ ಸೆಳೆಯಿತು.

ನಮ್ಮ ಈ ಸಾಹಸ ಪ್ರದರ್ಶನಕ್ಕೆ ಪೂರ್ವ ತಯಾರಿ ಬೇಕಾಗುತ್ತದೆ. ಯಾವುದೇ ದುಶ್ಚಟಕ್ಕೆ ಗುರಿಯಾಗದೇ ಸರಿಯಾದ ಕ್ರಮದಲ್ಲಿ ಅಭ್ಯಾಸವೂ ಅವಶ್ಯಕ. ಪ್ರತಿನಿತ್ಯ ಮೀಸೆಗಳಿಗೆ ಕೊಬ್ಬರಿ ಎಣ್ಣೆ ಹಚ್ಚುವುದೇ ಮಜಬೂತಾದ ಮೀಸೆಯ ಗುಟ್ಟು ಎನ್ನುತ್ತಾರೆ.
ದಿಗಂಬರಪ್ಪ, ಮೀಸೆ ಮೂಲಕ ಕಲ್ಲು ಎತ್ತುವ ಸಾಹಸಿ

Exit mobile version