Kundapra.com ಕುಂದಾಪ್ರ ಡಾಟ್ ಕಾಂ

‘ಯಶೋಕಿರಣ’ದಲ್ಲಿ ಡಾ. ಬಿ. ಯಶೋವರ್ಮರ ಚಿಂತನಾ ವೈವಿಧ್ಯತೆ ಬಿಂಬಿಸುವ ಕಲಾಮೇಳ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ದೂರದರ್ಶಿತ್ವ, ಉದಾತ್ತ ಚಿಂತನೆ, ಕಾರ್ಯತತ್ಪರತೆಯ ಮೂಲಕ ಅನೇಕರಿಗೆ ಮಾದರಿಯಾಗಿದ್ದ ಡಾ. ಬಿ. ಯಶೋವರ್ಮ ಅವರ ವ್ಯಕ್ತಿತ್ವದ ಸ್ಫೂರ್ತಿದಾಯಕ ಆಯಾಮವನ್ನು ಹೊಸ ಪೀಳಿಗೆಗೆ ದಾಟಿಸುವ ಸದುದ್ದೇಶದೊಂದಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ತನ್ನ ಕ್ಯಾಂಪಸ್‌ನ ನೂತನ ಕಟ್ಟಡವೊಂದಕ್ಕೆ ಯಶೋಕಿರಣ ಎಂದು ಹೆಸರಿರಿಸಿ ನಮನ ಸಲ್ಲಿಸಿದೆ. ಈ ಕಟ್ಟಡಕ್ಕೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಿಂದಲೇ ವಿದ್ಯುಕ್ತ ಚಾಲನೆ ದೊರಕಿದೆ. ಜಾಂಬೂರಿನ ಸಂದರ್ಭದಲ್ಲಿ ಆಳ್ವಾಸ್ ಕ್ಯಾಂಪಸ್‌ನ ಯಶೋಕಿರಣದಲ್ಲಿ ಜರುಗುತ್ತಿರುವ ಕಲಾಮೇಳವು ಡಾ. ಬಿ. ಯಶೋವರ್ಮರ ಕ್ರಿಯಾಶೀಲ ಚಿಂತನೆಗಿದ್ದ ವೈವಿಧ್ಯತೆಯನ್ನೇ ಬಿಂಬಿಸುತ್ತಿದೆ.

ಡಾ. ಬಿ. ಯಶೋವರ್ಮ ಅವರು ಸಾಹಿತ್ಯ, ಕಲೆ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಆಡಳಿತಾತ್ಮಕ ಪ್ರಕ್ರಿಯೆಗೆ ಸಾಂಸ್ಕೃತಿಕ ಸ್ಪರ್ಶ ನೀಡಿದವರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಹತ್ತುಹಲವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಯೋಗಗಳನ್ನು ನಡೆಸಿದವರು. ಹೆಸರೇ ಸೂಚಿಸುವಂತೆ ತಮ್ಮ ಯಶಸ್ಸಿನೊಂದಿಗೆ ವಿದ್ಯಾರ್ಥಿಗಳ ಹಾಗೂ ಬೋಧಕವರ್ಗದ ಯಶಸ್ಸಿಗೆ ಕಾರಣರಾದವರು. ತಮ್ಮ ವ್ಯಕ್ತಿತ್ವದಿಂದ ಎಲ್ಲರಿಗೂ ಬಹುಬೇಗ ಹತ್ತಿರವಾಗುತ್ತಿದ್ದ ಯಶೋವರ್ಮ ಅವರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಸಂದ ಗೌರವ ‘ಯಶೋಕಿರಣ’.

ಕಲಾಮೇಳವು ಕಲಾಸಕ್ತರ ಮನ ತಣಿಸುತ್ತಿರುವುದರೊಂದಿಗೆ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ನೀಡುತ್ತಿದೆ. ಪಠ್ಯಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಗೆ ಒತ್ತು ನೀಡಿದಾಗ ಸಮಗ್ರ ಬೆಳವಣಿಗೆ ಸಾಧ್ಯ ಎಂದು ನಂಬಿದ್ದ ಯಶೋವರ್ಮ ಅವರ ತತ್ವಕ್ಕೆ ಕೈಗನ್ನಡಿಯಂತಿದೆ ಈ ಕಲಾಮೇಳ.

ಇಲ್ಲಿ ದೇಶದ ಮೂಲೆ-ಮೂಲೆಗಳಿಂದ ಆಗಮಿಸಿರುವ ಖ್ಯಾತನಾಮ ಕಲಾಕಾರರ ಮೌಲಿಕ ಸಂದೇಶ ಸಾರುವ ಕಲಾಕೃತಿಗಳು ಪ್ರದರ್ಶಿಸಲ್ಪಡುತ್ತಿವೆ. ಒಬ್ಬೊಬ್ಬರ ಕಣ್ಣಿಗೆ ಒಂದೊಂದು ಬಗೆಯಲ್ಲಿ ಕಾಣಬಹುದಾದ ಚಿತ್ರಗಳು ಕಲಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿವೆ.

ಪ್ರಕೃತಿಯ ಜೊತೆಗೆ ಮನುಷ್ಯನ ನಂಟು, ಸಮಾಜದ ವಿವಿಧ ಸ್ವರೂಪ, ತಾಂತ್ರಿಕತೆ, ಮನುಷ್ಯ ಅಸ್ಮಿತೆ ಮತ್ತು ಪ್ರಾಕೃತಿಕ ಶಕ್ತಿಯ ನಡುವಿನ ನಿರಂತರ ಸಂಘರ್ಷ, ಪರಿಸರಪರ ಕಾಳಜಿಗೆ ತದ್ವಿರುದ್ಧವಾದ ವೈರುಧ್ಯಗಳು ಸೇರಿದಂತೆ ಅನೇಕ ಮೌಲಿಕ ಆಶಯಗಳನ್ನು ಧ್ವನಿಸಿದ ಚಿತ್ರಗಳು ಕಲಾತ್ಮಕ ‘ಯಶೋ’ಮಾರ್ಗದ ಶ್ರೇಷ್ಠತೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿವೆ.

ವ್ಯಂಗ್ಯಚಿತ್ರಗಳೆಂದರೆ ವ್ಯವಸ್ಥೆಯೊಳಗಿನ ಲೋಪಗಳನ್ನು ಸಮಾಜಕ್ಕೆ ತಿಳಿಸುವ ಬಗೆ ಎಂಬುದು ಸಾಮಾನ್ಯರ ಕಲ್ಪನೆ ಆದರೆ ಇಲ್ಲಿ ಟೀಕಿಸುವ ಅಣುಕಿಸುವ ಅಥವಾ ಲೋಪಗಳನ್ನು ಎತ್ತಿಹಿಡಿವ ಜೊತೆಗೆ ಪ್ರಕೃತಿದತ್ತ ಸಂಪನ್ಮೂಲಗಳನ್ನು ಉಳಿಸುವ ಬಗೆ, ಸಮಾಜಕ್ಕೆ ಕೊಡುಗೆ ನೀಡಬಲ್ಲ ವ್ಯಂಗ್ಯ ಚಿತ್ರಗಳನ್ನು ಚಿತ್ರಿಸಲಾಗಿದೆ.

Exit mobile version