Kundapra.com ಕುಂದಾಪ್ರ ಡಾಟ್ ಕಾಂ

‘ರಕ್ತ ಸಂಚಾರಿ’ ದಾವಣಗೆರೆಯ ಶಿವಕುಮಾರ್ – ಜಾಂಬೂರಿಯಲ್ಲಿ ರಕ್ತದಾನ ಜಾಗೃತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ರಕ್ತದಾನದ ಕುರಿತು ಭಿತ್ತಿಪತ್ರಗಳಲ್ಲಿ ಅರಿವು ಮೂಡಿಸಿದ್ದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಕೆಂಪು ಬಣ್ಣದ ವಸ್ತ್ರ ಧರಿಸಿ ರಕ್ತದಾನದ ಜಾಗೃತಿ ಮೂಡಿಸುವ ಚಿತ್ರಗಳನ್ನು ಸ್ವತಃ ತಾನೇ ಬಿಡಿಸಿಕೊಂಡು ಅರಿವು ಮೂಡಿಸುತ್ತಿದ್ದಾರೆ.

ದಾವಣಗೆರೆಯ ಮಹಡಿಮನೆ ಶಿವಕುಮಾರ್ ರಕ್ತದಾನದ ಅರಿವು ಮೂಡಿಸುವ ಉದ್ದೇಶದಿಂದಲೇ ಆಳ್ವಾಸ್‌ನ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪಾಲ್ಗೊಂಡಿರುವುದು ವಿಶೇಷ. ಇಲ್ಲಿಯವರೆಗೆ ೯೦ ಬಾಟಲಿ ರಕ್ತದಾನ ಮಾಡಿರುವ ಇವರು ಈಗಲೂ ಅಗತ್ಯವಿರುವವರಿಗೆ ರಕ್ತದಾನ ಮಾಡಲು ತಯಾರಿದ್ದಾರೆ. ತನ್ನ ಮರಣಾನಂತರ ನೇತ್ರದಾನ ಹಾಗೂ ದೇಹದಾನ ಮಾಡಲು ಇಚ್ಛಿಸಿರುವ ಇವರು ದೇಶಾದ್ಯಂತ ರಕ್ತದಾನದ ಕುರಿತು ತಿಳುವಳಿಕೆ ಮೂಡಿಸುವ ಆಂದೋಲನ ಕೈಗೊಳ್ಳುವ ಸದಾಶಯ ಹೊಂದಿದ್ದಾರೆ.

ಚಿಂತಾಜನಕ ಆರೋಗ್ಯ ಪರಿಸ್ಥಿಯಲ್ಲಿದ್ದ ಶಿವಕುಮಾರ್ ಅವರ ತಂಗಿಗೆ ಎಂಟು ಬಾಟಲಿ ರಕ್ತದ ಅವಶ್ಯಕತೆಯಿತ್ತು. ಆ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ರಕ್ತದೊರೆಯದೇ ಸಾವಿಗೀಡಾದ ತಂಗಿಯ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು ಎಂಬ ಕಾಳಜಿಯೊಂದಿಗೆ ರಕ್ತದಾನಕ್ಕೆ ಮುಂದಾದರು.

ಅತ್ಯುತ್ಸಾಹದೊಂದಿಗೆ ಈ ಬಗೆಯ ಆದರ್ಶಪ್ರಾಯ ಹೆಜ್ಜೆಯಿಟ್ಟಿರುವ ೫೩ ವರ್ಷದ ಶಿವಕುಮಾರ್ ಅವರು ರಕ್ತದಾನದ ಅರಿವು ಮೂಡಿಸಲು ಪ್ರಪಂಚ ಪರ್ಯಟನೆ ಕೈಗೊಳ್ಳುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಮನಕೀ ಬಾತ್’ ಮೂಲಕ ರಕ್ತದಾನದ ಮಹತ್ವದ ಕುರಿತು ಪ್ರಸ್ತಾಪವಾಗಬೇಕು ಎಂಬ ನಿರೀಕ್ಷೆ ಅವರದ್ದು.

Exit mobile version