Kundapra.com ಕುಂದಾಪ್ರ ಡಾಟ್ ಕಾಂ

ರಸ್ತೆ ಅಪಘಾತ ತಡೆಯುವ ‘ಆಟೊಮ್ಯಾಟಿಕ್ ಸಿಗ್ನಲ್ ಲೈಟ್’ ಮಾದರಿ

ಮಹಾಂತೇಶ ಚಿಲವಾಡಗಿ | ಕುಂದಾಪ್ರ ಡಾಟ್ ಕಾಂ ವರದಿ.
ವಿದ್ಯಾಗಿರಿ:
ರಸ್ತೆ ಅಪಘಾತಗಳನ್ನು ತಡೆಯುವ ತಾಂತ್ರಿಕ ಆವಿಷ್ಕಾರದ ಪ್ರಯೋಗದ ?ಅಟೊಮ್ಯಾಟಿಕ್ ಸಿಗ್ನಲ್ ಲೈಟ್? ಮಾದರಿಯನ್ನು ಉಜಿರೆಯ ಎಸ್.ಡಿ.ಎಂ ಸೆಕೆಂಡರಿ ಫ್ರೌಡಶಾಲೆಯ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.

ವಾಹನಗಳು ಹೆದ್ದಾರಿಯನ್ನು ಹಾದುಹೋಗುವಾಗ ಎದುರಿಸುವ ಅಡೆತಡೆಗಳನ್ನು ತಡೆಯುವ ಮುನ್ಸೂಚಕ ಮಾದರಿಯಾಗಿ ಇದು ಪ್ರಾಮುಖ್ಯತೆ ಪಡೆದಿದೆ. ಆಳ್ವಾಸ್ ಸಂಸ್ಥೆಯ ವಿದ್ಯಾಗಿರಿಯಲ್ಲಿ ಆಯೋಜಿತವಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯ ವಿಜ್ಞಾನ ಮೇಳದಲ್ಲಿ ಈ ಮಾದರಿ ಜನಮೆಚ್ಚುಗೆ ಪಡೆಯುತ್ತಿದೆ.

ಕಚ್ಚಾರಸ್ತೆಗಳ ಮೂಲಕ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸ್ಥಳಕ್ಕೆ ತಲುಪುವ ಮುಂಚಿನ ಹಾದಿಯಲ್ಲಿಯೇ ಸೆನ್ಸಾರ್‌ಗಳನ್ನು ಅಳವಡಿಸಿ ಚಾಲಕರನ್ನು ಸಿಗ್ನಲ್‌ಗಳ ಮೂಲಕ ಎಚ್ಚರಿಸಿ ಹೆದ್ದಾರಿಗೆ ತಲುಪುವ ವೃತ್ತದಲ್ಲಿ ವಾಹನದಟ್ಟಣೆಯಾಗದಂತೆ ಈ ತಂತ್ರಜ್ಞಾನ ನೋಡಿಕೊಳ್ಳುತ್ತದೆ. ಸಮಯದ ಉಳಿತಾಯ, ವಾಹನ ದಟ್ಟಣೆ ಮತ್ತು ಈ ಕಾರಣಕ್ಕಾಗಿಯೇ ಆಗುವ ಅಪಘಾತಗಳನ್ನು ಈ ಮಾದರಿ ತಡೆಯುತ್ತದೆ.

ಹೆದ್ದಾರಿಗೆ ಜೋಡಣೆಯಾಗುವ ಮುಂಚಿನ ಕಚ್ಚಾರಸ್ತೆಯಲ್ಲಿ ಮೂರು ಸೆನ್ಸರ್‌ಗಳನ್ನು ಅಳವಡಿಸಲು ಈ ತಾಂತ್ರಿಕ ಮಾದರಿ ಸೂಚಿಸುತ್ತದೆ. ಮೊದಲನೆಯ ಸೆನ್ಸರ್ ಹತ್ತಿರ ಬಂದಾಗ ಹೆದ್ದಾರಿ ಮೂಲಕ ಚಲಿಸುವ ವಾಹನಕ್ಕೆ ಐದು ಸೆಂಕೆಡ್ ಕಾಲ ಅವಕಾಶ ಇರುತ್ತದೆ. ಅದು ಮುಂದೆ ಎರಡನೇ ಸೆನ್ಸರ್‌ನ ಹತ್ತಿರ ಬಂದಾಗ ಹತ್ತು ಸೆಂಕೆಡ್ ಕಾಲ ಅವಕಾಶ ಇರುತ್ತದೆ. ಮೂರನೇ ಹಂತದಲ್ಲಿ ಬಂದಾಗ ಕಚ್ಚಾ ರಸ್ತೆಯಲ್ಲಿ ಹದಿನೈದು ಸೆಕೆಂಡ್ ರೆಡ್ ಸಿಗ್ನಲ್ ಲೈಟ್ ಬೀಳುತ್ತದೆ. ವಾಹನ ಚಾಲನೆಯನ್ನು ನಿಧಾನಗತಿಯಲ್ಲಿರಿಸಿ ಹೆದ್ದಾರಿಯ ಮುಖ್ಯರಸ್ತೆಗೆ ಬಂದಾಗ ಆಟೋಮ್ಯಾಟಿಕ್ ಆಗಿ ಗ್ರೀನ್ ಸಿಗ್ನಲ್ ಕಾಣಿಸಿಕೊಂಡು ವಾಹನ ಚಲನೆ ಸರಾಗವಾಗುತ್ತದೆ.

ರಸ್ತೆ ಬದಿಯಲ್ಲಿ ನಡೆಯುವ ಅಪಘಾತಗಳನ್ನು ಇದರಿಂದ ತಡೆಯಬಹುದು. ಈ ಮಾದರಿಯಲ್ಲಿ ಸೆನ್ಸರ್ ಅಳವಡಿಕೆಯು ಕಡಿಮೆ ವೆಚ್ಚದಾಯಕವೂ ಹೌದು. ಸಮಯದ ಅಪವ್ಯಯವನ್ನೂ ತಡೆಯಬಹುದು. ವಾಹನಗಳ ಸುಗಮ ಸಂಚಾರಕ್ಕೂ ಇದು ಪೂರಕ. ಅಲ್ಲದೇ ಈ ಮೂಲಕ ಪರ್ಯಾಯ ವಿದ್ಯುತ್ ಉತ್ಪನ್ನದ ಮಾರ್ಗವನ್ನೂ ಕಂಡುಕೊಳ್ಳಬಹುದು ಎಂಬುದು ಈ ಮಾದರಿಯನ್ನು ಕಂಡುಹಿಡಿದ ವಿದ್ಯಾರ್ಥಿಗಳಾದ ರಿತೇಶ್ ಗೌಡ ಮತ್ತು ಹರ್ಷವರ್ಧನ ಅಭಿಪ್ರಾಯ. ಶಿಕ್ಷಕರಾದ ಗುರುಚೇತನ ಅವರ ಮಾರ್ಗದರ್ಶನದಲ್ಲಿ ಈ ಮಾದರಿಯನ್ನು ರೂಪಿಸಿರುವುದಾಗಿ ಅವರು ಹೇಳಿದರು.

Exit mobile version