Kundapra.com ಕುಂದಾಪ್ರ ಡಾಟ್ ಕಾಂ

ಹೃದಯವಂತರು ಮಾತ್ರ ಪರರ ಕಷ್ಟಕ್ಕೆ ಸ್ಪಂದಿಸುತ್ತಾರೆ: ವಿನಯ ಗುರೂಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಧನವಂತರಿಗೆಲ್ಲಾ ಪರರಿಗೆ ಸಹಾಯ ಮಾಡುವಷ್ಟು ಔದಾರ್ಯವಿರಲ್ಲ. ಹೃದಯವಂತರು ಮಾತ್ರ ಇನ್ನೊಬ್ಬರ ಕಷ್ಟಕ್ಕೆ ಸ್ಪಂಧಿಸುತ್ತಾರೆ ಎಂದು ಅವಧೂತ ವಿನಯ್ ಗುರೂಜೀ ಹೇಳಿದರು.

ಅವರು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ಇದರ ವತಿಯಿಂದ ಮರವಂತೆ ಗಾಂಧಿನಗರದ ಹಿಂದೂ ಕಾರ್ಯಕರ್ತ ರಾಜು ಮರವಂತೆ ಅವರಿಗೆ ನಿರ್ಮಿಸಿಕೊಡಲಾದ ‘ಶ್ರೀ ವರಲಕ್ಷ್ಮೀ ನಿಲಯ’ ಉದ್ಘಾಟಿಸಿ ಆಶೀರ್ವದಿಸಿ, ಪರರ ಕಷ್ಟಕ್ಕೆ ಸ್ಪಂದಿಸುವ ಶ್ರೇಷ್ಠ ಚಿಂತನೆಗಳು ಮುಖ್ಯ. ಪರರಿಗೆ ಒಳಿತಾಗಲು ಶ್ರಮಿಸುತ್ತಿರುವ ಡಾ. ಗೋವಿಂದ ಬಾಬು ಪೂಜಾರಿಯವರ ಸೇವಾ ಕೈಂಕರ್ಯ ಶ್ರೇಷ್ಠವಾದುದು ಎಂದರು.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟೀ ಡಾ. ಗೋವಿಂದ ಬಾಬು ಪೂಜಾರಿ ಪ್ರಾಸ್ತಾವಿಕ ಮಾತನಾಡಿ, ಧರ್ಮ ಜಾಗೃತಿಗಾಗಿ ಹಾಗೂ ಹಿಂದುತ್ವದ ರಕ್ಷಣೆಗಾಗಿ ವೈಯಕ್ತಿಕ ಬದುಕನ್ನು ಮರೆತು ಧರ್ಮ ಕಾರ್ಯದಲ್ಲಿ ತೊಡಗುವ ಸಂಘಟನೆಯ ಕಾರ್ಯಕರ್ತರ ಪರಿಶ್ರಮ, ತ್ಯಾಗ ಸದಾ ಸ್ಮರಣೀಯವಾಗಿದೆ. ಅವರ ಕಷ್ಟ, ನೋವುಗಳಿಗೆ ಸ್ಪಂದಿಸಬೇಕಾಗಿರುವುದು ಧರ್ಮ. ಹೀಗಾಗಿ ಎಲ್ಲಾ ಪ್ರಮುಖರ ಮಾರ್ಗದರ್ಶನದಲ್ಲಿ ಹಿಂದೂ ಕಾರ್ಯಕರ್ತರ ಕಷ್ಟಕ್ಕೆ ಸ್ಪಂದಿಸಿ ಹಿಂದು ಕಾರ್ಯಕರ್ತರಿಗೆ ಒಟ್ಟು ಮೂರು ಮನೆಯನ್ನು ನಿರ್ಮಿಸಿಕೊಡಲಾಗಿದೆ. ಟ್ರಸ್ಟ್ ವತಿಯಿಂದ ಒಟ್ಟು 11 ಮನೆಯನ್ನು ಬಡವರಿಗಾಗಿ ನಿರ್ಮಿಸಿಕೊಡಲಾಗಿದೆ ಎಂದರು.

https://youtu.be/lHl5wrRZD28
Watch Video

ವಿಶ್ವ ಹಿಂದೂ ಪರಿಷತ್ ಪ್ರಾಂತ್ಯದ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ಅಭಿನವ್ ಹಾಲಾಶ್ರೀ, ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಪ್ರಕಾಶ ಕುಕ್ಕೆಹಳ್ಳಿ, ಆರ್.ಎಸ್.ಎಸ್ ಪ್ರಮುಖರಾದ ನಾರಾಯಣ ಶೆಣೈ ಉಡುಪಿ, ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಗೋವಿಂದ ಬಾಬು ಪೂಜಾರಿ ಅವರ ಪೋಷಕರಾದ ಬಾಬು ಪೂಜಾರಿ, ಮಂಜಮ್ಮ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ವತಿಯಿಂದ ಡಾ. ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version