ಕುಂದಾಪುರ: ತಾಲೂಕಿನ ಶಿರೂರಿನ ಮೂಲದ ವೈದ್ಯ, ನಾರಾಯಣ ನೇತ್ರಾಲಯದ ಉಪಾಧ್ಯಕ್ಷ ಡಾ.ರೋಹಿತ್ ಶೆಟ್ಟಿ ‘ಕಣ್ಣೀರು ಮತ್ತು ಕೆರಟೊಕೊನಸ್’ ಎಂಬ ವಿಷಯದಲ್ಲಿ ಭಾರತದಲ್ಲೇ ಪ್ರಥಮ ಬಾರಿ ಪಿ.ಎಚ್.ಡಿ.ಪದವಿ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ರೋಹಿತ್ ಶೆಟ್ಟಿ ನೆದರ್ಲ್ಯಾಂಡ್ಸ್ ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಪಿ.ಎಚ್.ಡಿ. ಪದವಿ ಪಡೆದ ಮೊಟ್ಟಮೊದಲ ಭಾರತೀಯ ವೈದ್ಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮನುಕುಲದ ಉನ್ನತಿಗೆ ಶ್ರಮಿಸಬೇಕೆನ್ನುವ ಅವರ ಆಂತರ್ಯದ ತುಡಿತವು ಅವರನ್ನು ಕಣ್ಣೀರಿನ ಕುರಿತಾದ ಈ ಅಪರೂಪದ ಸಂಶೋಧನೆಯನ್ನು ಕೈಗೊಳ್ಳುವಲ್ಲಿ ಪ್ರೇರಣೆಯನ್ನು ನೀಡಿತ್ತು.
ಡಾ.ರೋಹಿತ್ ಅವರ ಸಂಶೋಧನೆಯು ಕೆರಟೊಕೊನಸ್ ಎಂದು ಕರೆಯಲ್ಪಡುವ ಕಣ್ಣಿಗೆ ಸಂಬಂಧಿಸಿದ ರೋಗವನ್ನು ಪತ್ತೆಹಚ್ಚಲು ಮತ್ತು ಕ್ರಮೇಣ ಅಭಿವೃದ್ಧಿ ಹೊಂದುವ ಗುಣವನ್ನು ಹೊಂದಿರುವ ಈ ರೋಗವನ್ನು ತಡೆಯಲು ಸಹಾಯ ಮಾಡುತ್ತದೆ.
[quote bgcolor=”#ffffff” arrow=”yes”]
ಡಾ.ರೋಹಿತ್ ಶೆಟ್ಟಿ ಅವರು ತಮ್ಮ ಸಂಶೋಧನೆಯ ಭಾಗವಾಗಿ ಕಣ್ಣೀರಿನ ಸ್ಯಾಂಪಲ್ಲುಗಳ ಮೇಲೆ ವ್ಯಾಪಕವಾದ ಅಧ್ಯಯನವನ್ನು ಕೈಗೊಂಡು ಕೆಲವೇ ಹನಿ ಕಣ್ಣೀರುಗಳಿಂದ ಅನೇಕ ಹೊಸ ಸಂಗತಿಗಳನ್ನು ಪತ್ತೆಹಚ್ಚಬಹುದು ಎಂಬುದನ್ನು ಕಂಡುಹಿಡಿದು ಸಾಬೀತುಪಡಿಸಿದ್ದಾರೆ. ಕಣ್ಣಿನ ತೀವ್ರ ತೊಂದರೆಯಿಂದ ತಮ್ಮ ಬಳಿ ಬರುತ್ತಿದ್ದ ಯುವ ರೋಗಿಗಳು ಮತ್ತು ನಿರಂತರವಾಗಿ ತಲೆನೋವಿನಿಂದ ಬಳಲುತ್ತಿದ್ದ ರೋಗಿಗಳನ್ನು ತಮ್ಮ ವೈದ್ಯವೃತ್ತಿಯ ಆರಂಭದಲ್ಲಿ ಪರಿಶೀಲಿಸತೊಡಗಿದಾಗ ಅವರಿಗೆ ಈ ವಿಷಯದ ಕುರಿತ ಸಂಶೋಧನೆಯನ್ನು ಮಾಡುವ ಪ್ರೇರಣೆ ಉಂಟಾಗಿತ್ತು. ಕೆರಟೊಕೊನಸ್ ಪದವು ಗ್ರೀಕ್ ಮೂಲದ್ದಾಗಿದ್ದು ಕೆರಟೊ ಅಂದರೆ ಕೊಂಬು ಅಥವಾ ಕಾರ್ನಿಯಾ ಮತ್ತು ಕೊನಸ್ ಅಂದರೆ ಶಂಕು ಎಂಬ ಅರ್ಥವನ್ನು ನೀಡುತ್ತದೆ.
ಸುತ್ತಮುತ್ತಲಿನ ವಸ್ತುಗಳನ್ನು ಕಾಣುವಲ್ಲಿ, ಡ್ರೈವಿಂಗ್ ಮಾಡುವುದು, ಟಿವಿ ನೋಡುವುದು ಅಥವಾ ಪುಸ್ತಕ ಓದುವುದು ಮುಂತಾದ ಸರಳ ಕೆಲಸಗಳನ್ನು ಮಾಡುವಲ್ಲಿಯೂ ಕೆರಟೊಕೊನಸ್ ತೊಂದರೆಯು ತೀವ್ರವಾದ ಪ್ರಭಾವವನ್ನು ಉಂಟುಮಾಡುತ್ತಿದ್ದುದನ್ನು ಡಾ.ರೋಹಿತ್ ಅವರು ತಮ್ಮ ರೋಗಿಗಳಲ್ಲಿ ಗಮನಿಸಿದ್ದರು. [ಕುಂದಾಪ್ರ ಡಾಟ್ ಕಾಂ]
[box type=”custom” bg=”#ffffff” radius=”5″ border=”#65a332″]ಕೆರಟೊಕೊನಸ್ ಎಂದರೇನು?
ಕಣ್ಣಿನ ಮುಂಭಾಗದ ಮೇಲ್ಮೈ ಕಾರ್ನಿಯಾವು ಅಸ್ವಾಭಾವಿಕವಾಗಿ ಊದಿಕೊಳ್ಳುತ್ತ ಸಾಗುವ ಸ್ಥಿತಿ ಕೆರಟೊಕೊನಸ್. ಈ ಸ್ಥಿತಿಯಲ್ಲಿ ಬೆಳಕು ರೆಟಿನಾದ ಮೇಲೆ ಸರಿಯಾಗಿ ಬೀಳದೇ ದೃಷ್ಟಿ ಮಂಜಾಗತೊಡಗುತ್ತದೆ. ಈ ತೊಂದರೆಯನ್ನು ಕನ್ನಡಕದ ಮೂಲಕವಾಗಲೀ ಅಥವಾ ಅಂತಿಮ ಹಂತದಲ್ಲಿ ಕೂಡ ಕಾಂಟ್ಯಾಕ್ಟ್ ಲೆನ್ಸುಗಳಿಂದಲಾಗಲೀ ಸರಿಪಡಿಸುವುದು ಸಾಧ್ಯವಿಲ್ಲ.
ಕೆಲವು ಪ್ರಕರಣಗಳಲ್ಲಿ ಇದೊಂದು ಆನುವಂಶಿಕ ರೋಗವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಪಾಲಕರಲ್ಲಿ ಕೂಡ ಕಂಡುಬರುತ್ತದೆ ಅಥವಾ ಅಲರ್ಜಿ ಹೊಂದಿರುವ ಚಿಕ್ಕಮಕ್ಕಳಲ್ಲಿ ಕಂಡುಬಂದು ಕಣ್ಣುಗಳನ್ನು ಉಜ್ಜಿಕೊಳ್ಳುವಂತೆ ಪ್ರೇರೇಪಿಸಿ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ. ಈ ಸಮಸ್ಯೆಯನ್ನು ಹೊಂದಿರುವ ಸುಮಾರು 50ಕ್ಕಿಂತಲೂ ಹೆಚ್ಚು ರೋಗಿಗಳನ್ನು ನಮ್ಮ ಕ್ಲಿನಿಕ್ಕಿನಲ್ಲಿ 2007ನೇ ವರ್ಷವೊಂದರಲ್ಲಿಯೇ ಪತ್ತೆಹಚ್ಚಿದ್ದೇವೆ. ಈಗ ಈ ಸಂಖ್ಯೆ ದಿನವೊಂದಕ್ಕೆ 8 ರಿಂದ 10 ರೋಗಿಗಳು ನಮ್ಮಲ್ಲಿ ಬರುವಷ್ಟು ಪ್ರಮಾಣದಲ್ಲಿ ಹೆಚ್ಚಿದೆ. 35ಕ್ಕಿಂತಲೂ ಕಡಿಮೆ ವಯೋಮಾನದವರಲ್ಲಿ ಇದು ಅತಿ ಸಾಮಾನ್ಯ ಎಂಬಂತಾಗಿದ್ದು ಅವರಲ್ಲಿ ಹೆಚ್ಚಿನವರು ನಗರ ಪ್ರದೇಶಗಳವರಾಗಿರುತ್ತಾರೆ. ಅವರಲ್ಲಿ ಕೇವಲ 1% ದಷ್ಟು ರೋಗಿಗಳು ಮಾತ್ರ ಆನುವಂಶಿಕ ರೋಗದಿಂದ ಬಳಲುತ್ತಾರೆ. ಉಳಿದ 99%ರಷ್ಟು ರೋಗಿಗಳು ಕಂಪ್ಯೂಟರ್, ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಮತ್ತು ಸ್ಮಾರ್ಟ್ ಫೋನ್ ಅಡಿಕ್ಷನ್ ನಿಂದಾಗಿ ಉಂಟಾಗುವ ಅಲರ್ಜಿಗಳಿಂದ ಬಳಲುತ್ತಾರೆ, ಆಕಾರಣಕ್ಕಾಗಿ ಕಣ್ಣುಗಳ ಆದ್ರತೆ ಕಡಿಮೆಯಾಗಿ ತುರಿಕೆಯುಂಟಾಗುತ್ತದೆ ಎಂದು ಡಾ.ಶೆಟ್ಟಿ ಅವರು ಹೇಳುತ್ತಾರೆ.
ದೃಷ್ಟಿಹೀನತೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಆರಂಭಿಕ ಹಂತದಲ್ಲಿಯೇ ರೋಗಪತ್ತೆಮಾಡುವ ಲಕ್ಷ್ಯವನ್ನಿರಿಸಿಕೊಂಡ ಡಾ.ಶೆಟ್ಟಿ ಅವರು 2004ರಲ್ಲಿ ತಮ್ಮ ಸಂಶೋಧನೆಯನ್ನು ಆರಂಭಿಸಿದರು. ಕೆರಟೊಕೊನಸ್ನ ಜೆನೆಟಿಕ್ ಮಾಲಿಕ್ಯುಲರ್ ಮೆಕ್ಯಾನಿಸಮ್ ಹಾಗೂ ವೈದ್ಯಕೀಯ ಪ್ರತಿರಕ್ಷಾ ಶಾಸ್ತ್ರದ ಅರಿತುಕೊಳ್ಳುವಿಕೆ ಎಂಬ ಶೀರ್ಷಿಕೆಯಡಿಯಲ್ಲಿ ಅವರು 2013ರಲ್ಲಿ ನೇದರ್ಲ್ಯಾಂಡ್ಸ್ನ ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದ ಸಹಯೋಗ ಪಡೆದು ಅಲ್ಲಿನ ಪ್ರೊ.ರುಡಿ ನ್ಯೂಯಿಟ್ಸ್ ಅವರೊಂದಿಗೆ ಕೆಲಸ ಮಾಡಿದರು. ಈ ಸಂಶೋಧನೆಯು ಅವರಿಗೆ ಪ್ರತಿಷ್ಠಿತ ಕರ್ನಲ್ ರಂಗಾಚಾರಿ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಫೆಬ್ರುವರಿ 2015ರಲ್ಲಿ ನಡೆದ ಅಖಿಲ ಭಾರತ ಮಟ್ಟದ ನೇತ್ರಶಾಸ್ತ್ರಜ್ಞರ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು ನೇತ್ರವಿಜ್ಞಾನ ಕ್ಷೇತ್ರದಲ್ಲಿ ಕೊಡಮಾಡುವ ಅತ್ಯುನ್ನತ ಮಟ್ಟದ ಗೌರವ ಪುರಸ್ಕಾರ ಇದಾಗಿದೆ. [ಕುಂದಾಪ್ರ ಡಾಟ್ ಕಾಂ][/box]

