Kundapra.com ಕುಂದಾಪ್ರ ಡಾಟ್ ಕಾಂ

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ವಾರ್ಷಿಕ ಮಕರ ಸಂಕ್ರಮಣ ಉತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಜ.14 ರಿಂದ 16ರ ವರೆಗೆ ನಡೆಯಲಿರುವ ಮಕರ ಸಂಕ್ರಮಣ ಉತ್ಸವಕ್ಕೆ ಸಂಪೂರ್ಣ ಸಿದ್ಧತೆ ನಡೆದಿದ್ದು, ಸಾವಿರಾರು ಭಕ್ತರು ಬೆಳಿಗ್ಗೆಯಿಂದ ದೇವರ ದರ್ಶನ ಪಡೆಯುತ್ತಿದ್ದಾರೆ.

ಜ.14ರಂದು ಬೆಳಗ್ಗೆ 9ಕ್ಕೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ, ರಾತ್ರಿ 10.30ಕ್ಕೆ ಕೆಂಡಸೇವೆ, ಜ.15, 16 ರಂದು ಬೆಳಗ್ಗೆ ಮಹಾಮಂಗಳಾರತಿ, ರಾತ್ರಿ 9.30ಕ್ಕೆ ಮಂಡಲ ಸೇವೆ, ಜ.14 ರಂದು ಸಂಜೆ 6ರಿಂದ 2.30 ರತನಕ ಕೆಂಡಸೇವೆ, ಜ.17 ರಂದು ಬೆಳಗ್ಗೆ ಸಂಪ್ರೋಕ್ಷಣೆ ನಡೆಯಲಿದೆ. ಕೆಂಡಸೇವೆ,ಮಂಡಲಸೇವೆ, ಮಹಾ ಪೂಜೆ ನಡೆಯುವ ಸಮಯ ಭಕ್ತರ ಪೂಜೆ, ಹಣ್ಣುಕಾಯಿ ಸೇವೆ ಜರಗುವುದಿಲ್ಲವೆಂದು ಆನುವಂಶೀಯ ಆಡಳಿತ ಮೊಕ್ತಸರ ಸಿ. ಸದಾಶಿವ ಶೆಟ್ಟಿ ತಿಳಿಸಿದ್ದಾರೆ.

ಹಬ್ಬದ ಸಂದರ್ಭ ಭಕ್ತರು ಸೇವಂತಿಗೆ, ಸಿಂಗಾರ ಹೂವನ್ನು ಬುಟ್ಟಿಯಲ್ಲಿಟ್ಟು ತಲೆಯಲ್ಲಿ ಹೊತ್ತು ಹರಕೆ ರೂಪದಲ್ಲಿ ಶ್ರೀ ದೇವರಿಗೆ ಸಮರ್ಪಿಸುವ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಮಾರಣಕಟ್ಟೆ ಕ್ಷೇತ್ರವನ್ನು ಬಡಗಿನ ದೇವರೆಂದು ಭಕ್ತರು ನಂಬಿದ್ದಾರೆ. ಕುಂದಾಪುರ, ಬೈಂದೂರು ಸೇರಿದಂತೆ ತುಳುನಾಡಿನವರು ಭಕ್ತರು ಮಾರಣಕಟ್ಟೆ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಧನು ಸಂಕ್ರಮಣದಂದು ಕ್ಷೇತ್ರದ ಚಿಕ್ಕು ದೇವರ ಪಾತ್ರಿ ಇಲ್ಲಿನ ಚಕ್ರ ಉಪನದಿಯನ್ನು ದಾಟಿ ತುಳುನಾಡಿನ ಭಕ್ತರ ಮನೆಯಲ್ಲಿ ಮೈದರ್ಶನ ಮಾಡುತ್ತಾ ಕೊನೆಗೆ ಮಕರ ಸಂಕ್ರಮಣದಂದು ಕ್ಷೇತ್ರಕ್ಕೆ ಆಗಮಿಸುವ ಪದ್ಧತಿ ಇಂದಿಗೂ ನಡೆಯುತ್ತಾ ಬಂದಿದೆ.

ಅಲಂಕಾರಗೊಂಡ ಮಾರಣಕಟ್ಟೆ ಪರಿಸರ
ಚಿತ್ತೂರು ಸ್ವಾಗತ ಗೋಪುರದ ತಿರುವಿನಿಂದ ಮಾರಣಕಟ್ಟೆ ದೇಗುಲದವರೆಗೆ ಮಕರ ಸಂಕ್ರಮಣ ಉತ್ಸವದ ಸಲುವಾಗಿ ವಿಶೇಷವಾಗಿ ಅಲಂಕರಿಸಲಾಗಿದೆ. ಗ್ರಾಮಸ್ಥರು, ಕ್ಷೇತ್ರದ ಅರ್ಚಕರು, ಸಿಬಂದಿ, ದರ್ಶನ ಪಾತ್ರಿಗಳು, ಚಿತ್ತೂರು ಗುಡಿಕೇರಿ ಮನೆ ಕುಟುಂಬಸ್ಥರ ನೇತೃತ್ವದಲ್ಲಿ ಆಗಮಿಸುವ ಭಕ್ತರಿಗೆ ವಿವಿಧ ಸೌಕರ್ಯಕ್ಕೆ ವ್ಯವಸ್ಥೆಗೊಳಿಸಲಾಗಿದೆ. ಭಕ್ತರ ನೂಕುನುಗ್ಗಲಾಗದಂತೆ ಸರತಿಯಲ್ಲಿ ವಿಶೇಷ ವ್ಯವಸ್ಥೆ ಅಣಿಗೊಳಿಸಲಾಗಿದೆ.

ಕಂಹಾಸುರ ಎಂಬ ರಾಕ್ಷಸನನ್ನು ಜಗಜ್ಜನನಿ ಮೂಕಾಂಬಿಕೆ ವಧಿಸಿದ ಸ್ಥಳವೇ ಮಾರಣಕಟ್ಟೆ ಎಂಬುದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಜಗನ್ಮಾತೆ ಅಸುರನನ್ನು ವಧಿಸುವಾಗ ಕೊನೆ ಕ್ಷಣದಲ್ಲಿ ಕಂಹಾಸುರನಿಗೆ ತನ್ನ ಹಿಂದಿನ ಜನ್ಮದ ಪುಣ್ಯಫಲದಿಂದ ರಕ್ಕಸ ಬುದ್ದಿ ತೊರೆದು ಅನನ್ಯ ಭಕ್ತಿಯಿಂದ ದೇವಿಯನ್ನು ಆರಾಧಿ ಸಿದ್ದರಿಂದ ಭಕ್ತಿಗೆ ಮೆಚ್ಚಿದ ದೇವಿ ಭೂತಗಳಿಗೆ ಒಡೆಯನಾಗಿ ಮಾರಣಕಟ್ಟೆ ಬ್ರಹ್ಮನೆಂದು ಪ್ರಸಿದ್ಧಿಯುಳ್ಳವನಾಗು, ನಿನ್ನ ಪರಿವಾರದವರು ಕೂಡ ಮಾರಣಕಟ್ಟೆಗಣಗಳು ಎಂದು ಪ್ರಸಿದ್ಧವಾಗಲಿ, ಮುಂದೆ ನಿನ್ನ ಕೊಂದ ಸ್ಥಳ ಮಾರಣಕಟ್ಟೆ ಎಂದು ಕಲಿಯುಗದಲ್ಲಿ ಖ್ಯಾತಿ ಪಡೆಯಲಿ ಎಂದು ಹರಿಸಿದ್ದಳು. ಮುಂದೆ ಕೊಲ್ಲೂರಿಗೆ ಬಂದ ಆದಿಶಂಕರಾಚಾರ್ಯರು ಇಲ್ಲಿಗೆ ಆಗಮಿಸಿ ಇಲ್ಲಿನ ಕಟ್ಟೆಯ ಮೂಲ ಸ್ಥಾನದಲ್ಲಿ ಶ್ರೀ ಚಕ್ರ ಪೀಠ ಸ್ಥಾಪಿಸಿದ್ದರಿಂದ ಸಕಲ ಭಕ್ತರ ಈಡೇರಿಕೆಯ ಕ್ಷೇತ್ರವಾಗಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇಗುಲ ಇಂದು ಪ್ರಸಿದ್ಧ ದೇವಾಲಯವಾಗಿದೆ.

Exit mobile version