Kundapra.com ಕುಂದಾಪ್ರ ಡಾಟ್ ಕಾಂ

ಬಿಜೆಪಿ ಸರಕಾರ ಭ್ರಷ್ಟಾಚಾರ, ದ್ವೇಷ ರಾಜಕಾರಣದಲ್ಲಿ ಮುಳುಗಿದೆ: ಬಿ. ಕೆ. ಹರಿಪ್ರಸಾದ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕೋವಿಡ್ ಸಂಕಷ್ಟದ ಕಾಲದಲ್ಲಿ, ಪ್ರಾಕೃತಿಕ ಅವಘಡ ನಡೆದಾಗ ಕರ್ನಾಟಕ ಜನತೆಯ ನೆರವಿಗೆ ಬಾರದ ಬಿಜೆಪಿ ಕೇಂದ್ರ ನಾಯಕರು ಚುನಾವಣೆ ಬಂದಾಗ ದಂಡಿಯಾಗಿ ಬರುತ್ತಿದ್ದಾರೆ. ಬಡವರ ಮನೆಯ ಮಕ್ಕಳನ್ನು ಧರ್ಮ ಸಂಘರ್ಷಕ್ಕೆ ನೂಕಿ ಆಟವಾಡುತ್ತಿದ್ದಾರೆ. ಕಮಿಷನ್ ವ್ಯವಹಾರದಲ್ಲಿ ಮುಳುಗಿರುವುದೇ ಕಳೆದ ನಾಲ್ಕು ವರ್ಷದ ಬಿಜೆಪಿ ಸರಕಾರದ ಸಾಧನೆಯೇ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಕುಟುಕಿದರು.

ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಭಾನುವಾರ ಯಡ್ತರೆಯಲ್ಲಿ ಆಯೋಜಿಸಲಾದ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸೂತ್ರದ ಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಕರ ನೇಮಕಾತಿ, ಅಭಿವೃದ್ಧಿ ಕಾಮಗಾರಿಯಲ್ಲಿ ಬಿಜೆಪಿ ಸರಕಾರದ ಭ್ರಷ್ಟಾಚಾರ ಯಥೇಚ್ಛವಾಗಿ ನಡೆದಿದೆ. ವಿಜಯಸಂಕಲ್ಪ ಯಾತ್ರೆ ಮಾಡಿರುವುದು ಭ್ರಷ್ಟಾಚಾರದಲ್ಲಿ ಸಾಧನೆ ಮಾಡಿದ್ದಕ್ಕಾಗಿಯೇ? ಎಂದು ಪ್ರಶ್ನಿಸಿದರು.

ಜನರ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲಿಗೆ ಲವ್ ಜಿಹಾದ್, ಧರ್ಮ ಸಂಘರ್ಷದ ಬಗ್ಗೆ ಮಾತನಾಡಿ ಎನ್ನುವ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ನಾಯಕರು ತಮ್ಮ ಮನೆಯ ಮಕ್ಕಳನ್ನು ಮುಂದೆ ಬಿಡಲಿ ಎಂದ ಅವರು, ಮಕ್ಕಳ ಹಾಗೂ ಯುವಕರ ಭವಿಷ್ಯ ಶಿಕ್ಷಣದಲ್ಲಿದೆಯಾ ಅಥವಾ ಅವರ ಚಾಕು ಚೂರಿ ಕೊಟ್ಟು ಅಪರಾಧಿಗಳನ್ನಾಗಿ ಮಾಡಬೇಕಾ ಎಂದು ನೀವು ಯೋಚಿಸಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಾಸ್ತಾವಿಕ ಮಾತನಾಡಿ ಜನರ ಸಮಸ್ಯೆಯನ್ನು ಅರಿಯುವ ಸಲುವಾಗಿ ಪ್ರಜಾಧ್ವನಿ ಯಾತ್ರೆ ಆಯೋಜಿಸಲಾಗಿದೆ. ಕಾಂಗ್ರೆಸ್ ಪ್ರನಾಳಿಕೆಯನ್ನು ಜನರಿಗೆ ತಲುಪಿಸುವುದು ಕಾಂಗ್ರೆಸ್ ಕಾರ್ಯಕರ್ತರ ಆದ್ಯತೆಯಾಗಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ ಯೋಜನೆ ಮೂಲಕ ರೂ.2000 ಹಾಗೂ ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ಉಚಿತ ವಿದ್ಯುತ್, ಕರಾವಳಿಯ ಹಿಂದುಳಿದ ವರ್ಗ ಹಾಗೂ ಮೀನುಗಾರರಿಗೆ ವಿಶೇಷ ಯೋಜನೆ ಹಾಕಿಕೊಳ್ಳಲಾಗಿದೆ. ಹಿಂದುಳಿದ ಸಮುದಾಯ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಮೆಡಿಕಲ್  ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಐದು ಹೊಳೆ ಜೊಡನೆ, 100 ಬೆಡ್ ಆಸ್ಪತ್ರೆ, ಬೈಂದೂರು ಏರ್‌ಪೋರ್ಟ್ ಎಲ್ಲಿದೆ. ಶಾಸಕರ ಕಛೇರಿ ಬಾಗಿಲು ತೆಗೆಯುತ್ತಿಲ್ಲ. ಐದು ವರ್ಷದಲ್ಲಿ ಅಕ್ರಮ ಸಕ್ರಮದ 2 ಮೀಟಿಂಗ್ ನಡೆದಿದೆ. 94ಸಿ ಹಕ್ಕುಪತ್ರ ಈತನಕ ಕೊಟ್ಟಿಲ್ಲ ಎಂದು ಆರೋಪಿಸಿದ ಅವರು, ತಹಶಿಲ್ದಾರರ ಕಛೇರಿ, ತಾಲೂಕು, ಐಟಿಐ ಕಾಲೇಜು, ಬಿಇಓ ಆಫೀಸ್, ಮೆಸ್ಕಾಂ ಉಪಕೇಂದ್ರ, ಕೆ‌ಎಸ್‌ಆರ್‌ಟಿಸಿ ಬಸ್ ಹಾಗೂ ಬಸ್ ನಿಲ್ದಾಣ ಮೊದಲಾದವರುಗಳು ತಾನು ಶಾಸಕನಾಗಿದ್ದಾಗ ಕಾಂಗ್ರೆಸ್ ಪಕ್ಷದ ನೀಡಿದ ಕೊಡುಗೆಯಾಗಿದೆ ಎಂದರು.

ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಎಂ.ಎ. ಗಫೂರ್, ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕಾಂಗ್ರೆಸ್ ಮುಖಂಡರಾದ ಎಸ್. ರಾಜು ಪೂಜಾರಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ವಾಸುದೇವ ಯಡಿಯಾಳ್, ಸಂಪಿಗೇಡಿ ಸಂಜೀವ ಶೆಟ್ಟಿ, ರಘುರಾಮ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು, ಗೌರಿ ದೇವಾಡಿಗ, ಸುಬ್ರಹ್ಮಣ್ಯ ಪೂಜಾರಿ, ಶೇಖರ ಪೂಜಾರಿ, ಮಹಾಲಿಂಗ ನಾಯ್ಕ್, ಮಾಧವ ಪೂಜಾರಿ, ಕೃಷ್ಣ ಪೂಜಾರಿ, ಸಂಜಯ್ ಪೂಜಾರಿ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತಿರಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿ, ಬೈಂದೂರು ನಗರ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗಾಣಿಗ ಬಂಕೇಶ್ವರ ವಂದಿಸಿದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜಗದೀಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Exit mobile version