Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆ & ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಭಗವಂತನ ಮೇಲೆ ನಂಬಿಕೆ, ವಿಶ್ವಾಸ ಇಟ್ಟು ಯಾವುದೇ ಕಾರ್ಯ ಮಾಡಿದರೆ ಅದರಲ್ಲಿ ಸಫಲತೆ ಕಾಣಲು ಸಾಧ್ಯವಿದೆ. ಜೀವನದಲ್ಲಿ ನಾವು ಮಾಡುವ ಸಂಪಾದನೆ, ಈ ದೇಹ ಯಾವುದೂ ಶಾಶ್ವತವಲ್ಲ. ಭಕ್ತಿ ಮಾರ್ಗದ ಮೂಲಕ ಜೀವನ ಪಾವನಗೊಳಿಸಿಕೊಳ್ಳಲು ನಿರಂತರವಾಗಿ ಭಗವಂತನ ಆರಾಧನೆ, ಉಪಾಸನೆ ಮಾಡಬೇಕು. ಧರ್ಮ ಸಂಗ್ರಹ ಮಾಡುತ್ತಾ ಜೀವನೋತ್ಸಾಹದಿಂದ ಮುನ್ನಡೆಯಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧರ್ಮಜಾಗೃತಿಯೊಂದಿಗೆ ಸಮಾಜದ ಅಭಿವೃದ್ಧಿ ಕಾರ್ಯ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಗಣೇಶ ಕಿಣಿ ಬೆಳ್ವೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ತಾಲೂಕು, ತ್ರಾಸಿ ವಲಯ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ತ್ರಾಸಿ ವಲಯ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ತ್ರಾಸಿ ವಲಯ, ಜನಜಾಗೃತಿ ವೇದಿಕೆ ತ್ರಾಸಿ ವಲಯ ಮತ್ತು ಭಜನಾ ಪರಿಷತ್ ತ್ರಾಸಿ ವಲಯ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ವೀರವಿಠಲ ಸಭಾಭವನದಲ್ಲಿ ಜರಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆ ಹಾಗೂ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಧಾರ್ಮಿಕ ಪ್ರವಚನ ನೀಡಿ ಮಾತನಾಡಿದ ಗಂಗೊಳ್ಳಿಯ ಪುರೋಹಿತರಾದ ಜಿ.ವೇದವ್ಯಾಸ ಕೆ.ಆಚಾರ್ಯ, ಸತ್ಯನಾರಾಯಣ ಪೂಜೆ ಆಚರಣೆಯಿಂದ ದು:ಖ ಶೋಕ ನಿವಾರಣೆಯಾಗಿ ಧನಧಾನ್ಯ ಸಮೃದ್ಧಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಚಿಂತನೆಗಳು ಕಡಿಮೆಯಾಗುತ್ತಿದ್ದು, ಜನರು ನಿರಂತರವಾಗಿ ಧಾರ್ಮಿಕ ಆಚರಣೆಗಳನ್ನು ಮಾಡುತ್ತಾ ಧಾರ್ಮಿಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಸಮಾಜದಲ್ಲಿ ಧರ್ಮ ಜಾಗೃತಿ ಆಗಬೇಕು ಎಂದರು.

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ತ್ರಾಸಿ ವಲಯ ಅಧ್ಯಕ್ಷ ಸದಾನಂದ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಯೋಜನೆಯ ಉತ್ತರಕನ್ನಡ ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ., ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಮಿತಿ ಗೌರವಾಧ್ಯಕ್ಷ ತಮ್ಮಯ್ಯ ದೇವಾಡಿಗ, ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ, ಬೈಂದೂರು ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ರಘುರಾಮ ಕೆ.ಪೂಜಾರಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಶುಭ ಹಾರೈಸಿದರು. ಇದೇ ಸಂದರ್ಭ ತ್ರಾಸಿ ವಲಯದ ೮ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಲಾಯಿತು. ಕೃಷಿ ಯಂತ್ರೋಪಕರಣ ಖರೀದಿ, ಸ್ವ ಉದ್ಯೋಗ, ಹಸಿರು ಇಂಧನ ಹಾಗೂ ಮಾಸಾಶನದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.

ಸ್ವಸಹಾಯ ಸಂಘಗಳ ತ್ರಾಸಿ ಒಕ್ಕೂಟದ ಅಧ್ಯಕ್ಷ ನಾಗರಾಜ ಖಾರ್ವಿ, ಧಾರ್ಮಿಕ ಪರಿಷತ್ ಜಿಲ್ಲಾ ಮಾಜಿ ಸದಸ್ಯ ನಾರಾಯಣ ಕೆ.ಗುಜ್ಜಾಡಿ, ಒಕ್ಕೂಟದ ಕೇಂದ್ರ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ತಾಲೂಕು ಯೋಜನಾಧಿಕಾರಿ ವಿನಾಯಕ ಪೈ ಸ್ವಾಗತಿಸಿದರು. ತ್ರಾಸಿ ವಲಯ ಮೇಲ್ವಿಚಾರಕ ಗಿರೀಶ ವರದಿ ವಾಚಿಸಿದರು. ಉಪ್ಪುಂದ ವಲಯ ಮೇಲ್ವಿಚಾರಕ ರವಿಶಂಕರ ಕಾರ್ಯಕ್ರಮ ನಿರ್ವಹಿಸಿದರು. ಗುಜ್ಜಾಡಿ ಸೇವಾಪ್ರತಿನಿಧಿ ನೀಲು ವಂದಿಸಿದರು.

ಗಂಗೊಳ್ಳಿ ಶ್ರೀ ಅಂಬಿಕಾ ದೇವಸ್ಥಾನದ ಅರ್ಚಕ ಜಿ.ವಿಠಲದಾಸ ಭಟ್ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆಯ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸದಾನಂದ ದೇವಾಡಿಗ ದಂಪತಿ ಹಾಗೂ ಪತ್ರಕರ್ತ ಬಿ.ರಾಘವೇಂದ್ರ ಪೈ ದಂಪತಿ ಮತ್ತು ಸುಮಾರು ೧೬೦ಕ್ಕೂ ಮಿಕ್ಕಿ ದಂಪತಿಗಳು ಸತ್ಯನಾರಾಯಣ ಪೂಜೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Exit mobile version