Kundapra.com ಕುಂದಾಪ್ರ ಡಾಟ್ ಕಾಂ

ಚಾರೋಡಿ ಮೇಸ್ತ ಸಮಾಜ ಸಮುದಾಯ ಭವನ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಚಾರೋಡಿ ಮೇಸ್ತ ಸಮಾಜದವರು ಬೆಣ್ಗೆರೆಯಲ್ಲಿ ಕಳೆದ ೪೮ ವರ್ಷಗಳಿಂದ ನಾಗಮಂಡಲೋತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಮೇಸ್ತ ಸಮಾಜ ಬಾಂಧವರಲ್ಲಿನ ವಿಶೇಷ ಧಾರ್ಮಿಕ ಪ್ರಜ್ಞೆ, ಒಗ್ಗಟ್ಟು, ಪ್ರೀತಿ, ಸಂಸ್ಕಾರ ಇದರ ಪ್ರತಿಫಲವಾಗಿ ಸುಂದರ ಸಮುದಾಯ ಭವನ ನಿರ್ಮಾಣಗೊಂಡಿದೆ. ಸಂಸದ ಬಿ.ವೈ.ರಾಘವೇಂದ್ರ ಅವರ ವಿಶೇಷ ಕಾಳಜಿಯಿಂದ ಸರಕಾರದಿಂದ ಸುಮಾರು ೨೦ ಲಕ್ಷ ಅನುದಾನವನ್ನು ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮುದಾಯ ಭವನದ ಅಭಿವೃದ್ಧಿಗೆ ೨೦ ಲಕ್ಷ ರೂ. ಅನುದಾನ ಒದಗಿಸಲು ನಿಮ್ಮೊಂದಿಗೆ ಕೈಜೋಡಿಸುವುದಾಗಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.

ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದ ವಠಾರದಲ್ಲಿ ಕರ್ನಾಟಕ ನೀರಾವರಿ ನಿಗಮದ ಸುಮಾರು ೨೦ ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ಚಾರೋಡಿ ಮೇಸ್ತ ಸಮಾಜ ಸಮುದಾಯ ಭವನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇವಸ್ಥಾನಗಳ ಅಭಿವೃದ್ಧಿ ಮತ್ತು ಜೀಣೋದ್ಧಾರ ಕಾರ್ಯಗಳಿಗೆ ಸುಮಾರು ೧೦ ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರದಿಂದ ಮಂಜೂರಾತಿ ದೊರೆತ ಬಳಿಕ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಅವರು, ಕಳೆದ ನಾಲ್ಕುವರೆ ವರ್ಷಗಳಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿದ್ದು, ಮುಂದಿನ ದಿನಗಳಲ್ಲಿ ಜನರು ಪುನ: ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.

ಬೆಣ್ಗೆರೆ ಶ್ರೀ ನಾಗ ದೇವಸ್ಥಾನದ ಅಧ್ಯಕ್ಷ ಉಮೇಶ ಎಲ್.ಮೇಸ್ತ, ಕಾರ್ಯದರ್ಶಿ ಶ್ರೀಧರ ಮೇಸ್ತ, ಗುಜ್ಜಾಡಿ ಗ್ರಾಮ ಪಂಚಾಯತ್ ಸದಸ್ಯ ಹರೀಶ ಮೇಸ್ತ, ಸಮಾಜದ ಹಿರಿಯರಾದ ಕೃಷ್ಣ ಮೇಸ್ತ, ಶ್ರೀ ಸುಬ್ರಹ್ಮಣ್ಯೇಶ್ವರ ಯುತ್ ಕ್ಲಬ್ ಅಧ್ಯಕ್ಷ ವಿಶ್ವನಾಥ ವಿ.ಮೇಸ್ತ, ಕಾರ್ಯದರ್ಶಿ ರಾಮದಾಸ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು.

Exit mobile version