Kundapra.com ಕುಂದಾಪ್ರ ಡಾಟ್ ಕಾಂ

ಬಸ್ ಪಲ್ಟಿಯಾಗಿ ಓರ್ವನ ಸಾವು, ಎಂಟು ಮಂದಿಗೆ ಗಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು,ಮಾ 29:
ಕೊಲ್ಲೂರು ಹಾಲ್ಕಲ್ ಜಂಕ್ಷನ್ ಇಳಿಜಾರಿನ ಬಳಿ ಬುಧವಾರ ಮುಂಜಾನೆ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಚರಂಡಿಗೆ ಪಲ್ಟಿಯಾಗಿ ಬಿದ್ದ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಒಬ್ಬ ಸಾವನ್ನಪ್ಪಿ ಎಂಟು ಜನ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ದುರ್ಘಟನೆಯಲ್ಲಿ ಸಾವನ್ನಪ್ಪಿದ ಪ್ರಯಾಣಿಕನನ್ನು ಗದಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಶಿರಹಟ್ಟಿ ನಿವಾಸಿ ರುದ್ರಪ್ಪ ಎಂಬುವರ ಪುತ್ರ ಬಸವರಾಜ್(22) ಎಂದು ಗುರುತಿಸಲಾಗಿದೆ. ಗಂಭಿರ ಗಾಯಗೊಂಡವರನ್ನು ಬಸ್ಸಿನಲ್ಲಿದ್ದ ರಂಗಪ್ಪ, ಗೀರೀಶ್, ಮನೋಜ್ ಕುಮಾರ್, ಮಲ್ಲೇಶ್, ದೇವೇಂದ್ರ, ಹಾಲಸ್ವಾಮಿ, ಗುರುನಾಥ, ಮಾಸ್ಟರ್ ಅಭಿಜಿತ್ ಎಂದು ಗುರುತಿಸಲಾಗಿದೆ.

ಸುಮಾರು 35ರಿಂದ 40 ಪ್ರಯಾಣಿಕರಿದ್ದ ದುರ್ಗಾಂಬಾ ಬಸ್ ಚಳ್ಳಕೆರೆಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿತ್ತು. ಬುಧವಾರ ಬೆಳಿಗ್ಗೆ ನಸುಕಿನಲ್ಲಿ ಸುಮಾರು 2.30 ಗಂಟೆಗೆ ಕೊಲ್ಲೂರು ಹಾಲ್ಕಲ್ ಜಂಕ್ಷನ್ ಇಳಿಜಾರಿನ ಬಳಿ ಬಸ್ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಬಸವರಾಜ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿದ್ದು, ಮೃತ ದೇಹವನ್ನು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದೆ.

ಗಂಭೀರ ಗಾಯಗೊಂಡವರನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆ, ಆದರ್ಶ ಆಸ್ಪತ್ರೆ ಹಾಗೂ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version